ಹೊಳೆಹೊನ್ನೂರು: ಸಮೀಪದ ಗುಡುಮಗಟ್ಟೆಯ ಭದ್ರಾ ಉಪನಾಲೆಗೆ ಆಟವಾಡಲು ಹೋಗಿ ನಾಪತ್ತೆಯಾಗಿದ್ದ ಇಬ್ಬರು ಬಾಲಕರು ಶವವಾಗಿ ಪತ್ತೆಯಾಗಿದ್ದಾರೆ. ಭದ್ರಾ ಉಪನಾಲೆಯಲ್ಲಿ ಸೋಮವಾರ ರಾತ್ರಿ ಮಕ್ಕಳಿಬ್ಬರ ಮೃತದೇಹ ಪತ್ತೆಯಾಗಿವೆ. ಆನವೇರಿಯ ರಜತ್ ಹಾಗೂ ಉಡುಪಿ ಜಿಲ್ಲೆ ಕುಂದಾಪುರ ಮೂಲದ ರೋಹನ್ ಮೃತ ಬಾಲಕರು.
ಸೋಮವಾರ ಮಧ್ಯಾಹ್ನ ಗುಡುಮಗಟ್ಟೆಯ ಪರಿಚಯಸ್ಥ ಮಹಿಳೆಯೊಂದಿಗೆ ನಾಲೆಯಲ್ಲಿ ಆಟವಾಡಲು ತೆರಳಿದ ಬಾಲಕರು ಆಯಾ ತಪ್ಪಿ ನಾಲೆಗೆ ಬಿದ್ದು ನಾಪತ್ತೆಯಾಗಿದ್ದರು. ಆನವೇರಿ ಮಿಲ್ಟ್ರೀ ಹೋಟೆಲ್ ಮಾಲೀಕ ಉಮೇಶ್ ಶೆಟ್ಟಿ ದಂಪತಿಯ ಮಗ ರಜತ್ (10) ಮತ್ತು ಕುಂದಾಪುರದ ತೆಕ್ಕಟ್ಟೆ ನಿವಾಸಿ ನವೀನ್ ಶೆಟ್ಟಿ ಅವರ ಮಗ ರೋಹನ್ (15) ಮೃತ ಬಾಲಕರು. ರೋಹನ್ ರಜೆಗೆಂದು ಸಂಬಂಧಿಕರ ಮನೆಗೆ ಬಂದಿದ್ದ.
ಬಾಲಕನೊಬ್ಬ ಆಯಾ ತಪ್ಪಿ ಬಿದ್ದು ನೀರಿನ ಸೆಳೆಯಲ್ಲಿ ಈಜಲಾಗದೇ ಮುಳುಗಲು ಆರಂಭಿಸಿದ್ದಾನೆ. ರಕ್ಷಿಸಲು ನೀರಿಗಿಳಿದ ಮತ್ತೊಬ್ಬ ಬಾಲಕನೂ ನೀರಿನಲ್ಲಿ ಮುಳುಗಿದ್ದಾನೆ. ಸ್ಥಳದಲ್ಲಿ ಬಟ್ಟೆ ಮಾತ್ರ ಪತ್ತೆಯಾಗಿದ್ದವು.
ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಜಂಟಿ ಹುಡುಕಾಟ ನಡೆಸಿ ರಾತ್ರಿ 9.30ಕ್ಕೆ ಇಬ್ಬರ ಮೃತದೇಹಗಳನ್ನು ಪತ್ತೆ ಮಾಡಿದರು. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.