ADVERTISEMENT

ಮನೆ ಖಾಲಿ ಮಾಡಿಸಿದರೆ ಕ್ರಿಮಿನಲ್‌ ಕೇಸ್‌

ಕೂಲಿ ಕಾರ್ಮಿಕರ ಬಳಿ 2 ತಿಂಗಳು ಬಾಡಿಗೆ ಪಡೆಯುವಂತಿಲ್ಲ: ಮಾಲೀಕರಿಗೆ ಡಿಸಿ ಜಗದೀಶ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 12:37 IST
Last Updated 31 ಮಾರ್ಚ್ 2020, 12:37 IST
ಜಿ. ಜಗದೀಶ್‌
ಜಿ. ಜಗದೀಶ್‌   

ಉಡುಪಿ: ಶೆಡ್‌ ಹಾಗೂ ಮನೆಗಳಲ್ಲಿ ವಾಸವಿರುವ ಕೂಲಿ ಕಾರ್ಮಿಕರನ್ನು ಮನೆಯ ಮಾಲೀಕರು ಹೊರ ಹಾಕಿದರೆ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯಲ್ಲಿಸಾವಿರಾರು ಕೂಲಿ ಕಾರ್ಮಿಕರು ಶೆಡ್‌ ಹಾಗೂ ಮನೆಗಳಲ್ಲಿ ವಾಸವಿದ್ದು ಅವರನ್ನು ಬಲವಂತವಾಗಿ ಹೊರಹಾಕುತ್ತಿರುವ ಕುರಿತು ದೂರುಗಳು ಬರುತ್ತಿವೆ. ಮಾಲೀಕರು ಮನೆ ಖಾಲಿಮಾಡಿಸಿದರೆ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

ಎಲ್ಲೆಡೆ ಕೊರೊನಾ ವ್ಯಾಪಕವಾಗಿರುವುದರಿಂದ ಕೂಲಿ ಕಾರ್ಮಿಕರು ತಮ್ಮ ಸ್ವಂತ ಊರುಗಳಿಗೆ ತೆರಳಲು ನಿರ್ಬಂಧ ವಿಧಿಸಲಾಗಿದೆ. ಹಾಗಾಗಿ, ಕೂಲಿ ಕಾರ್ಮಿಕರ ಮನೆಗಳನ್ನು ಖಾಲಿ ಮಾಡಿಸಬಾರದು. ಜತೆಗೆ, ಮಾರ್ಚ್‌ ಹಾಗೂ ಏಪ್ರಿಲ್‌ ತಿಂಗಳ ಬಾಡಿಗೆಯನ್ನೂ ಪಡೆಯಬಾರದು ಎಂದು ಡಿಸಿ ನಿರ್ದೇಶನ ನೀಡಿದ್ದಾರೆ.

ADVERTISEMENT

ಕಾರ್ಖಾನೆ ಹಾಗೂ ಕಟ್ಟಡಗಳಲ್ಲಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರಿಗೆ ಊಟಕ್ಕೆ ತೊಂದರೆಯಾಗಿರುವ ವಿಚಾರ ಗಮನಕ್ಕೆ ಬಂದಿದ್ದು, ಕಾರ್ಮಿಕರಿಗೆ ಅಗತ್ಯವಿರುವ ಆಹಾರ ಸಾಮಗ್ರಿಗಳನ್ನು ಕಾರ್ಖಾನೆ ಮಾಲೀಕರು ಹಾಗೂ ಕಟ್ಟಡ ಮಾಲೀಕರೇ ಒದಗಿಸಬೇಕು. ಆದೇಶ ಪಾಲಿಸದಿದ್ದರೆ ಕಠಿಣ ಕ್ರಮ ಜರುಗಿಸಲಾಗುವುದು.

ತೊಂದರೆಯಾದರೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ರಾಮ್‌ಜಿ ನಾಯ್ಕ್– 9480092738, ಜಿಲ್ಲಾ ಕಾರ್ಮಿಕ ಅಧಿಕಾರಿ ಬಾಲಕೃಷ್ಣ –9448334324, ಕಾರ್ಮಿಕ ನಿರೀಕ್ಷಕರಾದ ಪ್ರವೀಣ್ ಕುಮಾರ್ 8792638806 ಅವರಿಗೆ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಹಸಿವಿನಿಂದ ಬಳಲುತ್ತಿರುವವರಿಗೆ ವಸತಿ ಮತ್ತು ಊಟೋಪಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ತಗುಲುವ ವೆಚ್ಚವನ್ನು ಧಾರ್ಮಿಕ ಧತ್ತಿ ಇಲಾಖೆ ವ್ಯಾಪ್ತಿಯಡಿ ಬರುವ ಅಂಬಲಪಾಡಿಯ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನ, ಕಾಪುವಿನ ಹೊಸ ಮಾರಿಗುಡಿ ದೇವಸ್ಥಾನ, ದುರ್ಗಾ ಪರಮೇಶ್ವರಿ ದೇವಸ್ಥಾನ ಮಂದಾರ್ತಿ, ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು, ದುರ್ಗಾ ಪರಮೇಶ್ವರಿ ದೇವಸ್ಥಾನ ಮುಂಡ್ಕೂರು, ಅನಂತ ಪದ್ಮನಾಭ ಮತ್ತು ಅರ್ಧ ನಾರೀಶ್ವರ ದೇವಸ್ಥಾನ ಹೆಬ್ರಿ ದೇವಾಲಯಗಳ ನಿಧಿಯಿಂದ ಭರಿಸಬೇಕು.

ಆಯಾ ತಾಲ್ಲೂಕಿನ ಅವಶ್ಯಕತೆಗೆ ಅನುಗುಣವಾಗಿ ತಹಶೀಲ್ದಾರ್‌ಗಳು ದೇವಾಲಯಗಳ ಆಡಳಿತಾಧಿಕಾರಿ, ಕಾರ್ಯ ನಿರ್ವಹಣಾಧಿಕಾರಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು, ಆಡಳಿತ ಮೊಕ್ತೇಸರರು ಕ್ರಮ ತೆಗೆದುಕೊಳ್ಳಬೇಕು ಎಂದು ಡಿಸಿ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.