ಉಡುಪಿ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾಗಿದ್ದ 19 ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 9 ಕೆ.ಜಿ 686 ಗ್ರಾಂ ಗಾಂಜಾ, 410 ಗ್ರಾಂ ಚರಸ್ ಅನ್ನು ಪಡುಬಿದ್ರಿಯ ಆಯುಷ್ ಎನ್ವಿರೊಟೆಕ್ ಸಂಸ್ಥೆಯಲ್ಲಿ ಭಾನುವಾರ ನಾಶಪಡಿಸಲಾಯಿತು.
ಮಣಿಪಾಲ ಹಾಗೂ ಸೆನ್ ಠಾಣೆಯಲ್ಲಿ ದಾಖಲಾಗಿದ್ದ 4 ಪ್ರಕರಣ, ಕುಂದಾಪುರ ಹಾಗೂ ಕಾಪು ಠಾಣೆಯಲ್ಲಿ 3 ಹಾಗೂ ಕೋಟ ಹಾಗೂ ಗಂಗೊಳ್ಳಿ ಠಾಣೆಯಲ್ಲಿ ತಲಾ 2, ಮಲ್ಪೆ ಠಾಣೆಯಲ್ಲಿ ದಾಖಲಾಗಿದ್ದ ಒಂದು ಪ್ರಕರಣದಲ್ಲಿ ವಶಪಡಿಸಿಕೊಂಡಿದ್ದ ₹ 3,27,135 ಮೌಲ್ಯದ ಮಾದಕವಸ್ತುಗಳನ್ನು ನಾಶ ಮಾಡಲಾಯಿತು.
19 ಪ್ರಕರಣಗಳಲ್ಲಿ ನಾಲ್ಕು ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದ್ದು, ನಾಲ್ಕು ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಗೊಂಡಿದ್ದಾರೆ. 1 ಪ್ರಕರಣದಲ್ಲಿ ಆರೋಪಿ ಮೃತನಾಗಿದ್ದಾನೆ. 8 ಪ್ರಕರಣಗಳು ವಿಚಾರಣೆಯ ಹಂತದಲ್ಲಿದ್ದು, 2 ಪ್ರಕರಣಗಳು ತನಿಖೆಯಲ್ಲಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸಂದರ್ಭ ಎಸ್ಪಿ ವಿಷ್ಣುವರ್ಧನ್ ಮಾತನಾಡಿ,ಉಡುಪಿಜಿಲ್ಲೆಯನ್ನು ಮಾದಕವ್ಯಸನಮುಕ್ತಜಿಲ್ಲೆಯನ್ನಾಗಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಹೆಚ್ಚುವರಿ ಎಸ್ಪಿ ಸಿದ್ದಲಿಂಗಪ್ಪ, ಡಿವೈಎಸ್ಪಿ ಸುಧಾಕರ್ ಸದಾನಂದ ನಾಯ್ಕ್, ಕಾರ್ಕಳ ಉಪ ವಿಭಾಗದ ಡಿವೈಎಸ್ಪಿ ವಿಜಯ ಪ್ರಸಾದ್, ಸಿಇಎನ್ ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್, ಕಾಪು ಇನ್ಸ್ಪೆಕ್ಟರ್ ಪ್ರಕಾಶ್ ಮಣಿಪಾಲ ಠಾಣೆ ಪಿಎಸ್ಐ ಸುಧಾಕರ ತೋನ್ಸೆ, ಕೋಟ ಠಾಣೆ ಪಿಎಸ್ಐ ಬಿ.ಇ.ಮಧು, ಕಾಪು ಪಿಎಸ್ಐ ಭರತೇಶ್, ಗಂಗೊಳ್ಳಿ ಪಿಎಸ್ಐ ವಿನಯ್ ಕೊರ್ಲಹಳ್ಳಿ, ಮಲ್ಪೆ ಪಿಎಸ್ಐ ಶಕ್ತಿವೇಲು, ಪಡುಬಿದ್ರಿ ಪಿಎಸ್ಐ ಪುರುಷೋತ್ತಮ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.