ADVERTISEMENT

ಕಡಲ್ಕೊರೆತ ತಡೆಗೆ ಡಕ್‌ಫೂಟ್: ಸಚಿವ ಅಂಗಾರ

ಕಾಪುನಲ್ಲಿ ಕಂದಾಯ ಮೇಳ: 860 ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಣೆ

​ಪ್ರಜಾವಾಣಿ ವಾರ್ತೆ
Published 7 ಮೇ 2022, 3:36 IST
Last Updated 7 ಮೇ 2022, 3:36 IST
ಉಚ್ಚಿಲದಲ್ಲಿ ನಡೆದ ಕಾಪು ತಾಲ್ಲೂಕು ಕಂದಾಯ ಮೇಳವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಎಸ್. ಅಂಗಾರ ಫಲಾನುಭವಿಗಳಿಗೆ ಸವಲತ್ತು ವಿತರಿಸಿದರು. ಶಾಸಕ ಲಾಲಾಜಿ ಆರ್ ಮೆಂಡನ್ ಇದ್ದರು.
ಉಚ್ಚಿಲದಲ್ಲಿ ನಡೆದ ಕಾಪು ತಾಲ್ಲೂಕು ಕಂದಾಯ ಮೇಳವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಎಸ್. ಅಂಗಾರ ಫಲಾನುಭವಿಗಳಿಗೆ ಸವಲತ್ತು ವಿತರಿಸಿದರು. ಶಾಸಕ ಲಾಲಾಜಿ ಆರ್ ಮೆಂಡನ್ ಇದ್ದರು.   

ಪಡುಬಿದ್ರಿ: ಕಡಲ್ಕೊರೆತ ತಡೆಗೆ ಶಾಶ್ವತ ತಡೆಗೋಡೆ ರಚನೆಗೆ ತಜ್ಞರ ಸಮಿತಿ ಸಲಹೆ ನೀಡಿದ್ದು, ಪ್ರಾಯೋಗಿಕವಾಗಿ ಮರವಂತೆ ಕಡಲ ಕಿನಾರೆಯಲ್ಲಿ ‘ಡಕ್‌ಫೂಟ್’ (ಬಾತುಕೋಳಿಯ ಕಾಲಿನಾಕಾರದ ರಚನೆ) ಯೋಜನೆ ಅನುಷ್ಠಾನ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಮೀನುಗಾರಿಕಾ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಹೇಳಿದರು.

ಶುಕ್ರವಾರ ಉಚ್ಚಿಲದ ಮಹಾಲಕ್ಷ್ಮೀ ದೇವಳದ ಸಭಾಭವನದಲ್ಲಿ ಆಯೋಜಿಸಲಾದ ಕಾಪು ತಾಲ್ಲೂಕು ಕಂದಾಯ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕರಾವಳಿ ತೀರದಲ್ಲಿ ಕಡಲ್ಕೊರೆತ ಬಹುಮುಖ್ಯ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಇಸ್ರೊದ ನಿವೃತ್ತ ಎಂಜಿನಿಯರ್ ಜಯಸಿಂಹ ಅವರ ನೆರವು ಪಡೆದು ಕೊಳ್ಳಲಾಗಿದೆ. ಕರಾವಳಿಯ ಮೀನು ಗಾರರ ಸಮಸ್ಯೆಗಳಿಗೆ ರಾಜ್ಯ ಸರ್ಕಾರವು ಸದಾ ಸ್ಪಂದಿಸುತ್ತಿದೆ. ಈ ಭಾಗದ ಹೆಜಮಾಡಿ ಬಂದರು ಕಾಮಗಾರಿಗೆ ಹೆಚ್ಚಿನ ವೇಗ ದೊರೆತಿದೆ’ ಎಂದರು.

ADVERTISEMENT

‘ನಮ್ಮನ್ನು ಜನಪ್ರತಿನಿಧಿಯಾಗಿ ಆಯ್ಕೆ ಮಾಡಿದ ಜನಸಾಮಾನ್ಯರಿಗೆ ಸರ್ಕಾರದ ಯೋಜನೆಗಳು ಸಮರ್ಪಕ ವಾಗಿ ಸಿಗುವಂತಾಗಲು ಮನೆ ಮನೆ ಅಭಿಯಾನ ನಡೆಸಬೇಕಾಗಿದೆ. ಕೆಲ ವೊಂದು ಯೋಜನೆಗಳು ಜನರಿಗೆ ಸರಿಯಾಗಿ ದೊರಕುತ್ತಿಲ್ಲ. ಈ ಬಗ್ಗೆ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಾಗಿದೆ’ ಎಂದು ಹೇಳಿದರು.

ಕಾಪು ಶಾಸಕ ಲಾಲಾಜಿ ಮೆಂಡನ್ ಮಾತನಾಡಿ, ‘ಬೆಳ್ಳೆ ಗ್ರಾಮ ಪಂಚಾಯಿತಿ ನಲ್ಲಿ 5 ಎಕರೆ ಜಾಗವನ್ನೇ ಇದೀಗ ವಸತಿ ವಲಯಕ್ಕೆ ಮೀಸಲಿರಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹರಿ
ಸಲು ಈಗಾಗಲೇ ಶೇ 60ರಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಹೇಳಿದರು.

‘ಶಿರ್ವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಮರ್ಪಕ ಹಾಸಿಗೆ ವ್ಯವಸ್ಥೆ, ರೋಗಿಗಳ ಶುಶ್ರೂಷೆ ಹಾಗೂ ನೋಂದಣಿಯೊಂದಿಗೆ ಮತ್ತಷ್ಟು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಮಣಿಪಾಲ ಆಸ್ಪತ್ರೆಯೊಂದಿಗೆ ಮಾತುಕತೆಗಳು ನಡೆಯುತ್ತಿವೆ’ ಎಂದು ಲಾಲಾಜಿ ಮೆಂಡನ್ ಹೇಳಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಕೂರ್ಮಾರಾವ್ ಇದ್ದರು. ಡೀಮ್ಡ್ ಫಾರೆಸ್ಟ್ ಸಮಸ್ಯೆಯ ಪ್ರಶ್ನೆಗಳಿಗೆ ಅರಣ್ಯಾಧಿಕಾರಿ ಆಶಿಷ್ ರೆಡ್ಡಿ ಉತ್ತರಿಸಿದರು.

ಕಾಪು ಪುರಸಭಾ ಮುಖ್ಯಾಧಿಕಾರಿ ವೆಂಕಟೇಶ್ ನಾವಡ, ಕಾಪು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ, ಬಡಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಗಣೇಶ್, ಉಡುಪಿ ತಹಶೀಲ್ದಾರ್ ಅರ್ಚನಾ ಭಟ್, ಕಾಪು ತಾಲ್ಲೂಕು ಪಂಚಾಯಿತಿ ಇಒ ಶಿವಪ್ರಕಾಶ್ ಇದ್ದರು.

ಕಾಪು ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ ಸ್ವಾಗತಿಸಿದರು. ಕುಂದಾಪುರದ ಉಪ ವಿಭಾಗಾಧಿಕಾರಿ ರಾಜು ಕೆ. ಪ್ರಾಸ್ತಾವಿಕ ಮಾತನಾಡಿದರು. ಎಚ್. ಸತೀಶ್ ಶೆಟ್ಟಿ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.