
Dr. Chandrashekhar Udupa
ಉಡುಪಿ: ವೃತ್ತಿಯಲ್ಲಿ ವೈದ್ಯರಾದರೂ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾಗಿ ಆಧ್ಯಾತ್ಮಿಕ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಪ್ರಸಿದ್ಧರಾದವರು ಡಾ. ಎ.ಚಂದ್ರಶೇಖರ್ ಉಡುಪ.
75ನೇ ವಯಸ್ಸಿನಲ್ಲಿ ನಿಧನರಾಗಿರುವ ಅವರು ಸಾಲಿಗ್ರಾಮದ ಡಿವೈನ್ ಪಾರ್ಕ್ ಮೂಲಕ ಅಜರಾಮರರಾಗಿದ್ದಾರೆ. ಎಪ್ಪತ್ತರ ದಶಕದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವಾಗ ವಿವೇಕಾನಂದರ ಚಿಂತನೆಗಳ ಪ್ರಭಾವಕ್ಕೆ ಒಳಗಾಗಿದ್ದ ಉಡುಪರು ಅಧ್ಯಾತ್ಮದತ್ತ ಒಲವು ಬೆಳೆಸಿಕೊಂಡಿದ್ದರು.
ಆರೋಗ್ಯ ಮತ್ತು ಅಧ್ಯಾತ್ಮದ ಚಿಂತನೆಯ ಉಡುಪರಿಗೆ ಸಾಕಷ್ಟು ಅನುಯಾಯಿಗಳಿದ್ದಾರೆ. ಅವರೆಲ್ಲರೂ ಅಕ್ಕರೆಯಿಂದ ಡಾಕ್ಟರ್ಜೀ ಎಂದೇ ಅವರನ್ನು ಕರೆಯುತ್ತಿದ್ದರು.
ಡಿವೈನ್ ಪಾರ್ಕ್ನ ಸಹಸಂಸ್ಥೆಯಾಗಿ ಎಸ್ಎಚ್ಆರ್ಎಫ್ (ಯೋಗಬನ) ಸ್ಥಾಪಿಸಿ, ಯೋಗ, ಪ್ರಕೃತಿ, ಆಯುರ್ವೇದಗಳ ಜತೆಗೆ ಆಧ್ಯಾತ್ಮಿಕ ಚಿಕಿತ್ಸಾ ಕ್ರಮವನ್ನೂ ಮುನ್ನೆಲೆಗೆ ತಂದಿದ್ದರು. ಯೋಗಬನದಲ್ಲಿರುವ ಸ್ಥಾಪಿಸಿರುವ ವಿವೇಕಾನಂದ ಮೂರ್ತಿಯೂ ದೇಶ ವಿದೇಶದ ಪ್ರವಾಸಿಗರನ್ನೂ ತನ್ನತ್ತ ಸೆಳೆಯುತ್ತಿದೆ.
ಮೈಸೂರಿನ ವೈದ್ಯಕೀಯ ಕಾಲೇಜಿಗೆ ವೈದ್ಯಕೀಯ ಶಿಕ್ಷಣಕ್ಕಾಗಿ ಸೇರಿದ್ದ ಸಂದರ್ಭದಲ್ಲಿ ರಾಮಕೃಷ್ಣ ಮಠದ ಸನ್ಯಾಸಿಯಾಗಿದ್ದ ಜಗದಾತ್ಮಾನಂದಜಿ ಅವರ ಉಪನ್ಯಾಸಗಳನ್ನು ಕೇಳುವ ಅವಕಾಶ ಉಡುಪರಿಗೆ ಒದಗಿ ಬಂದಿತ್ತು. ಅದು ಅವರ ಬದುಕಿನ ದೃಷ್ಟಿಕೋನವನ್ನ ಬದಲಿಸಿತ್ತು.
ವಾಗ್ಮಿಯೂ ಆಗಿದ್ದ ಉಡುಪರು ‘ವಿವೇಕ ಸಂಪದ’ ಎಂಬ ಆಧ್ಯಾತ್ಮಿಕ ಪತ್ರಿಕೆಯನ್ನೂ ಸಂಪಾದಿಸಿದ್ದರು. ಸಾಹಿತ್ಯ, ಧಾರ್ಮಿಕ, ಸಾಂಸ್ಕೃತಿಕ, ಆರೋಗ್ಯ ಕ್ಷೇತ್ರದಲ್ಲಿ ಅವರ ಸೇವೆ ಅನನ್ಯವಾದುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.