
ಪಡುಬಿದ್ರಿ: ಇಲ್ಲಿನ ದೀನ್ ಸ್ಟ್ರೀಟ್ನಲ್ಲಿನ ಮನೆಯೊಂದರಿಂದ ಮಂಗಳವಾರ ರಾತ್ರಿ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫ್ತಾಬ್ ಮಂಜಿಲ್ನ ಬಾಗಿಲಿನ ಬೀಗ ಮುರಿದು ಮನೆಯೊಳಗೆ ನುಗ್ಗಿದ ಕಳ್ಳರು ಕಪಾಟನ್ನು ತುಂಡರಿಸಿ ಅದರಲ್ಲಿದ್ದ ₹45 ಲಕ್ಷ ಮೌಲ್ಯದ 70 ಪವನ್ ಚಿನ್ನದ ಒಡವೆಗಳು, ₹50 ಸಾವಿರ ಮೌಲ್ಯದ ರಾಡೊ ವಾಚ್ ಕಳವು ಗೈದಿದ್ದಾರೆ. 7 ಪವನ್, 5 ಪವನ್ ತೂಕದ ನೆಕ್ಲೆಸ್, 3 ಪವನ್ನ ಸಣ್ಣ ಚೌಕರ್ ನೆಕ್ಲೆಸ್, 2.5 ಪವನ್ನ ಸಣ್ಣ ಚೌಕರ್ ನೆಕ್ಲೆಸ್, 15 ಪವನ್ ತೂಕದ ಬಳೆಗಳು, 3 ಪವನ್ ತೂಕದ ಬ್ರೇಸ್ಲೆಟ್, 1 ಪವನ್ ತೂಕದ ಉಂಗುರ, 3 ಪವನ್ ತೂಕದ ಉಂಗುರಗಳು ಸಹಿತ ಮುತ್ತಿನ ಮಣಿಯ ಚಿನ್ನದ ಸರ, ಸಣ್ಣ ಸರಗಳು, ಕಿವಿಯೋಲೆ ಕಳವಾಗಿದೆ.
ಮನೆಯಲ್ಲಿದ್ದ ಮಹಿಳೆ ಅದೇ ಆವರಣದಲ್ಲಿದ್ದ ಮಗಳ ಮನೆಗೆ ಮಂಗಳವಾರ ಸಂಜೆ ಮನೆಗೆ ಬೀಗ ಹಾಕಿ ತೆರಳಿದ್ದರು. ಬೆಳಿಗ್ಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮಗ ವ್ಯವಹಾರ ನಿಮಿತ್ತ ವಿದೇಶಕ್ಕೆ ತೆರಳಿದ್ದು, ಸೊಸೆ ತಾಯಿ ಮನೆಗೆ ಹೋಗಿದ್ದರು. ಮನೆಯಲ್ಲಿ ಸಿಮ್ ಸಹಿತ ಸಿ.ಸಿ.ಟಿ.ವಿ.ಯಿದ್ದು ಅದನ್ನೂ ಕಳ್ಳರು ಕದ್ದೊಯ್ದಿದ್ದಾರೆ. ಅದರ ಸಿಮ್ ಸಂದೇಶ ಮಗನ ಸಿಮ್ನಲ್ಲಿ ದಾಖಲಾಗಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಡಿವೈಎಸ್ಪಿ ಪ್ರಭು ಡಿ.ಟಿ, ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ, ಪಡುಬಿದ್ರಿ ಠಾಣಾಧಿಕಾರಿ ಶಕ್ತಿವೇಲು ಭೇಟಿ ನೀಡಿದ್ದಾರೆ. ಬೆರಳಚ್ಚು ತಜ್ಞರು, ಶ್ವಾನ ದಳ, ವಿಶೇಷ ತಜ್ಞರ ತಂಡ ಪರಿಶೀಲಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.