ADVERTISEMENT

ಹೆಜಮಾಡಿ ಟೋಲ್‌: ಸ್ಥಳೀಯ ವಾಹನಗಳ ಆರ್.ಸಿ. ಪ್ರತಿ ಒದಗಿಸಲು 31ರ ಗಡುವು

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2024, 15:45 IST
Last Updated 9 ಆಗಸ್ಟ್ 2024, 15:45 IST
ಹೆಜಮಾಡಿ ಟೋಲ್ ಪ್ಲಾಝಾದಲ್ಲಿ ಟೋಲ್ ವಿರೋಧಿ ಹೋರಾಟ ಸಮಿತಿಯ ಪದಾಧಿಕಾರಿಗಳು ಮಾತುಕತೆ ನಡೆಸಿದರು
ಹೆಜಮಾಡಿ ಟೋಲ್ ಪ್ಲಾಝಾದಲ್ಲಿ ಟೋಲ್ ವಿರೋಧಿ ಹೋರಾಟ ಸಮಿತಿಯ ಪದಾಧಿಕಾರಿಗಳು ಮಾತುಕತೆ ನಡೆಸಿದರು   

ಪಡುಬಿದ್ರಿ: ಸ್ಥಳೀಯ ವಾಹನಗಳ ದಾಖಲೆ ಸಂಗ್ರಹಕ್ಕೆ ಮುಂದಾಗಿರುವ ಹೆಜಮಾಡಿಯ ಕೆ.ಕೆ.ಆರ್. ಟೋಲ್ ಪ್ಲಾಜಾದಲ್ಲಿ ಟೋಲ್ ವಿರೋಧಿ ಹೋರಾಟ ಸಮಿತಿಯ ಪದಾಧಿಕಾರಿಗಳು ದಿನಾಂಕ ವಿಸ್ತರಿಸಲು ಮನವಿ ಮಾಡಿದರು. 

ಆ. 6ರಂದು ಬಂಟ್ವಾಳದ ಯುವಕನೊಬ್ಬ ದಾಂದಲೆ ನಡೆಸಿದ ಘಟನೆ ಬಳಿಕ, ವಿನಾಯಿತಿ ಹೊಂದಿರುವ ಸ್ಥಳೀಯ ವಾಹನಗಳ ಮಾಲೀಕರು ಹಾಗೂ ವಾಹನದ ಆರ್.ಸಿ. ಪ್ರತಿ ಸಲ್ಲಿಸಲು ಟೋಲ್ ಮುಖ್ಯಸ್ಥರು ಸೂಚಿಸಿದ್ದಾರೆ. ಜುಲೈ ತಿಂಗಳೊಂದರಲ್ಲೆ 2 ಸಾವಿರಕ್ಕೂ ಅಧಿಕ ಹೊಸ ಸ್ಥಳೀಯ ವಾಹನಗಳು ಟೋಲ್ ವಿನಾಯಿತಿ ಪಡೆದ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಟೋಲ್ ವಿನಾಯಿತಿ ಹೊಂದಿರುವ ಸ್ಥಳೀಯ ವಾಹನಗಳು ತಮ್ಮ ಆರ್.ಸಿ. ಪ್ರತಿಯನ್ನು ಟೋಲ್ ಕಚೇರಿಗೆ ಆ. 10ರೊಳಗೆ ಸಲ್ಲಿಸುವಂತೆ ಬ್ಯಾನರ್ ಮೂಲಕ ಮಾಹಿತಿ ನೀಡಿತ್ತು.

ಈ ಬಗ್ಗೆ ಸ್ಥಳೀಯರಿಗೆ ಮಾಹಿತಿ ಲಭ್ಯವಾಗದ ಹಿನ್ನೆಲೆ ಟೋಲ್ ವಿರೋಧಿ ಹೋರಾಟ ಸಮಿತಿ ದಾಖಲೆ ಒದಗಿಸಲು ದಿನಾಂಕ ವಿಸ್ತರಿಸಲು ಮನವಿ ಮಾಡಿತು.

ADVERTISEMENT

ಟೋಲ್ ವ್ಯವಸ್ಥಾಪಕ ತಿಮ್ಮಯ್ಯ ಮಾತನಾಡಿ, ‘ಜಿಲ್ಲಾಡಳಿತ ತಿಳಿಸಿದಂತೆ ಸ್ಥಳೀಯ ವಾಹನಗಳಿಗೆ ವಿನಾಯಿತಿ ನೀಡಲು ಸಂಸ್ಥೆ ಬದ್ಧವಾಗಿದೆ. ಆದರೆ, ಹೆಜಮಾಡಿ ಗ್ರಾಮವೊಂದರಲ್ಲಿ ನಕಲಿ ದಾಖಲೆಯಲ್ಲಿ ವಾಹನಗಳು ಹೆಚ್ಚು ಸಂಚರಿಸಿವೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ವಾಹನಗಳು ಆರ್.ಸಿ. ಪ್ರತಿ ಒದಗಿಸಿದರೆ ಕಂಪ್ಯೂಟರ್ ಮೂಲಕ ದಾಖಲೆ ಸಂಗ್ರಹಿಸಿ ಅರ್ಹರಿಗೆ ವಿನಾಯಿತಿ ನೀಡಲು ಸಾಧ್ಯವಾಗುತ್ತದೆ. ದಾಖಲೆ ಪ್ರತಿ ಒದಗಿಸಲು ಆ. 31ರವರೆಗೆ ಅವಕಾಶ ಕಲ್ಪಿಸಲಾಗುವುದು’ ಎಂದರು.

ಟೋಲ್ ಪ್ಲಾಜಾದಲ್ಲಿ ಸ್ಥಳೀಯ ನೌಕರರ ಬಗ್ಗೆ ಶೇಖರ್ ಹೆಜಮಾಡಿ ಮೌಖಿಕ ಮನವಿ ಸಲ್ಲಿಸಿ, ಸ್ಥಳೀಯರಿಗೆ ಉದ್ಯೋಗ ನೀಡುವ ಜತೆಗೆ ಭದ್ರತೆಯನ್ನೂ ಒದಗಿಸುವಂತೆ ವಿನಂತಿಸಿದರು.

ಸಮಿತಿಯ ಪದಾಧಿಕಾರಿಗಳಾದ ಪಾಂಡುರಂಗ ಕರ್ಕೇರ, ಮಧು ಅಚಾರ್ಯ ಮೂಲ್ಕಿ, ಸುಧೀರ್ ಕರ್ಕೇರ, ತೇಜಪಾಲ್ ಸುವರ್ಣ, ಸಂತೋಷ್ ಪಡುಬಿದ್ರಿ, ರಮೀಝ್ ಹುಸೈನ್, ಖಾದರ್ ಹೆಜ್ಮಾಡಿ, ಪ್ರಾಣೇಶ್ ಹೆಜ್ಮಾಡಿ, ವಿಕ್ರಮ್‌ರಾಜ್ ಸುವರ್ಣ, ಅಹಮದ್ ಕಬೀರ್, ಅಬ್ದುಲ್ ರೆಹ್ಮಾನ್, ಹನೀಫ್ ಕನ್ನಂಗಾರ್, ಕಾಸಿಮ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.