
ಕೋಟ (ಬ್ರಹ್ಮಾವರ): ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರು ಸ್ವಾವಲಂಬಿ ಬದುಕು ನಡೆಸುತ್ತಿದ್ದು, ಇದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಕೋಟ ಮಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ ಎಚ್. ಕುಂದರ್ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕೋಟ ವಲಯ ಮಣೂರು ರಾಜಲಕ್ಷ್ಮೀ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ, ಕೋಟ ವಲಯಗಳ ಪದಗ್ರಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಮನೆಯಿಂದಲೇ ಹೊರಗೆ ಬಾರದಿದ್ದ ಮಹಿಳೆಯರು ಇಂದು ಯೋಜನೆಯಿಂದ ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ಯೋಜನೆ ಮಹಿಳೆಯರ ಉನ್ನತಿಗೆ ಮತ್ತಷ್ಟು ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸಲಿ ಎಂದು ಹೇಳಿದರು.
ಕೋಟ ವಲಯದ ವಿವಿಧ ಒಕ್ಕೂಟಗಳ ಅಧ್ಯಕ್ಷರಾದ ಗೀತಾ, ಸುಮತಿ, ರೇವತಿ ಶೆಟ್ಟಿ, ಮಾಲಿನಿ, ಲಲಿತಾ ಭಾಸ್ಕರ್, ಸವಿತಾ, ಜಯಂತಿ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಕೋಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಬಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಜನಸೇವಾ ಟ್ರಸ್ಟ್ನ ಮೂಡುಗಿಳಿಯಾರು ಘಟಕದ ಅಧ್ಯಕ್ಷ ವಸಂತ ಗಿಳಿಯಾರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ನಾಗರಾಜ ಶೆಟ್ಟಿ, ಶಿಕ್ಷಕ ನರೇಂದ್ರ ಕುಮಾರ್ ಕೋಟ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕೋಟ ವಲಯ ಅಧ್ಯಕ್ಷ ಎಂ. ಜಯರಾಮ ಶೆಟ್ಟಿ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ವಲಯ ಅಧ್ಯಕ್ಷ ರವೀಂದ್ರ ಆಚಾರ್, ಯೋಜನೆಯ ಕೋಟ ವಲಯ ಅಧ್ಯಕ್ಷ ದಿನೇಶ ಭಾಗವಹಿಸಿದ್ದರು. ಯೋಜನೆಯ ತಾಲ್ಲೂಕು ಮೇಲ್ವಿಚಾರಕ ರಮೇಶ ಪಿ.ಕೆ. ಸ್ವಾಗತಿಸಿದರು. ವಲಯ ಮೇಲ್ವಿಚಾರಕ ನಾಗೇಶ ನಿರೂಪಿಸಿದರು.