ADVERTISEMENT

ಸುಲಿಗೆ, ಮನೆ, ವಾಹನ ಕಳವು: ಮೂವರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 5:13 IST
Last Updated 7 ಆಗಸ್ಟ್ 2022, 5:13 IST
ಮಹಮ್ಮದ್ ಆರೀಫ್‌
ಮಹಮ್ಮದ್ ಆರೀಫ್‌   

ಕಾಪು: ವೃದ್ಧೆಯಿಂದ ಚಿನ್ನದ ಸರ ಕಳವು ಮಾಡಿದ್ದ, ಮನೆಯಲ್ಲಿ ಕಳವು ಮಾಡಿದ್ದ, ಬೈಕ್‌ಗಳನ್ನು ಕದ್ದಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಜ್ಪೆಯ ಮಹಮ್ಮದ್ ಆರೀಫ್‌ ಅಲಿಯಾಸ್ ಮುನ್ನಾ, ಮಂಗಳೂರಿನ ಕೇಂಜಾರು ಗ್ರಾಮದ ಅಡ್ಮೈಗುಡ್ಡೆಯಮಹಮ್ಮದ್ ಮುನೀರ್, ಬಜ್ಪೆಯ ಅಕ್ಬರ್‌ ಬಂಧಿತರು.

ಆರೋಪಿಗಳು ನಂದಿಕೂರು ಯುಪಿಸಿಎಲ್ ಬಳಿ ವೃದ್ದೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಸುಲಿಗೆ ಮಾಡಿದ್ದರು. ಉಚ್ಚಿಲ ಪಣಿಯೂರು ಮನೆಯಲ್ಲಿ ₹ 2.52 ಲಕ್ಷ ಕಳವು ಮಾಡಿದ್ದರು. ಪಡುಬಿದ್ರಿ, ಉಚ್ಚಿಲ, ಕಟಪಾಡಿಯಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದರು.

ADVERTISEMENT

ಮಹಮ್ಮದ್ ಆರೀಫ್‌ ವಿರುದ್ಧ ಬ್ರಹ್ಮಾವರ, ಮುಲ್ಕಿ, ಬಜ್ಪೆ, ಮಂಗಳೂರು ಗ್ರಾಮಾಂತರ ಠಾಣೆ, ಹಾಸನ ಠಾಣೆ ಸೇರಿ 18 ಪ್ರಕರಣ ದಾಖಲಾಗಿದ್ದು, ತಲೆ ಮರೆಸಿಕೊಂಡು ಓಡಾಡುತ್ತಿದ್ದ. ಮಹಮ್ಮದ್ ಮುನೀರ್ ಮೇಲೆ ಬ್ರಹ್ಮಾವರ, ಹಾಸನ ಸಿಟಿ ಠಾಣೆಯಲ್ಲಿ 2 ಪ್ರಕರಣ ಸೇರಿ 8 ಪ್ರಕರಣಗಳು ದಾಖಲಾಗಿದ್ದು ಈತ ಕೂಡ ತಲೆಮರೆಸಿಕೊಂಡಿದ್ದ. ಅಕ್ಬರ್ ಮೇಲೆ 2 ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ಮಾಹಿತಿ ನೀಡಿದರು.

ಆರೋಪಿಗಳಿಂದ ಎರಡೂವರೆ ಪವನ್ ಚಿನ್ನದ ಸರ, ಮೊಬೈಲ್ ಪೋನ್, ₹ 61,000 ನಗದು, 3 ದ್ವಿಚಕ್ರ ವಾಹನಗಳು ಹಾಗೂ ಆಟೋ ರಿಕ್ಷಾ, ಬೈಕ್‌ ಹಾಗೂ ₹ 2,99 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಎಸ್‌ಪಿ ಎನ್‌.ವಿಷ್ಣುವರ್ಧನ್‌, ಎಎಸ್‌ಪಿ ಎಸ್‌.ಟಿ.ಸಿದ್ದಲಿಂಗಪ್ಪ, ಡಿವೈಎಸ್‌ಪಿ ಎಸ್.ವಿಜಯ ಪ್ರಸಾದ್‌, ಕಾಪು ಇನ್‌ಸ್ಪೆಕ್ಟರ್ ಕೆ.ಸಿ.ಪೂವಯ್ಯ ನೇತೃತ್ವದಲ್ಲಿ ಪಡುಬಿದ್ರಿ ಪಿಎಸ್‌ಐ ಪ್ರಕಾಶ್ ಸಾಲ್ಯಾನ್, ಅಪರಾಧ ಪತ್ತೆ ತಂಡದ ಪ್ರವೀಣ ಕುಮಾರ್, ರಾಜೇಶ್‌, ಹೇಮರಾಜ್‌, ಸಂದೇಶ, ಸುಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.