ADVERTISEMENT

‘ಕೊಂಕಣಿ ದೈನಂದಿನ ಭಾಷೆಯಾಗಲಿ’

ಉಡುಪಿ ಧರ್ಮಪ್ರಾಂತ್ಯದ ಕುಲಪತಿ ಸ್ಟ್ಯಾನಿ ಬಿ.ಲೋಬೊ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 13:59 IST
Last Updated 19 ಸೆಪ್ಟೆಂಬರ್ 2021, 13:59 IST
ಭಾನುವಾರ ಕೆಥೊಲಿಕ್‌ ಸಭಾ ಉಡುಪಿ ಪ್ರದೇಶದ 2020-21ನೇ ಸಾಲಿನ ವಾರ್ಷಿಕ ಮಹಾ ಸಭೆ, ಫ್ರಾನ್ಸಿಸ್‌ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ ಹಾಗೂ ಡೆನಿಸ್‌ ಡಿಸಿಲ್ವಾ ಸ್ಮಾರಕ ಲೇಖನ ಸ್ಪರ್ಧೆಯ ಪುರಸ್ಕಾರ ವಿತರಣಾ ಸಮಾರಂಭ ನಡೆಯಿತು.
ಭಾನುವಾರ ಕೆಥೊಲಿಕ್‌ ಸಭಾ ಉಡುಪಿ ಪ್ರದೇಶದ 2020-21ನೇ ಸಾಲಿನ ವಾರ್ಷಿಕ ಮಹಾ ಸಭೆ, ಫ್ರಾನ್ಸಿಸ್‌ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ ಹಾಗೂ ಡೆನಿಸ್‌ ಡಿಸಿಲ್ವಾ ಸ್ಮಾರಕ ಲೇಖನ ಸ್ಪರ್ಧೆಯ ಪುರಸ್ಕಾರ ವಿತರಣಾ ಸಮಾರಂಭ ನಡೆಯಿತು.   

ಉಡುಪಿ: ಯುವ ಸಮುದಾಯ ಮಾತೃ ಭಾಷೆಯನ್ನು ಮರೆತು ಪಾಶ್ಚಾತ್ಯ ಭಾಷೆಗಳತ್ತ ಹೆಚ್ಚಿನ ಒಲವು ತೋರಿಸುತ್ತಿರುವುದು ದುಃಖದ ಸಂಗತಿಯಾಗಿದ್ದು, ಮಾತೃಭಾಷೆ ದೈನಂದಿನ ಜೀವನದಲ್ಲಿ ಹೆಚ್ಚು ಬಳಕೆಯಾಗಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಕುಲಪತಿ ಹಾಗೂ ಉದ್ಯಾವರ ಚರ್ಚ್‌ನ ಧರ್ಮಗುರು ಸ್ಟ್ಯಾನಿ ಬಿ.ಲೋಬೊ ಹೇಳಿದರು.

ಭಾನುವಾರ ಕೆಥೊಲಿಕ್‌ ಸಭಾ ಉಡುಪಿ ಪ್ರದೇಶದ 2020-21ನೇ ಸಾಲಿನ ವಾರ್ಷಿಕ ಮಹಾ ಸಭೆ, ಫ್ರಾನ್ಸಿಸ್‌ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ ಹಾಗೂ ಡೆನಿಸ್‌ ಡಿಸಿಲ್ವಾ ಸ್ಮಾರಕ ಲೇಖನ ಸ್ಪರ್ಧೆಯ ಪುರಸ್ಕಾರ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ಕೊಂಕಣಿ ಪ್ರಿಯವಾದ ಭಾಷೆಯಾಗಿದ್ದರೂ ಅಲಂಕಾರಿಕಾ ಭಾಷೆಯಾಗಿ ಬದಲಾಗುತ್ತಿದೆ. ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗೆ ಭಾಷೆ ಸೀಮಿತವಾದಂತಿದ್ದು ಯುವ ಸಮುದಾಯ ಕೊಂಕಣಿ ಭಾಷೆಯತ್ತ ಅಕರ್ಷಣೆ ಕಳೆದುಕೊಳ್ಳುತ್ತಿರುವುದು ಬೇಸರದ ಸಂಗತಿ. ಕೊಂಕಣಿ ಬೆಳವಣಿಗೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.

ADVERTISEMENT

ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಚೇತನ್‌ ಲೋಬೊ ಅವರ ಚೇತನ ಚಿಂತನ ಕೃತಿಗೆ ಫ್ರಾನ್ಸಿಸ್‌ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ ನೀಡಿ ಗೌರವಿಸಲಾಯಿತು. ಡಾ.ಜೆರಾಲ್ಡ್‌ ಪಿಂಟೊ ಪ್ರಶಸ್ತಿ ಪುರಸ್ಕೃತರ ಪರಿಚಯ ನೀಡಿದರು. ಡೆನಿಸ್‌ ಡಿʼಸಿಲ್ವಾ ಸ್ಮಾರಕ ಲೇಖನ ಸ್ಪರ್ಧೆಯ ಬಹುಮಾನ ವಿತರಣೆ ಮಾಡಲಾಯಿತು.

