ADVERTISEMENT

ಯಕ್ಷಗಾನಕ್ಕೆ ಸೆನ್ಸರ್‌ ಮಂಡಳಿ ರಚನೆಯಾಗಲಿ : ಡಾ.ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2023, 5:08 IST
Last Updated 1 ಫೆಬ್ರುವರಿ 2023, 5:08 IST
ಹೆಬ್ರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ವತಿಯಿಂದ ಮುನಿಯಾಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಪಡುಕುಡೂರುಬೀಡು ಎಂ.ಡಿ.ಅಧಿಕಾರಿ ವೇದಿಕೆಯಲ್ಲಿ ಸೋಮವಾರ ನಡೆದ ಹೆಬ್ರಿ ತಾಲ್ಲೂಕು ೩ನೇ ಕನ್ನಡ ಸಾಹಿತ್ಯ ಸಮ್ಮೇಳನ " ಆರೋಹಣ" ನುಡಿಚೇತನದ ಅನಾವರಣ ಸಮಾರೋಪದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.
ಹೆಬ್ರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ವತಿಯಿಂದ ಮುನಿಯಾಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಪಡುಕುಡೂರುಬೀಡು ಎಂ.ಡಿ.ಅಧಿಕಾರಿ ವೇದಿಕೆಯಲ್ಲಿ ಸೋಮವಾರ ನಡೆದ ಹೆಬ್ರಿ ತಾಲ್ಲೂಕು ೩ನೇ ಕನ್ನಡ ಸಾಹಿತ್ಯ ಸಮ್ಮೇಳನ " ಆರೋಹಣ" ನುಡಿಚೇತನದ ಅನಾವರಣ ಸಮಾರೋಪದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.   

ಹೆಬ್ರಿ : ಯಕ್ಷಗಾನ ಕರಾವಳಿಯ ಕಲೆ ಮಾತ್ರ ಅಲ್ಲ, ರಾಜ್ಯದ ಕಲೆ, ಯಕ್ಷಗಾನದಲ್ಲಿ ಹೊಸತನ ಬರಬೇಕು, ಸಿನಿಮಾದಲ್ಲಿ ಸೆನ್ಸರ್‌ ಮಂಡಳಿ ರಚನೆ ಮಾಡಿ ಹೊಸತನ ನೀಡಬೇಕು, ಆ ಮೂಲಕ ಪ್ರಸಂಗ ಸಾಹಿತ್ಯ, ಪ್ರಸಂಗಕರ್ತರು, ಹಾಸ್ಯ ನಟ, ನಟರನ್ನು ಗುರುತಿಸುವ ಕೆಲಸ ಆಗಬೇಕು, ಆಗ ಯಕ್ಷಗಾನ ಸಮಗ್ರ ಕರ್ನಾಟಕದ ಕಲೆಯಾಗಿ ಉಳಿಯುತ್ತದೆ, ನಮ್ಮತನ ನಮ್ಮ ಕಲೆಯನ್ನು ನಾವೇ ಉಳಿಸಬೇಕು, ಆಗ ಹರಿಕಥೆ, ಹೂವಿನಕೋಲು ಮುಂತಅದ ಕಲೆಗಳು ಉಳಿಸುತ್ತದೆ, ಸರ್ಕಾರ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಗಂಭೀರ ಚಿಂತನೆ ನಡೆಸಬೇಕಿದೆ ಅಷ್ಟವಧಾನಿ ಡಾ.ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್ ಹೇಳಿದರು.

ಅವರು ಹೆಬ್ರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ವತಿಯಿಂದ ಮುನಿಯಾಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಪಡುಕುಡೂರುಬೀಡು ಎಂ.ಡಿ.ಅಧಿಕಾರಿ ವೇದಿಕೆಯಲ್ಲಿ ಸೋಮವಾರ ನಡೆದ ಹೆಬ್ರಿ ತಾಲ್ಲೂಕು ೩ನೇ ಕನ್ನಡ ಸಾಹಿತ್ಯ ಸಮ್ಮೇಳನ " ಆರೋಹಣ" ನುಡಿಚೇತನದ ಅನಾವರಣ ಸಮಾರೋಪದಲ್ಲಿ ಮಾತನಾಡಿದರು.

