ADVERTISEMENT

ಕೃಷ್ಣಮಠದಲ್ಲಿ ಚೂರ್ಣೋತ್ಸವ, ಹಗಲು ಬ್ರಹ್ಮರಥೋತ್ಸವ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 16:18 IST
Last Updated 15 ಜನವರಿ 2022, 16:18 IST
ಉಡುಪಿಯ ಕೃಷ್ಣಮಠದಲ್ಲಿ ಶನಿವಾರ ವಾರ್ಷಿಕ ಚೂರ್ಣೋತ್ಸವ, ಹಗಲು ಬ್ರಹ್ಮರಥೋತ್ಸವ ನೆರವೇರಿತು.
ಉಡುಪಿಯ ಕೃಷ್ಣಮಠದಲ್ಲಿ ಶನಿವಾರ ವಾರ್ಷಿಕ ಚೂರ್ಣೋತ್ಸವ, ಹಗಲು ಬ್ರಹ್ಮರಥೋತ್ಸವ ನೆರವೇರಿತು.   

ಉಡುಪಿ: ಕೃಷ್ಣಮಠದಲ್ಲಿ ಶನಿವಾರ ವಾರ್ಷಿಕ ಚೂರ್ಣೋತ್ಸವ, ಹಗಲು ಬ್ರಹ್ಮರಥೋತ್ಸವ ಹಾಗೂ ಅವಭೃತ ಸ್ನಾನ ನೆರವೇರಿತು. ಅಷ್ಟಮಠಾಧೀಶರು ಹಾಗೂ ಭಕ್ತರು ಬ್ರಹ್ಮ ರಥ ಎಳೆದು ಭಕ್ತಿ ಸಮರ್ಪಿಸಿದರು.

ಆರಂಭದಲ್ಲಿ ಕೃಷ್ಣ ಮುಖ್ಯಪ್ರಾಣ ಉತ್ಸವ ಮೂರ್ತಿಯನ್ನು ಚಿನ್ನದ ಪಲಕ್ಕಿಯಲ್ಲಿ ತಂದು ಬ್ರಹ್ಮರಥದಲ್ಲಿ ಪ್ರತಿಷ್ಠಾಪಿಸಲಾಯಿತು.ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥರು ಮಧ್ವಮಂಟಪದಲ್ಲಿ ತೊಟ್ಟಿಲು ಪೂಜೆ ನೆರವೇರಿಸಿ, ಅಷ್ಟ ಮಠಾಧೀಶರಿಗೆ ಗಂಧಾದ್ಯುಪಚಾರ ಮಾಡಿ ಗೌರವಿಸಿದರು. ಬಳಿಕ ಮಾಲಿಕೆ ಮಂಗಳಾರತಿ ನಡೆಯಿತು.

ದೇವರಿಗೆ ಪೂಜೆ, ನೈವೇದ್ಯ, ಮಹಾ ಮಂಗಳಾರತಿ ನೇರವೇರಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥಬೀದಿಯ ಸುತ್ತಲೂ ಬ್ರಹ್ಮರಥ ಸಾಗಿಬಂತು. ಬಿರುದಾವಳಿ, ಡೋಲು, ಚಂಡೆ ಉತ್ಸವದ ಕಳೆ ಹೆಚ್ಚಿಸಿತ್ತು. ಚೂರ್ಣೋತ್ಸವದ ಬಳಿಕ ವಸಂತ ಪೂಜೆ, ಓಕಳಿ ಎರಚಿ, ಬಳಿಕ ಮಧ್ವ ಸರೋವರದಲ್ಲಿ ಕೃಷ್ಣ ಮುಖ್ಯಪ್ರಾಣ, ಹಾಗೂ ಉತ್ಸವ ಮೂರ್ತಿಗಳಿಗೆ ಅವಭೃತ ಸ್ನಾನ ನಡೆಯಿತು. ಕೋವಿಡ್ ಲೆಕ್ಕಿಸದೆ ನೂರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಭಾವಿ ಪರ್ಯಾಯ ಮಠಾಧೀಶರಾದ ವಿದ್ಯಾಸಾಗರ ತೀರ್ಥರು, ಪರ್ಯಾಯ ಅದಮಾರು ಮಠಾಧೀಶರಾದ ಈಶಪ್ರಿಯ ತೀರ್ಥ ಸ್ವಾಮೀಜಿ, ವಿಶ್ವಪ್ರಿಯತೀರ್ಥ ಸ್ವಾಮೀಜಿ, ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕಾಣಿಯೂರು ಮಠಾಧೀಶರಾದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಸೋದೆ ಮಠಾಧೀಶರಾದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಪಲಿಮಾರು ಕಿರಿಯ ಮಠಾಧೀಶರಾದ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ, ಶೀರೂರು ಮಠಾಧೀಶರಾದ ವೇದವರ್ಧನ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.