ADVERTISEMENT

ಸರ್ವಧರ್ಮ ಸಮಾನತೆ, ಸಹಿಷ್ಣುತೆ ಸಾರಿದ ಗಾಂಧಿ

ಎಂ.ಜಿ.ಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ವಿನೀತ್ ರಾವ್

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 14:39 IST
Last Updated 8 ಡಿಸೆಂಬರ್ 2018, 14:39 IST
ಕಾರ್ಯಕ್ರಮದಲ್ಲಿ ಎಂ.ಜಿ.ಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ವಿನೀತ್ ರಾವ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಂ.ಜಿ.ಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ವಿನೀತ್ ರಾವ್ ಮಾತನಾಡಿದರು.   

ಉಡುಪಿ: ‘ಬಡತನ, ಸಾಮಾಜಿಕ ಅಸಮಾನತೆ ಮತ್ತು ಭ್ರಷ್ಟಾಚಾರಗಳ ವಿರುದ್ಧ ಅಸಹಕಾರ ಚಳವಳಿ ನಡೆಸಿ ಅವುಗಳನ್ನು ದೇಶಬಿಟ್ಟು ತೊಲಗಿಸಬೇಕಾಗಿದೆ ಎಂದು ಎಂ.ಜಿ.ಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ವಿನೀತ್ ರಾವ್ ಅಭಿಪ್ರಾಯಪಟ್ಟರು.

ಭಾರತೀಯ ವಿಕಾಸ ಟ್ರಸ್ಟ್, ಎಂ.ಜಿ.ಎಂ ಕಾಲೇಜು, ಸೆಲ್ಕೊ ಫೌಂಡೇಶನ್ ವತಿಯಿಂದ ಶನಿವಾರ ಎಂ.ಜಿ.ಎಂ ಕಾಲೇಜಿನಲ್ಲಿ ನಡೆದ ‘ಪಾಪು ಗಾಂಧಿ, ಗಾಂಧಿ ಬಾಪು ಆದ ಕತೆ’ ಮತ್ತು ‘ಬರಿಯ ಬಟ್ಟೆಯಲ್ಲ ಭಾರತ ಬಾವುಟ’ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ದಕ್ಷಿಣ ಆಫ್ರಿಕಾದಲ್ಲಿ ಗಾಂಧಿಜೀ ಅವರಿಗಾದ ತಲ್ಲಣವೇ ಸತ್ಯಾಗ್ರಹ ಪರಿಕಲ್ಪನೆ ಹುಟ್ಟಿಕೊಳ್ಳಲು ಸಾಧ್ಯವಾಯಿತು. ಸಾಮಾಜಿಕ ಅಸಮಾನತೆ ವಿರುದ್ಧ ಹೋರಾಡಲು ಪ್ರೇರಣೆಯಾಯಿತು. ಬಾಪು ಧರ್ಮವನ್ನು ಪ್ರೀತಿಸಬೇಕು, ಆದರೇ ಧರ್ಮಕ್ಕಿಂತ ಇತರ ಧರ್ಮಗಳನ್ನು ಕೀಳು ಎಂದು ಭಾವಿಸಬಾರದು ಎಂದಿದ್ದರು. ಸರ್ವಧರ್ಮ ಸಮಾನತೆ, ಸಹಿಷ್ಣುತೆ ಎಂದು ಸಾರಿದರು. ಆದರೆ, ಪ್ರಸ್ತುತ ಗಾಂಧೀಜಿ ಚಿಂತನೆಗಳನ್ನು ಅನುಕೂಲಕ್ಕೆ ತಕ್ಕಂತೆ ಜಗ್ಗಿಸಿ, ಅಸಮಾನತೆ ಅಸಹಿಷ್ಣುತೆ ಹೆಚ್ಚಿಸಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಗಾಂಧೀಜಿ ಮಾಡಿದ ತಪ್ಪನ್ನು ಪುನರಾವರ್ತಿಸದೆ ಮಹಾತ್ಮರಾದರು. ಅವರ ಅಹಿಂಸೆಯ ತತ್ವಗಳು ಸತ್ಯದ ವಿಚಾರಕ್ಕೆ ಪೂರಕ. ಬಾಪೂಜಿ ತತ್ವಗಳ ಅರ್ಥ ಅಗಾಧವಾಗಿದೆ. ಬಾಪು ಸಂಪೂರ್ಣ ಸ್ವಚ್ಛ ಭಾರತದ ಪರಿಕಲ್ಪನೆ ನೀಡಿದ್ದರು, ಆದರೆ, ಅದು ಸಾಧ್ಯವಾಗುತ್ತಿಲ್ಲ. ನಮ್ಮ ವ್ಯವಸ್ಥೆಯಲ್ಲಿರುವ ಲೋಪದೋಷಗಳೇ ಅದಕ್ಕೆ ಕಾರಣ ಎಂದು ಅಭಿಪ್ರಾಯಪಟ್ಟರು

ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧ್ಯಕ್ಷ ಡಾ.ಎನ್.ಎ.ತಿಂಗಳಾಯ, ಎಂ.ಜಿ.ಎಂ ಕಾಲೇಜು ಪ್ರಾಂಶುಪಾಲ ಡಾ.ಎಂ.ಜಿ ವಿಜಯ, ಸಿಂಡಿಕೇಟ್ ಬ್ಯಾಂಕ್ ಜನರಲ್ ಮ್ಯಾನೇಜರ್ ಭಾಸ್ಕರ ಹಂದೆ ಉಪಸ್ಥಿತರಿದ್ದರು.

ಭಾರತೀಯ ವಿಕಾಸ ಟ್ರಸ್ಟ್‌ನ ಕಾರ್ಯ ನಿರ್ವಹಣಾಧಿಕಾರಿ ಮನೋಹರ್ ಕಟ್ಗೇರಿ ಸ್ವಾಗತಿಸಿದರು. ಭಾರತೀಯ ವಿಕಾಸ ಟ್ರಸ್ಟ್‌ನ ಸಂಯೋಜಕಿ ಎ.ಲಕ್ಷ್ಮೀಬಾಯಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.