ಉಡುಪಿ ಧರ್ಮಪ್ರಾಂತ್ಯದ ಉಜ್ವಾಡ್‌ ಪ್ರಕಾಶನ ಹೊರತಂದಿರುವ ಜೋಸೆಫ್‌ ಕ್ವಾಡ್ರಸ್‌ ಅವರ ವಿನೋದ ಬರಹಗಳ ಓಲ್ಡ್‌ ಮೆನ್ಸ್‌ ಕ್ಲಬ್‌ ಪುಸ್ತಕದ ಅನಾವರಣ ನಡೆಯಿತು. ಉಜ್ವಾಡ್‌ ಪತ್ರಿಕೆಯ ಸಂಪಾದಕರಾದ ರೊಯ್ಸನ್‌ ಫೆರ್ನಾಂಡಿಸ್‌ ಪುಸ್ತಕದ ಪರಿಚಯ ನೀಡಿದರು. ಕೆಥೊಲಿಕ್‌ ಸಭಾ ಸ್ಥಾಪಕ ಅಧ್ಯಕ್ಷರಾದ ಆಸ್ಕರ್‌ ಫರ್ನಾಂಡಿಸ್‌ ಅವರಿಗೆ ಸಂಘಟನೆಯ ಪರವಾಗಿ ಶೃದ್ಧಾಂಜಲಿ ಅರ್ಪಿಸಲಾಯಿತು. ಮಾಜಿ ಅಧ್ಯಕ್ಷರಾದ ಅಲ್ಫೋನ್ಸ್‌ ಡಿʼಕೋಸ್ತಾ ಆಸ್ಕರ್‌ ಫರ್ನಾಂಡಿಸ್‌ ಅವರಿಗೆ ನುಡಿನಮನ ಸಲ್ಲಿಸಿದರು.

ಅಧ್ಯಕ್ಷರಾದ ಮೇರಿ ಡಿʼಸೋಜಾ ಅಧ್ಯಕ್ಷತೆ ವಹಿಸಿದ್ದರು. ಮಹಾಸಭೆಯ ವರದಿಯನ್ನು ಸಹ ಕಾರ್ಯದರ್ಶಿ ಒಲಿವಿಯಾ ಡಿಮೆಲ್ಲೊ, ಕಾರ್ಯದರ್ಶಿ ಗ್ರೆಗೋರಿ ಪಿಕೆ ಡಿಸೋಜಾ ಮಂಡಿಸಿದರು. ಲೆಕ್ಕಪತ್ರ ಮಂಡನೆ ಹಾಗೂ ಮುಂದಿನ ವರ್ಷದ ಆಯವ್ಯಯ ಮಂಡನೆಯನ್ನು ಕೋಶಾಧಿಕಾರಿ ಜೆರಾಲ್ಡ್‌ ರೊಡ್ರಿಗಸ್‌ ಮಾಡಿದರು. ಮಾನಸ ಸಂಸ್ಥೆಯ ವರದಿಯನ್ನು ಅಧ್ಯಕ್ಷರಾದ ಹೆನ್ರಿ ಮಿನೇಜಸ್‌ ಮತ್ತು ಸಶಕ್ತ ಸಮುದಾಯ ಟ್ರಸ್ಟ್‌ ವರದಿಯನ್ನು ಅಧ್ಯಕ್ಷರಾದ ವಾಲ್ಟರ್‌ ಸಿರಿಲ್‌ ಪಿಂಟೊ ಮಂಡಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಆಧ್ಯಾತ್ಮಿಕ ನಿರ್ದೇಶಕರಾದ ಫರ್ಡಿನಾಂಡ್‌ ಗೊನ್ಸಾಲ್ವಿಸ್‌, ನಿಕಟಪೂರ್ವ ಅಧ್ಯಕ್ಷ ರಾಬರ್ಟ್‌ ಮಿನೇಜಸ್‌, ಮಾಜಿ ಅಧ್ಯಕ್ಷ ವಲೇರಿಯನ್‌ ಫೆರ್ನಾಂಡಿಸ್‌, ವಲಯ ಅಧ್ಯಕ್ಷರಾದ ಲವೀನಾ ಪಿರೇರಾ ಉಡುಪಿ, ಲೀನಾ ಮಚಾದೋ ಶಿರ್ವಾ, ಲೂಯಿಸ್‌ ಡಿಸೋಜಾ ಕಲ್ಯಾಣಪುರ, ಮೇಬಲ್‌ ಡಿಸೋಜ ಕುಂದಾಪುರ, ಸೊಲೋಮನ್‌ ಅಲ್ವಾರಿಸ್‌ ಕಾರ್ಕಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.