ಕೋಟ (ಬ್ರಹ್ಮಾವರ): ಸ್ವಾತಂತ್ರ್ಯಪೂರ್ವದಲ್ಲಿ ಹುಟ್ಟಿಕೊಂಡ ಗಣೇಶೋತ್ಸವ ದೇಶದ ಐಕ್ಯತೆ ಸಂಕೇತವಾಗಿ ಧಾರ್ಮಿಕ ಪರಂಪರೆಯೊಂದಿಗೆ ವಿಶ್ವಪ್ರಸಿದ್ಧಿಯಾಗಿದೆ ಎಂದು ಕುಂದಾಪುರ ಸಾಹಿತಿ ಎ.ಎಸ್.ಎನ್ ಹೆಬ್ಬಾರ್ ಹೇಳಿದರು.
ಕೋಟದ ಅಮೃತೇಶ್ವರೀ ದೇವಸ್ಥಾನದಲ್ಲಿ ಕೋಟದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸುವರ್ಣ ಸಂಭ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯರು ಕಟ್ಟಿಕೊಟ್ಟ ಈ ಹಬ್ಬಗಳು ನಮ್ಮನ್ನು ಶ್ರೀಮಂತಗೊಳಿಸಿವೆ. ನಮ್ಮಲ್ಲಿರುವ ಸಾಂಸ್ಕೃತಿಕ ಪರಂಪರೆ, ಭಗವದ್ಗೀತೆಯಂತಹ ಕೃತಿಗಳು ವಿಶ್ವಸಂದೇಶಕ್ಕೆ ಸಾಕ್ಷಿಯಾಗಿದೆ. ಭಾರತವನ್ನು ಬಗ್ಗು ಬಡಿಯುವ ತಂತ್ರ ಹುನ್ನಾರ ಎಸಗಿದ ಅಮೆರಿಕಾದಂತಹ ದೈತ್ಯ ದೇಶಗಳಿಗೆ ಗುದ್ದು ನೀಡುವ ಮಟ್ಟಕ್ಕೆ ಭಾರತ ಎದ್ದು ನಿಂತಿದೆ ಎಂದರು.
ಸಭೆಯಲ್ಲಿ ಸುವರ್ಣ ಮಹೋತ್ಸವದ ಅಂಗವಾಗಿ ಐವತ್ತು ಸ್ಥಳೀಯ ಸಾಧಕರಿಗೆ ಸುವರ್ಣ ಸಂಭ್ರಮದ ಸನ್ಮಾನ ನೀಡಿ ಗೌರವಿಸಲಾಯಿತು.
ಕೋಟ ದೊಡ್ಡ ಗಣೇಶನಿಗೆ ಬೆಳ್ಳಿ, ಚಿನ್ನದ ಆಭರಣಗಳ ಪರಿಕರ ನೀಡಿದ ದಾನಿಗಳನ್ನು ಗೌರವಿಸಲಾಯಿತು. ಸುವರ್ಣ ಸಂಭ್ರಮದ ಸಾರ್ಥಕ ಶ್ರಮಜೀವಿಗಳಿಗೆ ಅಭಿನಂದಿಸಲಾಯಿತು. ಕೋಟ ಪಡುಕರೆ ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ ಎಸ್ ನಾಯಕ ಶುಭ ಕೋರಿದರು.
ಇದೇ ಸಂದರ್ಭ ಗಣೇಶೋತ್ಸವದ ಅಂಗವಾಗಿ ನಡೆಸಿದ ಕ್ರೀಡಾಕೂಟದಲ್ಲಿ ವಿಜೇತರಾದ ಸಾಧಕರಿಗೆ ಬಹುಮಾನಗಳನ್ನು ಗಣ್ಯರ ಸಮ್ಮುಖದಲ್ಲಿ ನೀಡಲಾಯಿತು.
ಗಣೇಶೋತ್ಸವ ಪುರ ಮೆರವಣಿಗೆಯಲ್ಲಿ ಭಾಗಿಯಾಗುವ ಸದಸ್ಯರಿಗೆ ಉದ್ಯಮಿ ಉಮೇಶ ರಾಜ್ ಕೊಡುಗೆಯಾಗಿ ನೀಡಿರುವ ಟೀ ಶರ್ಟ್ಗಳನ್ನು ಮಣೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ ಎಚ್ ಕುಂದರ್ ಬಿಡುಗಡೆಗೊಳಿಸಿದರು.
ಸಮಿತಿಯ ಗೌರವಾಧ್ಯಕ್ಷ ಆನಂದ ಸಿ ಕುಂದರ್ ಅಧ್ಯಕ್ಷತೆ ವಹಿಸಿದ್ದರು.
ಪ್ರಸಿದ್ಧ ಮನೋವೈದ್ಯ ಪ್ರಕಾಶ ತೋಳಾರ್, ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಸುರೇಶ ಪ್ರಭು, ಕೋಟತಟ್ಟು ಗ್ರಾಮಪಂಚಾಯಿತಿ ಅಧ್ಯಕ್ಷ ಸತೀಶ ಕುಂದರ್, ಕೋಟ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಅನಂತಪದ್ಮನಾಭ ಐತಾಳ, ಸಮಿತಿಯ ಅಧ್ಯಕ್ಷ ರಮಾನಾಥ ಜೋಗಿ, ಉಪಾಧ್ಯಕ್ಷ ಶೇವಧಿ ಸುರೇಶ ಗಾಣಿಗ ಇದ್ದರು. ರಾಜಾರಾಮ ಐತಾಳ ಸ್ವಾಗತಿಸಿದರು. ಸಮಿತಿಯ ಕಾರ್ಯದರ್ಶಿ ಚಂದ್ರ ಆಚಾರ್ ನಿರೂಪಿಸಿ ವಂದಿಸಿದರು.
ಹಿರಿಯರು ಕಟ್ಟಿಕೊಟ್ಟ ಹಬ್ಬಗಳು ನಮ್ಮನ್ನು ಶ್ರೀಮಂತಗೊಳಿಸಿವೆ ದೈತ್ಯ ದೇಶಗಳಿಗೆ ಗುದ್ದು ನೀಡುವ ಮಟ್ಟಕ್ಕೆ ಭಾರತ ಎದ್ದು ನಿಂತಿದೆ ಐವತ್ತು ಸ್ಥಳೀಯ ಸಾಧಕರಿಗೆ ಸುವರ್ಣ ಸಂಭ್ರಮದ ಸನ್ಮಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.