ನಮ್ಮ ಅಮ್ಮಂದಿರು ತಮ್ಮ ಮಕ್ಕಳ ಬಾಯಲ್ಲಿ ಮಮ್ಮಿಯ ಬದಲು ಅಮ್ಮ ಹೇಳಿಸಿ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕಿದೆ ಎಂದು ಡಾ.ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್ ಆಶಯ ವ್ಯಕ್ತ ಪಡಿಸಿದರು.
ಉಡುಪಿ ಜಿಲ್ಲೆಯನ್ನು ಆಯುರ್ವೇದ ವಲಯ ಎಂದು ಘೋಷಿಸಿ : ಮುನಿಯಾಲು ಗಣೇಶ ಶೆಣೈ.

ADVERTISEMENT

ನಮ್ಮದೂ ಒಂದು ದೇಶವಾ, ನಮ್ಮದು ಒಂದು ಭಾಷೆನಾ ಎಂದು ನಾವೇ ಹೀಗೇ ನಮ್ಮ ತಾಯಿಭಾಷೆಯನ್ನು ಹೀಯಾಳಿಸಬಾರದು, ನಮ್ಮ ಭಾಷೆಯನ್ನು ನಾವೇ ಉಳಿಸಿ ಬೆಳೆಸಬೇಕು ಎಂದು ಹೆಬ್ರಿ ತಾಲ್ಲೂಕು ೩ನೇ ಕನ್ನಡ ಸಾಹಿತ್ಯ ಸಮ್ಮೇಳನ " ಆರೋಹಣ" ನುಡಿಚೇತನದ ಅನಾವರಣದ ಸರ್ವಾಧ್ಯಕ್ಷ ಮುನಿಯಾಲು ಗಣೇಶ ಶೆಣೈ ಹೇಳಿದರು.

ಉಡುಪಿ ಜಿಲ್ಲೆ ಆಯುರ್ವೇದದ ವಿಷಯದಲ್ಲಿ ಬಹಳಷ್ಟು ಸಾಧನೆ ಮಾಡಿದೆ, ನಮ್ಮಲ್ಲಿ ಸಾಕಷ್ಟು ಸಸ್ಯಸಂಕುಲವಿದೆ, ಆಯುರ್ವೇದಕ್ಕೂ ಅಗತ್ಯವಿದೆ, ಸಸ್ಯಗಳನ್ನು ಸಂರಕ್ಷಿಸುವ ಕೆಲಸ ಆಗಬೇಕಿದೆ, ಉಡುಪಿ ಜಿಲ್ಲೆಯನ್ನು ಆಯುರ್ವೇದ ವಲಯ ಎಂದು ಘೋಷಿಸಬೇಕು, ಕೇಂದ್ರ ಸರ್ಕಾರದ ನೆರವಿನಿಂದ ಆಯುರ್ವೇದವನ್ನು ಬೆಳೆಸಲು ಸರ್ಕಾರ ಯತ್ನಿಸಬೇಕಿದೆ, ಜೊತೆಗೆ ಉಡುಪಿ ಜಿಲ್ಲೆಯಲ್ಲಿ ಆಯುರ್ವೇದ ವಿಶ್ವವಿದ್ಯಾಲಯ ಆಗಬೇಕೆಂದು ಮನವಿ ಮಾಡಿದರು.

