ADVERTISEMENT

ಸ್ತ್ರೀರೋಗ ತಜ್ಞರ ನೇಮಕಕ್ಕೆ ಒತ್ತಾಯ

ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಔಷಧಿ ಕೊರತೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2022, 7:47 IST
Last Updated 21 ನವೆಂಬರ್ 2022, 7:47 IST
ಹೆಬ್ರಿ ಸಮೀಪದ ನಾಡ್ಪಾಲು ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ನಡೆದ ಗ್ರಾಮಸಭೆಯಲ್ಲಿ ಗ್ರಾಮಸಭೆಯ ಮಾರ್ಗದರ್ಶಿ ಅಧಿಕಾರಿ, ಕೃಷಿ ಇಲಾಖೆಯ ಅಧಿಕಾರಿ ಸಿದ್ಧಪ್ಪ ಮಾಹಿತಿ ನೀಡಿದರು
ಹೆಬ್ರಿ ಸಮೀಪದ ನಾಡ್ಪಾಲು ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ನಡೆದ ಗ್ರಾಮಸಭೆಯಲ್ಲಿ ಗ್ರಾಮಸಭೆಯ ಮಾರ್ಗದರ್ಶಿ ಅಧಿಕಾರಿ, ಕೃಷಿ ಇಲಾಖೆಯ ಅಧಿಕಾರಿ ಸಿದ್ಧಪ್ಪ ಮಾಹಿತಿ ನೀಡಿದರು   

ಹೆಬ್ರಿ: ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಔಷಧಿಯ ಕೊರತೆ ಇದ್ದು, ಅದನ್ನು ಪೂರೈಕೆ ಮಾಡಬೇಕು. ಆಸ್ಪತ್ರೆಗೆ ಸ್ತ್ರೀರೋಗ ತಜ್ಞರ ನೇಮಕ ಮಾಡಬೇಕು. ಜತೆಗೆ ಸಂಚಾರಿ ಆರೋಗ್ಯ ಘಟಕವನ್ನು ಮತ್ತೆ ಪ್ರಾರಂಭಿಸಬೇಕು ಎಂದು ನಾಡ್ಪಾಲು ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದರು.

ಮೇಗದ್ದೆ ಶಾಲೆಗೆ ಶಿಕ್ಷಕರ ನೇಮಕ, ಶೈಕ್ಷಣಿಕ ವರ್ಷ ಪ್ರಾರಂಭವಾಗುವಾಗಲೇ ಪಠ್ಯಪುಸ್ತಕ, ಸಮವಸ್ತ್ರ ಮಕ್ಕಳಿಗೆ ನೀಡು ವುದು, ಸ್ಥಳೀಯರಿಗೆ ಕಾಡು ಉತ್ಪತ್ತಿ ಸಂಗ್ರಹಿಸಲು ವಿನಾಯಿತಿ ನೀಡು ವುದು, ಅಪಾಯಕಾರಿ ಮರ ತೆರವುಗೊಳಿ ಸುವುದು ಸೇರಿ ಹಲವು ಬೇಡಿಕೆಯನ್ನು ಗ್ರಾಮಸ್ಥರು ಸಭೆಯ ಮುಂದಿಟ್ಟರು.

ಗ್ರಾಮಸಭೆಯ ಮಾರ್ಗದರ್ಶಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ ಸಿದ್ದಪ್ಪ ಅವರು ಕೃಷಿ ಸಹಾಯಧನ, ಕೃಷಿ ಯಂತ್ರೋಪಕರಣ, ಕೃಷಿ ಪರಿಕರಗಳು, ಸರ್ಕಾರದ ಯೋಜನೆಗಳಾದ ರೈತ ಮಕ್ಕಳಿಗೆ ವಿದ್ಯಾಶ್ರೀ, ಕೃಷಿಭಾಗ್ಯ ಯೋಜನೆಯ ಮಾಹಿತಿ ನೀಡಿದರು.

ADVERTISEMENT

ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸಂತೋಷ್ ಕುಮಾರ್ ಮಾತನಾಡಿ, ‘ಮಕ್ಕಳಲ್ಲಿ ಕಂಡುಬರುವ ನ್ಯೂಮೋನಿಯ ಕಾಯಿಲೆಯನ್ನು ಹತೋಟಿಯಲ್ಲಿಡಲು ನ.12ರಿಂದ ಫೆ.28 ರವರೆಗೆ ಆರೋಗ್ಯ ಕಾರ್ಯಕರ್ತರು ಮನೆ ಮನೆಗಳಿಗೆ ಭೇಟಿ ನೀಡಿ, ರೋಗ ಪತ್ತೆ ಹಚ್ಚಿ ಉಚಿತ ಔಷಧಿ ನೀಡಲಿದ್ದಾರೆ’ ಎಂದರು.

ಆಸ್ಪತ್ರೆಯಲ್ಲಿ ಸಂಜೆ ಕ್ಲಿನಿಕ್ ಪ್ರಾರಂಭವಾಗಿದೆ. ಸೋಮವಾರ ಮತ್ತು ಬುಧವಾರ ಕ್ಷಕಿರಣ ತಜ್ಞರು ಲಭ್ಯರಿದ್ದಾರೆ. ಆಸ್ಪತ್ರೆಗೆ ಬರುವಾಗ ಆಧಾರ್ ಕಾರ್ಡ್ ಅಥವಾ ಪಡಿತರ ಪ್ರತಿ ತಂದು ಕೆಲವೊಂದು ರಿಯಾಯಿತಿ ಸೌಲಭ್ಯ ಪಡೆಯಬಹುದು. ಆದರೆ, ತುರ್ತು ಪರಿಸ್ಥಿತಿಯಲ್ಲಿ ದಾಖಲೆ ಇಲ್ಲದ್ದಿದ್ದರೂ ಚಿಕಿತ್ಸೆ ನೀಡಲಾಗುತ್ತದೆ ಡಾ.ಸಂತೋಷ್ ಕುಮಾರ್ ಹೇಳಿದರು.

ನಾಡ್ಪಾಲು ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ರಂಗನಾಥ ಪೂಜಾರಿ, ಭಾಸ್ಕರ ಶೆಟ್ಟಿ, ನಾರಾಯಣ ಭಟ್, ಶಾಂತಾ ಹೆಗ್ಡೆ ಗ್ರಾಮಸಭೆಯಲ್ಲಿ ವಿವಿಧ ಸಮಸ್ಯೆಗಳನ್ನು ಗಮನ ಸೆಳೆದರು.

ಹೆಬ್ರಿ ವಲಯ ಶಿಕ್ಷಣ ಸಂಯೋಜಕ ವೆಂಕಟರಮಣ ಕಲ್ಕೂರ್, ಆಯುಷ್ ವೈದ್ಯಾಧಿಕಾರಿ ಡಾ.ನೀತಾ, ಮೆಸ್ಕಾಂ ಜೆಇ ಲಕ್ಷ್ಮೀಶ, ಪಂಚಾಯಿತಿ ಉಪಾಧ್ಯಕ್ಷ ನವೀನ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಕಾರ್ಯದರ್ಶಿ ದೇವಕಿ ವರದಿ ವಾಚಿಸಿದರು. ಪಿಡಿಒ ಶೀತಲ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.