
ಕುಂದಾಪುರ: ಪ್ರಾಮಾಣಿಕತೆ ಹಾಗೂ ಪರಿಶ್ರಮದಿಂದ ಮಾತ್ರ ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿ ಸಾಧಿಸಿ, ಉನ್ನತೀಕರಣವಾಗಲು ಸಾಧ್ಯ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಇಲ್ಲಿನ ಡಾ.ಬಿ.ಬಿ.ಹೆಗ್ಡೆ ಕಾಲೇಜಿನ ಬಿಎಂಎಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕುಂದಾಪುರ ಎಜುಕೇಷನ್ ಸೊಸೈಟಿಯ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುಂದಾಪುರ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಬಿ.ಎಂ. ಸುಕುಮಾರ ಶೆಟ್ಟಿ ಅವರ ತಪಸ್ಸಿನ ಪ್ರತಿಫಲ ಸಂಸ್ಥೆಯ ಬೆಳವಣಿಗೆಯಲ್ಲಿ ಕಾಣುತ್ತಿದೆ. ಇತಿಹಾಸ, ಸಂಸ್ಕೃತಿ ಹಾಗೂ ಶಿಕ್ಷಣ ಬೆಳೆಸುವ ವಿದ್ಯಾಕೇಂದ್ರದ ಬೆಳವಣಿಗೆಗೆ ಎಲ್ಲರ ಸಹಕಾರವೂ ಬೇಕು. ಎಲ್ಲವನ್ನೂ ಸರ್ಕಾರದಿಂದ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಸರ್ಕಾರದೊಂದಿಗೆ ಖಾಸಗಿ ಸಹಭಾಗಿತ್ವದಲ್ಲಿ ಶಿಕ್ಷಣ ಕ್ರಾಂತಿ ಆಗುತ್ತಿರುವುದು ಸ್ತುತ್ಯಾರ್ಹ. ನಾವು ಶ್ರೀಮಂತರಾಗಿ ದೇಶವನ್ನು ಶ್ರೀಮಂತಗೊಳಿಸುವ ಕಟಿಬದ್ಧತೆ ಬೇಕು. ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ದೇಶಕ್ಕೆ ಹುತಾತ್ಮರಾದ ಸೈನಿಕರ ರಕ್ತದ ಬೆಲೆಯ ಅರಿವು ನಮಗೆ ಆಗುವವರೆಗೆ ನಾವು ಸತ್ಪ್ರಜೆಗಳಾಗಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಂದಾಪುರ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಬಿ.ಎಂ.ಸುಕುಮಾರ ಶೆಟ್ಟಿ, ‘ಸಂಸ್ಥೆಯಿಂದ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ವಿದ್ಯಾರ್ಜನೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಸಮಾಜದ ಭವಿಷ್ಯದ ಪ್ರಜೆಗಳನ್ನು ರೂಪಿಸುವ ವಿದ್ಯೆ ನೀಡುವ ಕೆಲಸದಿಂದ ಸಂತೃಪ್ತಿ ಇದೆ. ಕೊಲ್ಲೂರಿನಿಂದ ಶಿಕ್ಷಣ ಸಂಸ್ಥೆಗಳನ್ನ ಹಾಗೂ ಅನ್ನ ದಾಸೋಹ ಪ್ರಾರಂಭಿಸಿರುವ ಕುರಿತು ಹೆಮ್ಮೆ ಇದೆ. ಮಂಗಳೂರು ವಿಶ್ವವಿದ್ಯಾಲಯ ಮಟ್ಟದಲ್ಲಿ ನಮ್ಮ ಸೊಸೈಟಿಯ ಕಾಲೇಜಿಗೆ ಒಳ್ಳೆಯ ಪ್ರಶಂಸೆ ಇದೆ’ ಎಂದರು.
ಸೊಸೈಟಿಯ ಕಾರ್ಯದರ್ಶಿ ಸೀತಾರಾಮ ನಕ್ಕತ್ತಾಯ, ಜೊತೆ ಕಾರ್ಯದರ್ಶಿ ಕೆ.ಸುಧಾಕರ ಬಾಂಡ್ಯ, ಸದಸ್ಯ ಡಾ. ವೈ.ಎಸ್.ಹೆಗ್ಡೆ, ಡಾ. ಬಿ.ಬಿ.ಹೆಗ್ಡೆ ಕಾಲೇಜಿನ ಪ್ರಾಂಶುಪಾಲ ಉಮೇಶ್ ಶೆಟ್ಟಿ ಕೆ., ಆರ್.ಎನ್.ಶೆಟ್ಟಿ ಪಿಯು ಕಾಲೇಜಿನ ಪ್ರಾಂಶುಪಾಲ ನವೀನ್ ಕುಮಾರ್ ಶೆಟ್ಟಿ, ಎಚ್ಎಂಎಂ ಮತ್ತು ವಿಕೆಆರ್ ಶಾಲೆಗಳ ಪ್ರಾಂಶುಪಾಲೆ ಚಿಂತನಾ ರಾಜೇಶ್ ಇದ್ದರು.
ವಿದ್ಯಾರ್ಥಿನಿ ಶ್ರೇಯಾ ಖಾರ್ವಿ ಪ್ರಾರ್ಥಿಸಿದರು. ಡಾ.ಬಿ.ಬಿ.ಹೆಗ್ಡೆ ಕಾಲೇಜಿನ ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ ಕೊವಾಡಿ ಸ್ವಾಗತಿಸಿದರು. ಉಪನ್ಯಾಸಕರಾದ ಅವಿತಾ ಕೊರಿಯಾ ಪರಿಚಯಿಸಿದರು. ಪೂಜಾ ಕುಂದರ್ ವಂದಿಸಿದರು. ರೇಷ್ಮಾ ಶೆಟ್ಟಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.