ಮುನಿಯಾಲು ಗೋಧಾಮ, ಮುನಿಯಾಲು ಆಯುರ್ವೇದ ಆಸ್ಪತ್ರೆ ಮುನಿಯಾಲಿನ ಹೆಸರಿನ ಮೂಲಕ ವಿಶ್ವಖ್ಯಾತಿ ಪಡೆದಿದೆ, ಇದು ನಮ್ಮ ಮುನಿಯಾಲಿನ ಹೆಮ್ಮೆ. ವಿದೇಶದಲ್ಲಿ ಇದನ್ನೆಲ್ಲ ಕೇಳುವಾಗ ನಮ್ಮೂರಿನ ಬಗೆಗೆ ಖುಷಿಯಾಗುತ್ತದೆ ಎಂದು ಗಣೇಶ ಶೆಣೈ ಮೆಚ್ಚುಗೆ ವ್ಯಕ್ತಪಡಿಸಿದರು. ನಮ್ಮ ಜಿಲ್ಲೆಗೂ ವಿಮಾನ ನಿಲ್ದಾಣದ ಭಾಗ್ಯ ದೊರೆಯಲಿ ಎಂದು ಆಶಿಸಿದ ಮುನಿಯಾಲು ಗಣೇಶ ಶೆಣೈ ಕನ್ನಡದಲ್ಲಿ ಜಾಗತಿಕ ಮಟ್ಟದ ಸಾಹಿತ್ಯ ಬಂದಿದೆ, ಆದರೆ ಪುಸ್ತಕೋಧ್ಯಮ ಬಡಕಲಾಗಿದೆ, ಸಾಹಿತಿಗಳು ಅವರ ಪುಸ್ತಕಗಳನ್ನು ಅವರೇ ಪ್ರಕಟಿಸುವುದು ಶೋಭೆಯಲ್ಲ, ವರ್ಷಕ್ಕೆ ೩ ಸಾವಿರ ಪುಸ್ತಕಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ, ಗ್ರಂಥಾಲಯ ಎಂಬ ಅತ್ಯುತ್ತಮ ವ್ಯವಸ್ಥೆಯ ಮೂಲಕ ಇಡಿ ರಾಜ್ಯದಲ್ಲಿ ಕೃತಿಗಳು ದೊರಕುವಂತಾಗಿದೆ, ಆದರೆ ಸರ್ಕಾರಕ್ಕೆ ಗ್ರಂಥಾಲಯದ ಬಗ್ಗೆ ಹೆಚ್ಚಿನ ಆಸಕ್ತಿ ಕಾಣುತ್ತಿಲ್ಲ, ಕೆಲವು ವರ್ಷಗಳಿಂದ ಸರ್ಕಾರ ಸಗಟು ಖರೀದಿಯನ್ನು ಸರಿಯಾಗಿ ಮಾಡುತ್ತಿಲ್ಲ, ಖರೀದಿಸಿ ಪುಸ್ತಕಗಳಿಗೂ ಬೇಗ ಹಣದ ಸಂದಾಯ ಮಾಡುತ್ತಿಲ್ಲ, ಪ್ರಜೆಗಳಿಂದ ಸರ್ಕಾರ ಸಂಗ್ರಹಿಸುವ ಗ್ರಂಥಾಲಯ ತೆರಿಗೆಯನ್ನು ೨೦೦-೩೦೦ ಕೋಟಿಯನ್ನು ಗ್ರಂಥಾಲಯ ಇಲಾಖೆಗೆ ನೀಡಬೇಕು, ಆ ಮೂಲಕ ಪುಸ್ತಕೋದ್ಯಮವನ್ನು ಮುನ್ನಡೆಸಬೇಕು ಎಂದು ಮುನಿಯಾಲು ಗಣೇಶ ಶೆಣೈ ಒತ್ತಾಯಿಸಿದರು. ಕನ್ನಡವೇ ನನ್ನ ಉಸಿರು, ಮುನಿಯಾಲು ಸಮ್ಮೇಳನ ಅದ್ಭುತವಾಗಿದೆ ಎಂದರು.


