
ಶಿರ್ವ: ನಕಲಿ ಚಿನ್ನಾಭರಣಗಳನ್ನು ಬ್ಯಾಂಕ್ನಲ್ಲಿ ಅಡವಿಟ್ಟು ವಂಚಿಸುತ್ತಿದ್ದ ಆರೋಪದ ಮೇಲೆ ಐವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ತೆಂಕನಿಡಿಯೂರು ಲಕ್ಷ್ಮಿನಗರದ ನಗರದ ಸುದೀಪ್ ಪೂಜಾರಿ, ಅಂಬಲಪಾಡಿ ಕಪ್ಪೆಟ್ಟುವಿನ ಪುನೀತ್ ಆನಂದ ಕೋಟ್ಯಾನ್, ಕಟಪಾಡಿ ಏಣಗುಡ್ಡೆಯ ರಂಜನ್ ಕುಮಾರ್, ಪೆರ್ಡೂರು ಅಲಂಗಾರಿನ ಸರ್ವಜಿತ್ ಎಚ್, ಮಹಾರಾಷ್ಟ್ರ ಶ್ರೀನಗರದ ರಾಜೇಶ್ ದಿಲೀಪ್ ಪಾಟೀಲ್ ಬಂಧಿತರು.
ಮೂಡುಬೆಳ್ಳೆ ಕಟ್ಟಿಂಗೇರಿ ಗ್ರಾಮದ ಕರ್ನಾಟಕ ಬ್ಯಾಂಕ್ನಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು ವಂಚನೆ ಎಸಗಿರುವ ಬಗ್ಗೆ ಕಟ್ಟಿಂಗೇರಿ ಶಾಖೆಯ ವ್ಯವಸ್ಥಾಪಕರು ನೀಡಿರುವ ದೂರನ್ನು ಆಧರಿಸಿ, ಶಿರ್ವ ಠಾಣಾ ಪೊಲೀಸರು ಐವರನ್ನು ಬಂಧಿಸಿ ₹4.30 ಲಕ್ಷ ನಗದು ಹಾಗೂ ನಕಲಿ ಹಾಲ್ ಮಾರ್ಕ್ ಹಾಕಲು ಬಳಸಿದ್ದ ಲೇಸರ್ ಯಂತ್ರ ಹಾಗೂ ಕಂಪ್ಯೂಟರ್ ಅನ್ನು ವಶಪಡಿಸಿಕೊಂಡಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ನಕಲಿ ಚಿನ್ನಾಭರಣಗಳನ್ನು ಇರಿಸಿ ಸಾಲ ಪಡೆಯುವರ ಹಾವಳಿ ಹೆಚ್ಚಾಗಿರುವ ಬಗ್ಗೆ ಸಾರ್ವಜನಿಕರಿಂದ ಬಂದ ದೂರನ್ನು ಆಧರಿಸಿ, ಕಾಪು ಸರ್ಕಲ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಈ ತಂಡದವರು ಬೆಂಗಳೂರು, ಗೋವಾ, ಮುಂಬೈ ಹಾಗೂ ದೆಹಲಿಗೆ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಬ್ರಹ್ಮಾವರ, ಹಿರಿಯಡ್ಕ, ಉಡುಪಿ ನಗರ ಠಾಣೆಗಳಲ್ಲಿ ಈ ರೀತಿ ನಕಲಿ ಆಭರಣ ಅಡವಿಟ್ಟು ಸಾಲ ಪಡೆದಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಶಿರ್ವ ಠಾಣೆ ಪಿಎಸ್ಐ ಮಂಜುನಾಥ ಮರಬದ, ಪಿಎಸ್ಐ ಲೋಹಿತ್ ಕುಮಾರ್ ಸಿಎಸ್, ಪಡುಬಿದ್ರಿ ಪೊಲೀಸ್ ಠಾಣೆಯ ಪಿಎಸ್ಐ ಅನಿಲ್ಕುಮಾರ್ ಟಿ ನಾಯ್, ಶ್ರೀಧರ್ ಕೆ.ಜೆ. ಸಿಬ್ಬಂದಿ ಕಿಶೋರ್, ಮಂಜುನಾಥ, ಅರುಣ್, ಸಿದ್ದ ರಾಯಪ್ಪ, ನಾಗರಾಜ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.