ಉಡುಪಿ: ಈದ್ ಉಲ್ ಫಿತ್ರ್ ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸುವುದರೊಂದಿಗೆ ನೆರೆ ಮನೆಯವರರಿಗೆ ಹಾಗೂ ಅರ್ಹರಿಗೆ ಸಹಾಯ ಹಾಗೂ ಸಹಕಾರ ನೀಡಿ ಎಂದು ಉಡುಪಿ, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲಾ ಸಂಯುಕ್ತ ಜಮಾತ್ ಖಾಜಿಶೈಖುನಾ ಪಿ.ಎಂ. ಇಬ್ರಾಹಿಂ ಮುಸ್ಲಿಯಾರ್ ಬೇಕಲ ಸೂಚನೆ ನೀಡಿದ್ದಾರೆ.
ಈದ್ ಹಬ್ಬ ಆಚರಣೆ ಸುನ್ನತ್ ಆಗಿದ್ದು, ಲೋಕವೇ ದುಃಖದಲ್ಲಿರುವಾಗ ಹಬ್ಬವನ್ನು ಅದ್ಧೂರಿಯಿಂದ ಆಚರಿಸುವುದು ಸರಿಯಲ್ಲ. ಮನೆಗಳಲ್ಲಿ ಈದ್ ನಮಾಜ್ ನಿರ್ವಹಿಸಿ, ಬಡವರಿಗೆ ಸಹಾಯ ಸಹಕಾರವನ್ನು ನೀಡಿ. ಈವರೆಗೆ ಅಳವಡಿಸಿಕೊಂಡಿರುವ ಕಾನೂನುಗಳನ್ನು ಮುಂದುವರಿಸಿ. ಈ ಕಠಿಣ ಸಂದರ್ಭದಲ್ಲಿ ಬಂದಿರುವ ಈದ್ ಉಲ್ ಫಿತ್ರ್ ಹಬ್ಬವನ್ನು ಆದಷ್ಟು ಸರಳವಾಗಿ ಕುಟುಂಬ ಸದಸ್ಯರೊಂದಿಗೆ ಆಚರಿಸಿ.
ದುಂದು ವೆಚ್ಚವಿಲ್ಲದೆ, ಅನಗತ್ಯಗಳಲ್ಲಿ ತೊಡಗದೆ, ಪ್ರಯಾಣಗಳಿಗೆ ಹೋಗದೆ ಆರೋಗ್ಯ ಇಲಾಖೆಯ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿ. ಧಾರ್ಮಿಕ ಕೇಂದ್ರಗಳು ತೆರೆದು ಮೊದಲಿನಂತೆ ಸುಗಮವಾಗಿ ನಡೆಯಲು ಕೋವಿಡ್-19ನಿಂದ ಮುಕ್ತಿ ಹೊಂದಲು ಅಲ್ಲಾಹುನಲ್ಲಿ ಪ್ರಾರ್ಥಿಸಿರಿ ಎಂದು ಸಂದೇಶ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.