ಕುಂದಾಪುರ: ‘ಸಾಹಿತ್ಯ ಇಲ್ಲದ ಕಾಲದಲ್ಲಿ, ದಿನನಿತ್ಯದ ಆಡುಭಾಷೆಯಲ್ಲಿಯೇ ಮಾತನಾಡುತ್ತಾ ಬದುಕಿನ ವಿಸ್ತಾರಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬದುಕುತ್ತಿದ್ದ ದಿನಗಳೇ ಜಾನಪದ ಕಾಲವಾಗಿತ್ತು’ ಎಂದು ವಿಶ್ವಹಿಂದೂ ಪರಿಷತ್ ಕೇಂದ್ರೀಯ ವಿಶ್ವಸ್ಥ ಮಂಡಳಿ ಸದಸ್ಯ ಪ್ರೇಮಾನಂದ ಶೆಟ್ಟಿ ಕಟ್ಕೆರೆ ಹೇಳಿದರು.
ಸ್ಪಂದನ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಕಾಳಾವರ ಇವರ ಆಶ್ರಯದಲ್ಲಿ, ನಮ್ಮ ಶಕ್ತಿ ಮಹಿಳಾ ಸಂಘ ಕಾಳಾವರ ಇವರ ಸಹಯೋಗದೊಂದಿಗೆ, ಕಾಳಾವರ ಶಾಲೆಯಲ್ಲಿ ನಡೆದ ಕುಂದಾಪುರ ತಾಲ್ಲೂಕು ಪ್ರಥಮ ಜಾನಪದ ಸಾಹಿತ್ಯ ಸಮ್ಮೇಳನ ಮತ್ತು ಕಾಳಿಂಗ(ಸುಬ್ರಹ್ಮಣ್ಯ) ಯಕ್ಷಗಾನ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಾನಪದ ವಿದ್ವಾಂಸ ಪ್ರೊ.ಕನರಾಡಿ ವಾದಿರಾಜ್ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪತ್ರಕರ್ತ ಯು.ಎಸ್.ಶೆಣೈ, ಕಾಳಾವರ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ(ಸುಬ್ರಹ್ಮಣ್ಯ) ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಹೆಗ್ಡೆ, ಕಾಳಾವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಬಾಲಕೃಷ್ಣ ಶೆಟ್ಟಿ, ನಮ್ಮ ಶಕ್ತಿ ಮಹಿಳಾ ಸಂಘದ ಅಧ್ಯಕ್ಷೆ ಶಶಿಕಲಾ, ಯಕ್ಷಗುರು ನಾರಾಯಣ ಆಚಾರ್ಯ ಇದ್ದರು.
ಸಮ್ಮೇಳನದಲ್ಲಿ ಜನಪದ ಸಾಹಿತ್ಯ ರೂಪಗಳ ಕುರಿತು ಸಾಹಿತಿ ಶ್ರೀನಿವಾಸ ಕಾಳಾವರ ಹಾಗೂ ಯಕ್ಷರಂಗದ ಧ್ರುವ ತಾರೆ ಜಿ.ಆರ್.ಕಾಳಿಂಗ ನಾವುಡ ಕುರಿತು ಉಪನ್ಯಾಸಕ ಸುಜಯೇಂದ್ರ ಹಂದೆ ವಿಷಯ ಮಂಡನೆ ಮಾಡಿದರು. ಡಾ.ಗಣನಾಥ ಎಕ್ಕಾರು, ಡಾ.ಭಾಸ್ಕರ ಶೆಟ್ಟಿ ಸಳ್ವಾಡಿ, ಕೆ.ಕೆ.ಕಾಳಾವರ್ಕರ್ ಇದ್ದರು.
ನಿವೃತ್ತ ಅಂಗನವಾಡಿ ಸಹಾಯಕಿ ಬುಡ್ಡು ಮೊಗವೀರ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆರಾಧ್ಯ ಶೆಟ್ಟಿ, ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದುಕೊಂಡ ನಿಶಾ ಜೋಗಿ, ಪದವಿ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದ ರಜನಿ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮ ಸಂಘಟಕ ಶ್ರೀನಿವಾಸ ಕಾಳಾವರ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.