ಕನ್ನಡ ಸಾಹಿತ್ಯ ಪರಿಷತ್‌ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ ಕನ್ನಡ ಮಾಧ್ಯಮ ಶಾಲೆಗಳು ಬಲಗೊಳ್ಳಬೇಕು, ಬದುಕು ಕಟ್ಟುವ ಕನ್ನಡ ಭಾಷೆಯನ್ನು ನಾವೆಲ್ಲರೂ ಸೇರಿ ಕಟ್ಟಿ ಬೆಳೆಸಬೇಕಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್‌ ಹೆಬ್ರಿ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿ ಮುನಿಯಾಲಿನವರ ಹೃದಯ ಶ್ರೀಮಂತಿಕೆಯಿಂದ ಸಮ್ಮೇಳನ ಯಶಸ್ವಿಯಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು. ವಿವಿಧ ಕ್ಷೇತ್ರಗಳ ಸಾಧಕರಾದ ಗೋಪಾಲ ಶೆಟ್ಟಿ ಮಡಾಮಕ್ಕಿ, ಸುಂದರಿ ಮುಳ್ಳುಗುಡ್ಡೆ, ರಾಮಣ್ಣ ಪೂಜಾರಿ ನಾಡ್ಪಾಲು, ಗೋಪಾಲ ಕುಲಾಲ್‌ ಮುನಿಯಾಲು, ರಾಜೇಂದ್ರ ಕಿಣಿ ಬೆಳ್ವೆ, ನಿತ್ಯಾನಂದ ಶೆಟ್ಟಿ ಶಿವಪುರ, ಡಿ.ಜಿ.ರಾಘವೇಂದ್ರ ದೇವಾಡಿಗ ಚಾರ, ರಾಧಾಕೃಷ್ಣ ನಾಯ್ಕ್‌ ಬೇಳಂಜೆ, ಸುಧನ್ವ ಮುದ್ರಾಡಿ, ಸಮ್ಮೇಳನದ ಸರ್ವಾಧ್ಯಕ್ಷ ಮುನಿಯಾಲು ಗಣೇಶ ಶೆಣೈ,ಪ್ರಜಾವಾಣಿ ಸಾಧಕ ಪ್ರಶಸ್ತಿ ಪಡೆದ ಮಾವಿನಕಟ್ಟೆ ಶಂಕರ ಶೆಟ್ಟಿ, ಸ್ವಾಗತ ಸಮಿತಿಯ ಅಧ್ಯಕ್ಷ ದಿನೇಶ ಪೈ, ಕಾರ್ಯಾಧ್ಯಕ್ಷ ಗೋಪಿನಾಥ ಭಟ್‌, ಸಂಚಾಲಕಿ ಜ್ಯೋತಿ ಹರೀಶ್‌, ಕನ್ನಡ ಸಾಹಿತ್ಯ ಪರಿಷತ್‌ ಹೆಬ್ರಿ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ಭಂಡಾರಿ ದಂಪತಿ, ಲಯನ್ಸ್‌ ಅಧ್ಯಕ್ಷ ಸೀತಾರಾಮ ಕಡಂಬ ಸಹಿತ ಸಮ್ಮೇಳನದ ಯಶಸ್ಸಿಗೆ ದುಡಿದ ಹಲವರನ್ನು ಗೌರವಿಸಲಾಯಿತು.

ವರಂಗ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಹೆಬ್ಬಾರ್‌, ಹೆಬ್ರಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಸಾದ್‌ ರಾವ್‌, ಮುನಿಯಾಲು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಆಚಾರ್ಯ, ಹೆಬ್ರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಉಮೇಶ್‌, ಮುನಿಯಾಲು ಲಯನ್ಸ್‌ ಕ್ಲಬ್‌ ಅಧ್ಯಕ್ಷ ಸೀತಾರಾಮ ಕಡಂಬ, ವರಂಗ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕಬ್ಬಿನಾಲೆ ಚಂದ್ರಶೇಖರ ಬಾಯರಿ, ರವಿರಾಜ್‌ ಕುಂಬಾಶಿ, ಭುಜಂಗ ಶೆಟ್ಟಿ ಪಡುಕುಡೂರು, ಟಿ.ಮಂಜುನಾಥ್‌ ಕಾಡುಹೊಳೆ, ಹರೀಶ ಪೂಜಾರಿ, ಮಹೇಶ ನಾಯ್ಕ್‌, ಹರ್ಷ ಶೆಟ್ಟಿ ಹೆಬ್ರಿ, ಸಾಹಿತ್ಯ ಪ[ರಿಷತ್‌ ಮತ್ತು ಸ್ವಾಗತ ಸಮಿತಿಯ ಪ್ರಮುಖರು, ಸ್ವಾಗತ ಸಮಿತಿಯ ಅಧ್ಯಕ್ಷ ದಿನೇಶ ಪೈ, ಕಾರ್ಯಾಧ್ಯಕ್ಷ ಗೋಪಿನಾಥ ಭಟ್‌, ಸಂಚಾಲಕಿ ಜ್ಯೋತಿ ಹರೀಶ್‌ ಉಪಸ್ಥಿತರಿದ್ದರು. ಪ್ರಕಾಶ ಪೂಜಾರಿ ಮಾತಿಬೆಟ್ಟು ಮತ್ತು ರಾಜೇಶ್‌ ಕುಡಿಬೈಲ್‌ ನಿರೂಪಿಸಿದರು. ಡಾ. ಪ್ರವೀನ್‌ ಕುಮಾರ್‌ ವಂದಿಸಿ ಜ್ಯೋತಿ ಹರೀಶ್‌ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.