ADVERTISEMENT

‘ಜಮೀನಿನ ಹಕ್ಕು ನೀಡದಿದ್ದರೆ ಹೋರಾಟ’: ಕೆರೆಬೆಟ್ಟು ಸಂಜೀವ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 12:53 IST
Last Updated 4 ಜೂನ್ 2025, 12:53 IST
ಹೆಬ್ರಿ ಕಾರ್ಕಳ ತಾಲ್ಲೂಕು ಪ್ರಗತಿಪರ ನಾಗರಿಕ ಹೋರಾಟ ಸಮಿತಿಯ ಸಭೆಯಲ್ಲಿ ಅಧ್ಯಕ್ಷ ಕೆರೆಬೆಟ್ಟು ಸಂಜೀವ ಶೆಟ್ಟಿ ಮಾತನಾಡಿದರು
ಹೆಬ್ರಿ ಕಾರ್ಕಳ ತಾಲ್ಲೂಕು ಪ್ರಗತಿಪರ ನಾಗರಿಕ ಹೋರಾಟ ಸಮಿತಿಯ ಸಭೆಯಲ್ಲಿ ಅಧ್ಯಕ್ಷ ಕೆರೆಬೆಟ್ಟು ಸಂಜೀವ ಶೆಟ್ಟಿ ಮಾತನಾಡಿದರು   

ಹೆಬ್ರಿ: ಕುಮ್ಕಿ ಜಮೀನುಗಳನ್ನು ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಕಾರಣ ನೀಡಿ ಬಗರ್‌ಹುಕುಂ, ಅಕ್ರಮ ಸಕ್ರಮ ಅರ್ಜಿದಾರರ ಅರ್ಜಿಯನ್ನು ಮಂಜೂರು ಮಾಡದೆ ಜನರಿಗೆ ಅನ್ಯಾಯ ಮಾಡಲಾಗುತ್ತಿದೆ. ಇದರಿಂದ ಸಾವಿರಾರು ಕುಟುಂಬಗಳಿಗೆ ತೊಂದರೆಯಾಗುತ್ತಿದೆ. ಜಮೀನಿನ ಹಕ್ಕು ನೀಡದಿದ್ದರೆ ಸಮಿತಿಯು ಹೋರಾಟ ನಡೆಸಲಿದೆ ಎಂದು ಹೆಬ್ರಿ ಕಾರ್ಕಳ ತಾಲ್ಲೂಕು ಪ್ರಗತಿಪರ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಕೆರೆಬೆಟ್ಟು ಸಂಜೀವ ಶೆಟ್ಟಿ ಹೇಳಿದರು.

ಅವರು ಇಲ್ಲಿನ ಅನಂತ ಪದ್ಮನಾಭ ಸನ್ನಿಧಿಯಲ್ಲಿ ಮಂಗಳವಾರ ಹೆಬ್ರಿ ಕಾರ್ಕಳ ತಾಲ್ಲೂಕು ಪ್ರಗತಿಪರ ನಾಗರಿಕ ಹೋರಾಟ ಸಮಿತಿ ವತಿಯಿಂದ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಡೀಮ್ಡ್‌ ಫಾರೆಸ್ಟ್‌ ಸಮಸ್ಯೆ ನಿವಾರಣೆ ಆಗದೆ ಜಮೀನುಗಳಿಗೆ ಹಕ್ಕುಪತ್ರ ದೊರೆಯುತ್ತಿಲ್ಲ. ಹೆಬ್ರಿ ತಾಲ್ಲೂಕು ಕಚೇರಿ ಮತ್ತು ಸರ್ವೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಜನರ ಕೆಲಸ ವಿಳಂಬವಾಗುತ್ತಿರುವುದು, ಹೆಬ್ರಿಯ ಭೂನ್ಯಾಯ ಮಂಡಳಿಗೆ ಖಾಯಂ ಅಧಿಕಾರಿ ನಿಯೋಜನೆ ಮಾಡುವುದು ಸೇರಿದಂತೆ ಹಲವು ವಿಚಾರಗಳ ಚರ್ಚೆ ನಡೆಯಿತು. ಇವುಗಳನ್ನು ಉಸ್ತುವಾರಿ ಸಚಿವರ ಮೂಲಕ ಸರ್ಕಾರದ ಗಮನ ಸೆಳೆಯಲು ತೀರ್ಮಾನಿಸಲಾಯಿತು.

ADVERTISEMENT

ಸಮಿತಿಯ ನಿರ್ದೇಶಕರಾದ ಭಾಸ್ಕರ ಜೋಯಿಸ್‌, ಮುಟ್ಲುಪಾಡಿ ಸತೀಶ ಶೆಟ್ಟಿ, ವಕೀಲ ಕೆ. ಕೃಷ್ಣ ಶೆಟ್ಟಿ, ಬೇಳಂಜೆ ಹರ್ಷ ಶೆಟ್ಟಿ ಹುತ್ತುರ್ಕೆ ಅವರು ಜನರಿಗೆ ಸರ್ಕಾರದ ಕೆಲಸಗಳಲ್ಲಿ ನ್ಯಾಯ ದೊರಕಿಸಿ ಕೊಡಲು ಸಂಘಟಿತ ಹೋರಾಟ ನಡೆಸಬೇಕು ಎಂದರು.

ಸಮಿತಿಯ ಪ್ರಮುಖರಾದ ಎಚ್.ಕೆ. ನಾರಾಯಣ ನಾಯ್ಕ್‌, ಸಂತೋಷ ಕುಮಾರ್‌ ಶೆಟ್ಟಿ ನಾಯರಕೋಡು, ಬಾಲಚಂದ್ರ ಮುದ್ರಾಡಿ, ರಾಘವೇಂದ್ರ ನಾಯ್ಕ್‌ ಹೆಬ್ರಿ, ದಯಾನಂದ ಪೂಜಾರಿ ಮಡಾಮಕ್ಕಿ, ರಾಮಕೃಷ್ಣ ಆಚಾರ್ಯ ಹೆಬ್ರಿ, ಭಾಸ್ಕರ ಶೆಟ್ಟಿ ಗುಳ್ಕಾಡು, ರಮೇಶ ಶೆಟ್ಟಿ ಅಜ್ಜೋಳ್ಳಿ ಭಾಗವಹಿಸಿದ್ದರು. ರಾಘವೇಂದ್ರ ನಾಯ್ಕ್‌ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.