ADVERTISEMENT

ಉಡುಪಿ: ಮಳೆಯ ಅಬ್ಬರ, ಮನೆಗಳಿಗೆ ಹಾನಿ

ಕರಾವಳಿಯಲ್ಲಿ ಭಾರಿ ಮಳೆ ಮುನ್ಸೂಚನೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 14:46 IST
Last Updated 12 ಜೂನ್ 2020, 14:46 IST
ಉಡುಪಿಯಲ್ಲಿ ಶುಕ್ರವಾರ ಸುರಿಯುತ್ತಿರುವ ಮಳೆಯಲ್ಲಿ ದ್ವಿಚಕ್ರ ವಾಹನ ಓಡಿಸುತ್ತಿರುವ ಸವಾರ
ಉಡುಪಿಯಲ್ಲಿ ಶುಕ್ರವಾರ ಸುರಿಯುತ್ತಿರುವ ಮಳೆಯಲ್ಲಿ ದ್ವಿಚಕ್ರ ವಾಹನ ಓಡಿಸುತ್ತಿರುವ ಸವಾರ   

ಉಡುಪಿ: ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ವರುಣನ ಅಬ್ಬರ ಜೋರಾಗಿದ್ದು, ಬಿರುಸಿನ ಮಳೆ ಸುರಿಯುತ್ತಿದೆ. ಕುಂದಾಪುರ, ಕಾರ್ಕಳ, ಬೈಂದೂರು, ಹೆಬ್ರಿ, ಬ್ರಹ್ಮಾವರ, ಕಾಪು ಹಾಗೂ ಉಡುಪಿಯಲ್ಲಿ ವರುಣ ಅಬ್ಬರಿಸಿದ್ದಾನೆ.

ಶುಕ್ರವಾರ ದಿನವಿಡೀ ಮೋಡಕವಿದ ವಾತಾವರಣವಿತ್ತು. ಗಾಳಿಯ ಅಬ್ಬರದೊಂದಿಗೆ ಎಡೆಬಿಡದೆ ಮಳೆ ಸುರಿಯಿತು. ಕಾಪು ತಾಲ್ಲೂಕಿನ ಮೂಡಬೆಟ್ಟು, ಕಾರ್ಕಳ ತಾಲ್ಲೂಕಿನ ಎಳ್ಳಾರೆ ಗ್ರಾಮದಲ್ಲಿ ಮರಬಿದ್ದು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಹಳ್ಳ, ಚಿಕ್ಕ ನದಿಗಳು ತುಂಬಿ ಹರಿಯುತ್ತಿವೆ.

ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಮೀನುಗಾರರು ಸಮುದ್ರಕ್ಕಿಳಿಯದಂತೆ ಸೂಚನೆ ನೀಡಲಾಗಿದೆ. ಅಲೆಗಳ ಹೊಡೆತಕ್ಕೆ ಅಲ್ಲಲ್ಲಿ ಕಡಲ್ಕೊರೆತ ಉಂಟಾಗುತ್ತಿದೆ.

ADVERTISEMENT

ಕಳೆದ 24 ಗಂಟೆಗಳಲ್ಲಿ ಉಡುಪಿಯಲ್ಲಿ 24, ಕುಂದಾಪುರ 21, ಕಾರ್ಕಳ 18, ಬೈಂದೂರು 38, ಬ್ರಹ್ಮಾವರ 16, ಕಾಪು 17, ಹೆಬ್ರಿಯಲ್ಲಿ 28 ಮಿ.ಮೀ ಮಳೆಯಾಗಿದೆ. ಮೂರ್ನಾಲ್ಕು ದಿನ ಕರಾವಳಿಯಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕೃಷಿ ಚಟುವಟಿಕೆ ಬಿರುಸು:

ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ರೈತರು ಗದ್ದೆಗಳನ್ನು ಬಿತ್ತನೆಗೆ ಹಸನು ಮಾಡಿಕೊಳ್ಳುತ್ತಿದ್ದಾರೆ. ಈ ಬಾರಿ ಕೊರೊನಾದಿಂದ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಲ್ಲಿ ದುಡಿಯುತ್ತಿದ್ದರು ಜಿಲ್ಲೆಗೆ ಮರಳಿದ್ದು, ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ವರ್ಷ ಭತ್ತದ ಬಿತ್ತನೆ ಬೀಜಕ್ಕೆ ವಿಪರೀತ ಬೇಡಿಕೆ ಸೃಷ್ಟಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.