
ಉಡುಪಿ: ದೇವಪುತ್ರ ಏಸುಕ್ರಿಸ್ತರ ಜನ್ಮದಿನದ ಅಂಗವಾಗಿ ಜಿಲ್ಲೆಯಾದ್ಯಂತ ಗುರುವಾರ ಸಡಗರ, ಸಂಭ್ರಮದಿಂದ ಕ್ರಿಸ್ಮಸ್ ಆಚರಿಸಲಾಯಿತು.
ಜಿಲ್ಲೆಯ ವಿವಿಧ ಚರ್ಚ್ಗಳಲ್ಲಿ ಗುರುವಾರ ಬೆಳಿಗ್ಗೆ ಏಸುಕ್ರಿಸ್ತರ ಸಾಮೂಹಿಕ ಆರಾಧನೆ ನಡೆಯಿತು. ಹೆಚ್ಚಿನ ಚರ್ಚ್ಗಳಲ್ಲಿ ಬುಧವಾರ ರಾತ್ರಿ ಕ್ರಿಸ್ಮಸ್ ಪ್ರಯುಕ್ತ ವಿಶೇಷ ಬಲಿಪೂಜೆಗಳು ನಡೆದಿದ್ದವು. ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಅವರು ಕಲ್ಯಾಣಪುರ ಮಿಲಾಗ್ರಿಸ್ ಚರ್ಚ್ನಲ್ಲಿ ಬಲಿಪೂಜೆಯನ್ನು ಅರ್ಪಿಸಿದ್ದರು.
ನಗರದ ಶೋಕಮಾತಾ ಚರ್ಚಿನಲ್ಲಿ ಗುರುವಾರ ಧರ್ಮಗುರು ಚಾರ್ಲ್ಸ್ ಮಿನೇಜಸ್ ನೇತೃತ್ವದಲ್ಲಿ ಹಬ್ಬದ ವಿಶೇಷ ಬಲಿಪೂಜೆ ನೆರವೇರಿಸಿ, ಕ್ರಿಸ್ಮಸ್ ಸಂದೇಶ ನೀಡಲಾಯಿತು. ಅಲ್ಲದೆ ಬ್ರಹ್ಮಾವರ, ಮಲ್ಪೆ ಬಾರ್ಕೂರು, ಬಸ್ರೂರು, ಸೇರಿದಂತೆ ಜಿಲ್ಲೆಯ ವಿವಿಧ ಚರ್ಚ್ಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಕ್ರೈಸ್ತ ಬಾಂಧವರು ಮನೆಗಳಲ್ಲಿ ತಯಾರಿಸಿದ್ದ ವಿಶೇಷ ಸಿಹಿ ತಿನಿಸಾದ ಕುಸ್ವಾರ್ ವಿನಿಮಯ ಮಾಡಿಕೊಂಡರು. ಪರಸ್ಪರ ಕ್ರಿಸ್ಮಸ್ ಹಬ್ಬದ ಶುಭ ಕೋರಿ ಸಂಭ್ರಮಿಸಿದರು. ಮಧ್ಯಾಹ್ನ ಹಬ್ಬದೂಟವನ್ನು ಕುಟುಂಬ ಸದಸ್ಯರು, ಆತ್ಮೀಯರೊಂದಿಗೆ ಸೇರಿ ಸವಿದರು.
ಹಬ್ಬದ ಅಂಗವಾಗಿ ಹೊಸ ಬಟ್ಟೆಗಳನ್ನು ಧರಿಸಿದ್ದ ಮಕ್ಕಳು, ಚರ್ಚ್ ಆವರಣದಲ್ಲಿ ಸಂಭ್ರಮಿಸಿದರು. ಪರಸ್ಪರ ಕೇಕ್ ಹಾಗೂ ಉಡುಗೊರೆ ನೀಡುವ ಮೂಲಕ ಶುಭಾಶಯ ಕೋರಿದರು. ಕ್ರಿಸ್ಮಸ್ ದಿನದಂದು ಕೆಲವು ಚರ್ಚ್ಗಳಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕ್ರೈಸ್ತರಿಂದ ಪೂಜಾ ವಿಧಿ
ಬೈಂದೂರು: ಹೋಲಿಕ್ರಾಸ್ ಚಚ್ರ್ನಲ್ಲಿ ಕ್ರಿಸ್ಮಸ್ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಉಡುಪಿ ಧರ್ಮಪ್ರಾಂತ್ಯದ ಫಾ.ಸ್ಟೇಫನ್ ಫನಾಂರ್ಡಿಸ್ ಬೈಂದೂರಿನ ಧರ್ಮಗುರು ವಿನ್ಸೆಂಟ್ ಕುವೆಲ್ಲೊ ಪೃಥ್ವಿ ರೋಡ್ರಿಗಸ್ ರಾಯಲ್ ನಜರತ್ ಒಲಿವೆರ್ ನಜರೆತ್ ಜೋಸೆಫ್ ರೋಡ್ರಿಗಸ್ ನೇತೃತ್ವದಲ್ಲಿ ಹಬ್ಬವನ್ನು ಶ್ರದ್ಧೆಯಿಂದ ಆಚರಿಸಲಾಯಿತು. ಕ್ರೈಸ್ತರು ಪೂಜಾ ವಿಧಿ ನೆರವೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.