ADVERTISEMENT

ಕರ್ಫ್ಯೂ ಉಲ್ಲಂಘನೆ: ಬಿಸಿ ಮುಟ್ಟಿಸಿದ ಪೊಲೀಸರು

14 ವಾಹನಗಳ ಮುಟ್ಟುಗೋಲು, 37 ದ್ವಿಚಕ್ರ ವಾಹನ, 11 ಕಾರುಗಳ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 1 ಮೇ 2021, 16:38 IST
Last Updated 1 ಮೇ 2021, 16:38 IST

ಉಡುಪಿ: ಕೋವಿಡ್ ಮಾರ್ಗಸೂಚಿ ಹಾಗೂ 144 ಸೆಕ್ಷನ್ ಉಲ್ಲಂಘಿಸಿ ಅನವಶ್ಯಕವಾಗಿ ರಸ್ತೆಗಿಳಿದ 14 ವಾಹನಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು.

ಜನತಾ ಕರ್ಫ್ಯೂ ನಾಲ್ಕನೇ ದಿನವೂ ನಿಯಮ ಉಲ್ಲಂಘಿಸಿ ರಸ್ತೆಯಲ್ಲಿ ಅಡ್ಡಾಡುತ್ತಿದ್ದವರನ್ನು ತಡೆದ ಪೊಲೀಸರು ದಂಡ ಹಾಕಿ ಪ್ರಕರಣ ದಾಖಲಿಸಿದರು. ಉಡುಪಿ ಉಪವಿಭಾಗ ವ್ಯಾಪ್ತಿಯಲ್ಲಿ 9 ವಾಹನ ಸವಾರರ ಮೇಲೆ ಪ್ರಕರಣ ದಾಖಲಿಸಿ ವಾಹನ ಮುಟ್ಟುಗೋಲು ಹಾಕಿಕೊಂಡರೆ, ಕುಂದಾಪುರದಲ್ಲಿ ಒಂದು ಮತ್ತು ಕಾರ್ಕಳ ಉಪವಿಭಾಗ ವ್ಯಾಪ್ತಿಯಲ್ಲಿ ನಾಲ್ಕು ವಾಹನಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ವಾಹನ ಮುಟ್ಟುಗೋಲು ಹಾಕಿಕೊಳ್ಳಲಾಯಿತು.

ಮೋಟಾರು ಕಾಯ್ದೆ ಉಲ್ಲಂಘಿಸಿದ 37 ದ್ವಿಚಕ್ರ ವಾಹನಗಳು ಹಾಗೂ 11 ನಾಲ್ಕು ಚಕ್ರದ ವಾಹನಗಳ ಚಾಲಕರಿಗೆ ದಂಡ ವಿಧಿಸಲಾಯಿತು. ಕುಂದಾಪುರದಲ್ಲಿ 29, ಕಾರ್ಕಳದಲ್ಲಿ 1 ಮತ್ತು ಉಡುಪಿಯಲ್ಲಿ ಏಳು ಸವಾರರಿಗೆ ದಂಡ ಹಾಕಲಾಗಿದೆ.

ADVERTISEMENT

ಪೊಲೀಸರ ಜತೆ ಯುವತಿ ವಾಗ್ವಾದ:

ಕರ್ಫ್ಯೂ ಇದ್ದರೂ ಮೊಬೈಲ್‌ನಲ್ಲಿ ಮಾತನಾಡುತ್ತ ಕಾರು ಚಲಾಯಿಸುತ್ತಿದ್ದ ಯುವತಿಯನ್ನು ತಡೆದ ಪೊಲೀಸರು ₹ 3000 ದಂಡ ವಿಧಿಸಿದರು. ಸಿಟ್ಟಿಗೆದ್ದ ಯುವತಿ ಪೊಲೀಸರ ಜತೆ ವಾಗ್ವಾದಕ್ಕಿಳಿದ ದೃಶ್ಯಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ. ಸಾಮಾಜಿಕ ಕಾರ್ಯಕರ್ತೆಯಾಗಿದ್ದು, ನಾನೇಕೆ ಕಂಡ ಕಟ್ಟಬೇಕು ಎಂದು ವಾಗ್ವಾದ ನಡೆಸಿದ ಯುವತಿ ಕೊನೆಗೆ ದಂಡ ಕಟ್ಟಿ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.