ಉಡುಪಿ: ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆ, ಶಿಕ್ಷಣದ ಗುಣಮಟ್ಟ ಹೆಚ್ಚಳ ಸೇರಿದಂತೆ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ ಶಿಕ್ಷಣ ಇಲಾಖೆ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಅದರ ಭಾಗವಾಗಿ ಬುಧವಾರ ಡಿಡಿಪಿಐ ಎನ್.ಎಚ್.ನಾಗೂರ ನೇತೃತ್ವದ ಅಧಿಕಾರಿಗಳ ತಂಡ ವಿದ್ಯಾರ್ಥಿಗಳ ಮನೆಮನೆಗೆ ಭೇಟಿನೀಡಿ ಮಕ್ಕಳ ಅಧ್ಯಯನವನ್ನು ಖುದ್ದು ಪರಿಶೀಲನೆ ನಡೆಸಿತು.
ಬನ್ನಂಜೆಯಲ್ಲಿರುವ ಮೆಟ್ರಿಕ್ ಪೂರ್ವ ಬಾಲಕಿಯರ ಹಿಂದುಳಿದ ವರ್ಗಗಳ ವಸತಿ ನಿಲಯಕ್ಕೆ ಭೇಟಿ ನೀಡಿದ ತಂಡ ಬಾಲಕಿಯರ ಜತೆ ಚರ್ಚೆ ನಡೆಸಿತು. ಬಳಿಕ ಅಧ್ಯಯನಕ್ಕೆ ಪೂರಕವಾದ ವಿಚಾರಗಳನ್ನು ತಿಳಿಹೇಳಿತು. ಬಳಿಕ ಉಡುಪಿಯ ಸರ್ಕಾರಿ ಬೋರ್ಡ್ ಪ್ರೌಢಶಾಲೆ ವ್ಯಾಪ್ತಿಯ ಎಸ್ಸೆಸ್ಸೆಲ್ಸಿ ಮಕ್ಕಳ ಪಾಲಕರ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಪರೀಕ್ಷೆ ಹತ್ತಿರವಾಗುತ್ತಿದ್ದು, ಹೆಚ್ಚು ಗಮನ ಕೇಂದ್ರೀಕರಿಸಬೇಕು, ಓದಿದ ವಿಚಾರಗಳನ್ನು ಮನನ ಮಾಡಿಕೊಳ್ಳಬೇಕು, ಮನೆಯಲ್ಲಿ ಇರುವ ಅವಧಿಯನ್ನು ಓದಿಗೆ ಪೂರಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದ ಡಿಡಿಪಿಐ, ಪಾಲಕರಿಗೆ ಮಕ್ಕಳ ಕಲಿಕೆಗೆ ಸಹಕಾರ ನೀಡುವಂತೆ, ಒತ್ತಡ ಹೇರದಂತೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ತಿಳಿಸಿದರು.
ಉಡುಪಿ ಬೋರ್ಡ್ ಹೈಸ್ಕೂಲ್ ಮುಖ್ಯ ಶಿಕ್ಷಕ ಸುರೇಶ್ ಭಟ್, ಉಡುಪಿ ಶಿಕ್ಷಣ ಸಂಯೋಜಕ ಪವನಕುಮಾರ, ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕ ನಾಗರಾಜ ಇದ್ದರು.
‘ಹಿಂದಿ ಫೋನ್ ಇನ್ 12ರಂದು
ಶಿಕ್ಷಣ ಇಲಾಖೆಯಿಂದ ನಡೆಯುತ್ತಿರುವ ಫೋನ್ ಇನ್ ಕಾರ್ಯಕ್ರಮ ಮುಂದುವರಿದಿದ್ದು, ಫೆ.12ರಂದು ಸಂಜೆ 5 ರಿಂದ ರಾತ್ರಿ 7ರವರೆಗೆ ಬೈಂದೂರು ಕಂಬದಕೋಣೆ ಸಾಂದೀಪನಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಫೋನ್ ಇನ್ ಕಾರ್ಯಕ್ರಮ ನಡೆಯಲಿದೆ.
ವಿದ್ಯಾರ್ಥಿಗಳು ಹಿಂದಿ ವಿಷಯದ ಕಲಿಕಾ ಸಮಸ್ಯೆಗಳ ಬಗ್ಗೆ ಗೋಪಾಲ ಮೊಗೇರ: 9844663347, ರವೀಂದ್ರ: 7019492679, ಧಮೇಂದ್ರ ಹಳೇಮಠ್: 9448679151, ವಿನೋದ್ ಚವಾಣ್: 7019953395, ರಜನಿ: 8660278320, ವರ್ಷಾ: 7899705422 ಅವರ ಮೊಬೈಲ್ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಪರೀಕ್ಷಾ ಸಿದ್ಧತೆ, ಇತರೆ ಪ್ರಶ್ನೆಗಳಿಗೆ 9448999353 ಸಂಪರ್ಕಿಸಬಹುದು ಎಂದು ಡಿಡಿಪಿಐ ಎನ್.ಎಚ್.ನಾಗೂರ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.