ಕಾಪು (ಪಡುಬಿದ್ರಿ): ಸೋಮವಾರ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿ ಕಾಪು ಲೈಟ್ಹೌಸ್ ಬಳಿ ಸಮುದ್ರ ಪಾಲಾಗಿದ್ದು, ದೋಣಿಯಲ್ಲಿದ್ದ ಏಳು ಮಿನುಗಾರರನ್ನು ಗೃಹರಕ್ಷಕ ದಳ ಸಿಬ್ಬಂದಿ, ಸ್ಥಳೀಯರು ರಕ್ಷಿಸಿದ್ದಾರೆ.
ಆಂಧ್ರಪ್ರದೇಶದ ವಿಶಾಖಪಟ್ಟಣ ಮೂಲದ ಏಳು ಮೀನುಗಾರರಾದ ಜಗ್ಗ (54), ನೂಕ ರಾಜ್ (53), ಕೊಂಡ ಗರಿಕಿನಿ (45), ದೋನಿ ರಾಮ್ ಬಾಬು (33), ಈಶ್ವರ್ ರಾವ್ (38), ಜಗನಾದಂ (50), ಗೊಸಳ ಸತ್ಯನಾರಾಯಣ (49) ಅವರಿದ್ದ ಟ್ರಾಲ್ ಬೋಟ್ ಮಲ್ಪೆಯಿಂದ ಹೊರಟಿತ್ತು. ಕಾಪು ಪಡು ಗ್ರಾಮದ ಲೈಟ್ಹೌಸ್ ಬೀಚ್ ಬಳಿ ಬರುತ್ತಿರುವಾಗ ರಭಸದ ಗಾಳಿಯಿಂದಾಗಿ ದೋಣಿ ಮಗುಚಿಬಿತ್ತು. ದಡದಲ್ಲಿದ್ದವರು ತಕ್ಷಣ ಹಗ್ಗದ ಸಹಾಯದಿಂದ ಮೀನುಗಾರರನ್ನು ರಕ್ಷಿಸಿ ದಡಕ್ಕೆ ಕರೆ ತಂದಿದ್ದಾರೆ.
ಸ್ಥಳೀಯರಾದ ಲೈಫ್ ಗಾರ್ಡ್ ತಂಡದ ಚಂದ್ರಶೇಖರ್ ಮೆಂಡನ್ ಮತ್ತು ಸದಸ್ಯರು, ಸ್ಥಳೀಯ ಮೀನುಗಾರರಾದ ಸಂದೀಪ, ಶಿವಾಜಿ, ಬಾಲಕೃಷ್ಣ, ದಯೋಧರ, ಚಂದ್ರಶೇಖರ ರಕ್ಷಿಸುವಲ್ಲಿ ಯಶಸ್ವಿಯಾದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಪ್ರತಿಭಾ ಆರ್ ಮೀನುಗಾರ ಮಾತನಾಡಿಸಿ ರಕ್ಷಿಸಿದ ಗೃಹರಕ್ಷಕ ದಳ ಸಿಬ್ಬಂದಿ, ಸ್ಥಳೀಯ ಮೀನುಗಾರರಿಗೆ ಧನ್ಯವಾದ ತಿಳಿಸಿದ್ದಾರೆ. ಹೆಜಮಾಡಿ ಕರಾವಳಿ ಕಾವಲು ಪಡೆಯ ಸಬ್ ಇನ್ಸ್ಪೆಕ್ಟರ್ ದಾಮೋದರ್, ಹೆಡ್ ಕಾನ್ಸ್ಟೆಬಲ್ ಸಚಿನ್, ವಿನೋದ್, ಪ್ರಶಾಂತ್, ರೆವಿನ್ಯೂ ಇನ್ಸ್ಪೆಕ್ಟರ್ ಇಜ್ಜಾರ್ ಸಾಬಿರ್, ಗ್ರಾಮ ಆಡಳಿತಾಧಿಕಾರಿ ಶ್ರೀನಿವಾಸ್, ಗ್ರಾಮ ಸಹಾಯಕ ದಿಲೀಪ್ ಜೊತೆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.