ಉಡುಪಿ: ಕೋವಿಡ್ ಲಸಿಕೆಯ ಬಗ್ಗೆಯೂ ಅಪಪ್ರಚಾರ ಮಾಡುತ್ತಿರುವುದು ದುರ್ದೈವದ ಸಂಗತಿ. ದೇಶದಲ್ಲಿ ತಯಾರಾದ ಔಷಧಿಯ ಬಗ್ಗೆ ಅಪಪ್ರಚಾರ ಮಾಡುವುದರ ಹಿಂದೆ ಷಡ್ಯಂತ್ರ ಅಡಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಟೀಕಿಸಿದರು.
ನಗರದಲ್ಲಿ ಮಂಗಳವಾರ ಜನಸೇವಕ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನರು ಕೋವಿಡ್ ಲಸಿಕೆ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಆದರೆ, ಕೆಲವು ಪಕ್ಷಗಳಿಗೆ ವಿಶ್ವಾಸವಿಲ್ಲ. ಅಂಥವರನ್ನು ಜನರು ದೇಶದ ರಾಜಕಾರಣದಿಂದ ಅಳಿಸಿ ಹಾಕಲಿದ್ದಾರೆ. ದೇಶದಲ್ಲಿ ಲಸಿಕೆ ತಯಾರಾದರೆ ಅವರಿಗೆ ನಂಬಿಕೆ ಬರುತ್ತಿಲ್ಲ. ದೇಶದ ವಿಜ್ಞಾನಿಗಳ ಮೇಲೆಯೂ ವಿಶ್ವಾಸವಿಲ್ಲ. ಲಸಿಕೆ ಇಟಲಿಯಿಂದ ಬಂದಿದ್ದರೆ, ಉತ್ತಮ ಲಸಿಕೆ ಎಂದು ಪ್ರಮಾಣಪತ್ರ ಕೊಡುತ್ತಿದ್ದರು ಎಂದು ಪಕ್ಷದ ಹೆಸರೇಳದೆ ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಲಸಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಮೊದಲ ಹಂತದಲ್ಲಿಆರೋಗ್ಯ ಕಾರ್ಯಕರ್ತರಿಗೆ, ಬಳಿಕ 50 ವರ್ಷ ಮೇಲ್ಪಟ್ಟರಿಗೆ ಕೋವಿಡ್ ಲಸಿಕೆ ಹಾಕಲಾಗುವುದು. ಲಸಿಕೆ ಹಾಕುವ ಪ್ರಕ್ರಿಯೆಯನ್ನು ಎಚ್ಚರಿಕೆಯಿಂದ ಮಾಡಲಾಗುವುದು ಎಂದರು.
ಬುಧವಾರ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಬಿಜೆಪಿಯಲ್ಲಿ ಯೋಗ್ಯತೆ ಇರುವವರು ಬಹಳಷ್ಟು ಮಂದಿ ಇದ್ದಾರೆ, ಆದರೆ ಸಚಿವರಾಗುವ ಯೋಗ ಯಾರಿಗಿದೆ ಎಂಬ ಪ್ರಶ್ನೆಗೆ ಶೀಘ್ರ ಉತ್ತರ ಸಿಗಲಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.