ಕುಂದಾಪುರ: ಕ್ಷುಲ್ಲಕ ಕಾರಣಕ್ಕೆ ತಂದೆಯನ್ನು ಮಗ ಕೊಡಲಿಯಿಂದ ಕೊಚ್ಚಿ ಕೊಂದ ಘಟನೆ ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪಡುಗೋಪಾಡಿಯಲ್ಲಿ ಶನಿವಾರ ರಾತ್ರಿ ನಡೆದಿದೆ.
ಪಡುಗೋಪಾಡಿ ಗ್ರಾಮದ ಹಾಲಾಡಿ ಮನೆ ನರಸಿಂಹ ಮರಕಾಲ (74) ಕೊಲೆಯಾದವರು. ಆರೋಪಿ, ಪುತ್ರ ರಾಘವೇಂದ್ರ ತೋಳಾರ್ (36)ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯು ಬೈಕ್ ರಿಪೇರಿ ಗ್ಯಾರೇಜ್ ಹೊಂದಿದ್ದು, ಅವಿವಾಹಿತ.
ಘಟನೆ:
ಜಾಗಕ್ಕೆ ಸಂಬಂಧಿಸಿದಂತೆ ಕೆಲವು ವರ್ಷಗಳಿಂದ ತಂದೆ ನರಸಿಂಹ ಜೊತೆ ಆರೋಪಿ ರಾಘವೇಂದ್ರ ಮನಸ್ತಾಪ ಮಾಡಿಕೊಂಡಿದ್ದು, ಮನೆಯ ಒಂದು ಭಾಗದಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದನು. ಮನೆಯ ಅಂಗಳದಲ್ಲಿ ಕಟ್ಟಿದ್ದ ಹಳೆಯ ಟಾರ್ಪಲಿಗೆ ಶನಿವಾರ ರಾತ್ರಿ ರಾಘವೇಂದ್ರ ಬೆಂಕಿ ಹಾಕಿದ್ದಾನೆ. ಸಮೀಪದಲ್ಲಿಯೇ ದನದ ಕೊಟ್ಟಿಗೆ ಹಾಗೂ ಹುಲ್ಲಿನ ರಾಶಿ ಇದ್ದು, ಬೆಂಕಿ ಹಬ್ಬದಂತೆ ನೀರು ಹಾಕಲು ತಂದೆ ನರಸಿಂಹ ಹೋಗಿದ್ದರು. ಆಗ ಏಕಾಏಕಿ ಮನೆಯ ಒಳಗಿನಿಂದ ಕಬ್ಬಿಣದ ಕೊಡಲಿಯನ್ನು ತಂದ ಆರೋಪಿಯು ಬೀಸಿದ್ದಾನೆ. ತಲೆ ಹಾಗೂ ಮುಖಕ್ಕೆ ಗಂಭೀರ ಗಾಯಗಳಾಗಿದ್ದ, ನರಸಿಂಹ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ತಡೆಯಲು ಹೋಗಿದ್ದ ನರಸಿಂಹ ಅವರ ಪುತ್ರಿ ಸುಜಾತಾ ಮೇಲೂ ಆರೋಪಿ ಹಲ್ಲೆ ನಡೆಸಿದ್ದು, ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಭಾನುವಾರ ಭೇಟಿ ನೀಡಿದರು. ಡಿವೈಎಸ್ಪಿ ಶ್ರೀಕಾಂತ ಕೆ. ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಗೋಪಿಕೃಷ್ಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.