ಉಡುಪಿ: ಜಿಲ್ಲೆಯಲ್ಲಿ ಆನ್ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈಚೆಗೆ ನ್ಯಾಪ್ಟಾಲ್ ಕಂಪೆನಿ ಹೆಸರಿನಲ್ಲಿ ವಂಚಕರು ಕೆ.ನಾಗರಾಜ ಭಟ್ ಅವರಿಗೆ ₹ 26,47,650 ವಂಚಿಸಿದ್ದಾರೆ.
ವಂಚನೆ ನಡೆದಿದ್ದು ಹೇಗೆ?
ಮಾರ್ಚ್ 29, 2019ರಲ್ಲಿ ನಾಗರಾಜ್ ಭಟ್ ಅವರ ವಿಳಾಸಕ್ಕೆ ನ್ಯಾಪ್ಟಾಲ್ ಕಂಪೆನಿಯ ಹೆಸರಿನಲ್ಲಿ ಸ್ಕ್ರಾಚ್ ಕೂಪನ್ ಬಂದಿತ್ತು. ಅದರಲ್ಲಿ ₹ 12 ಲಕ್ಷ ಬಹುಮಾನ ಗೆದ್ದಿರುವುದಾಗಿ ತಿಳಿಸಲಾಗಿತ್ತು. ಬಳಿಕ ನಾಗರಾಜ್ ಭಟ್ ಪತ್ರದಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ,ಬಹುಮಾನದ ಹಣ ಪಡೆಯಬೇಕಾದರೆ ನೋಂದಣಿ ಶುಲ್ಕ ಪಾವತಿಸುವಂತೆ ತಿಳಿಸಿದ ವಂಚಕರು ₹ 12,000 ನಗದನ್ನು ಖಾತೆಗೆ ಹಾಕಿಸಿಕೊಂಡಿದ್ದರು.
ಬಳಿಕ ಆರೋಪಿಗಳಾದ ಅಮಿತ್ ಬಿಸ್ವಾಸ್, ಚೇತನ್ ಕುಮಾರ್ ಬೇರೆ ಬೇರೆ ಮೊಬೈಲ್ ನಂಬರ್ಗಳಿಂದ ಕರೆಮಾಡಿ ಜಿಎಸ್ಟಿ, ತೆರಿಗೆ, ಪರಿಷ್ಕರಣ ಶುಲ್ಕ ಹೀಗೆ ಏ.4, 2019ರಿಂದ ಇಲ್ಲಿಯವರೆಗೂ ವಿವಿಧ ಬ್ಯಾಂಕ್ ಖಾತೆಗಳಿಗೆ ₹ 26,47,650 ಜಮೆ ಮಾಡಿಸಿಕೊಂಡಿದ್ದಾರೆ. ಕೊನೆಗೆ, ನಾಗರಾಜ್ ಭಟ್ ಅವರಿಗೆ ಮೋಸ ಹೋಗಿರುವುದು ಅರಿವಾಗಿ ಸೆನ್ ಠಾಣೆಗೆ ದೂರು ನೀಡಿದ್ದಾರೆ. ವಂಚಕರ ವಿರುದ್ಧ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.