ಉಡುಪಿ: ಶಿರೂರು ಲಕ್ಷ್ಮೀವರ ತೀರ್ಥರ ಸಾವಿನ ಪ್ರಕರಣದಲ್ಲಿ ‘ಅಸ್ವಾಭಾವಿಕ ಸಾವು’ ಎಂದಷ್ಟೇ ದೂರು ದಾಖಲಾಗಿದೆ. ಇದರಿಂದ ಮುಂದೆ ಕಾನೂನು ತೊಡಕುಗಳಾಗುವ ಸಾದ್ಯತೆಗಳಿದ್ದು, ನ್ಯಾಯಬದ್ಧ ಎಫ್ಐಆರ್ ದಾಖಲಾದರೆ ಮಾತ್ರ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತದೆ ಎಂದು ವಕೀಲ ರವಿಕಿರಣ್ ಮುರ್ಡೇಶ್ವರ್ ಹೇಳಿದರು.
ಶಿರೂರು ಶ್ರೀ ಅಭಿಮಾನಿ ಬಳಗದಿಂದ ಶನಿವಾರ ಮಥುರಾ ಛತ್ರದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಶಿರೂರು ಶ್ರೀಗಳ ಅನುಮಾನಾಸ್ಪದ ಸಾವಿನ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗಬೇಕು. ಹಾಗಾಗಿ, ಯೋಗ್ಯವಾಗಿ ಹಾಗೂ ಕಾನೂನುಬದ್ಧವಾಗಿ ಯಾರಾದರೂ ದೂರು ನೀಡುವ ಮೂಲಕ ಎಫ್ಐಆರ್ ದಾಖಲಾಗುವಂತೆ ಮಾಡಬೇಕು ಎಂದರು.
ಶಿರೂರು ಶ್ರೀಗಳ ದೇಹದಲ್ಲಿ ವಿಷದ ಅಂಶವಿದೆ ಎಂದು ಎಫ್ಎಸ್ಎಲ್ ವರದಿಯಲ್ಲಿ ಖಚಿತವಾದ ನಂತರ ಅಸ್ವಾಭಾವಿಕ ಸಾವಿನ ದೂರನ್ನು ಬದಲಾಯಿಸುವುದಾಗಿ ಪೊಲೀಸರು ಹೇಳುತ್ತಾರೆ. ಆದರೆ, ಇದು ಸರಿಯಾದ ಕ್ರಮವಲ್ಲ; ಅಪರಾಧ ನಡೆದಿದೆ ಎಂದು ದೂರು ದಾಖಲಾದರೆ ಮಾತ್ರ, ತನಿಖೆ ಸರಿಯಾಗಿ ಸಾಗಲು ಭೂಮಿಕೆ ಸಿದ್ಧಮಾಡಿದಂತಾಗುತ್ತದೆ ಎಂದು ಮುರ್ಡೇಶ್ವರ್ ಅಭಿಪ್ರಾಯಪಟ್ಟರು.
‘ಶಿರೂರು ಶ್ರೀಗಳ ಸಾವಿನ ಕುರಿತು ಹೊಸದಾಗಿ ಯಾರಾದರೂ ದೂರು ನೀಡಲು ಮುಂದೆ ಬಂದರೆ, ನಾನೇ ಖುದ್ದು ದೂರು ಬರೆದುಕೊಡುವುದಾಗಿ’ ಅವರು ಭರವಸೆ ನೀಡಿದರು.
ಅದೇ ದಿನವೇ ಹಸು ಸಾವು?
ಶಿರೂರು ಶ್ರೀಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ದಿನವೇ ಶಿರೂರು ಮೂಲಮಠದಲ್ಲಿ ಹಸುವೊಂದು ಸಾವನ್ನಪ್ಪಿರುವ ವಿಚಾರ ತಡವಾಗಿ ತಿಳಿದುಬಂದಿದೆ. ಹಸುವಿನ ಸಾವಿಗೆ ಕಾರಣ ತಿಳಿಯಲು ಅದರ ದೇಹವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎನ್ನಲಾಗಿದೆ.
ಹಸುವಿನ ಸಾವಿಗೆ ವಿಷಾಹಾರ ಸೇವನೆ ಕಾರಣವೇ ಅಥವಾ ಅನಾರೋಗ್ಯ ಕಾರಣವೇ ಎಂಬ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ವಿಚಾರವನ್ನು ಪೊಲೀಸರು ಖಚಿತಪಡಿಸಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.