ಬೈಂದೂರು: ‘ರೈತ ಸಂಪರ್ಕ ಕೇಂದ್ರದ ಮೂಲಕ ಕೃಷಿ ಅಗತ್ಯಗಳನ್ನು ಪೂರೈಸುವ ಜೊತೆಗೆ ಸರ್ಕಾರದ ವಿವಿಧ ಯೋಜನೆಗಳನ್ನು ರೈತರಿಗೆ ತಲುಪಿಸುವ ಕಾರ್ಯವನ್ನು ಮಾಡಲಾಗುತ್ತದೆ. ರೈತರು ಹಾಗೂ ಫಲಾನುಭವಿಗಳು ಸಕಾಲದಲ್ಲಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕಿದೆ’ ಎಂದು ಬೈಂದೂರು ಕೃಷಿ ಅಧಿಕಾರಿ ಗಾಯತ್ರಿ ಹೇಳಿದರು.
ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಾವುಂದ ಇದರ ವತಿಯಿಂದ ಕೃಷಿ ಇಲಾಖೆ ಸಹಯೋಗದೊಂದಿಗೆ
ಸಂಘದ ಹೇರೂರು ಶಾಖೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯಲ್ಲಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಅವರು ಮಾತನಾಡಿದರು.
‘ರೈತ ಸಂಪರ್ಕ ಕೇಂದ್ರದಲ್ಲಿ ಸಸ್ಯ ಸಂರಕ್ಷಣಾ ಯೋಜನೆಯಲ್ಲಿ ಕೀಟನಾಶಕಗಳು, ಮಣ್ಣಿನ ಸಂರಕ್ಷಣೆಗೆ ಬೇಕಾದ ಸುಣ್ಣ, ವಿವಿಧ ತಳಿತ ಭತ್ತದ ಬೀಜಗಳು, ರಸಗೊಬ್ಬರ ಪೂರೈಕೆಯನ್ನು ಕಾಲಕಾಲಕ್ಕೆ ಮಾಡಲಾಗುತ್ತದೆ. ಸೂಕ್ಷ್ಮ ನೀರಾವರಿ ಯೋಜನೆಯಡಿ ಕನಿಷ್ಠ ಒಂದು ಎಕರೆ ಆರ್ಟಿಸಿ ಹೊಂದಿರುವವರು ಇದರ ಪ್ರಯೋಜನ ಪಡೆಯಬಹುದು.
ರೈತನ ಆಕಸ್ಮಿಕ ಸಾವಿಗೆ 2 ಲಕ್ಷದ ತನಕ ಪರಿಹಾರ ನೀಡುವ ಅವಕಾಶವಿದೆ. ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ ಯೋಜನೆಯಡಿ ಸಿಎಸ್ಸಿ ಕೇಂದ್ರ ಅಥವಾ ರೈತ ಸಂಪರ್ಕ ಕೇಂದ್ರದಲ್ಲಿ ಪೂರ್ಣ ಮಾಹಿತಿ ನೊಂದಣಿ ಮಾಡಿದರೆ ಧನಸಹಾಯ ದೊರೆಯಲಿದೆ. ರೈತರು ಕೃಷಿ ಪ್ರಶಸ್ತಿ, ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆಯಲು ಅವಕಾಶವಿದೆ. ನರೇಗಾ ಯೋಜನೆಯಡಿ ಕೃಷಿ ಉದ್ದೇಶಕ್ಕೆ ಬಾವಿ ಮಾಡಲು ಅವಕಾಶವಿದೆ. ಅರ್ಹ ಫಲಾನುಭವಿಗಳು ಈ ಎಲ್ಲದರ ಪ್ರಯೋಜನ ಪಡೆಯಬಹುದಾಗಿದೆ’ ಎಂದರು.
ಈ ಸಂದರ್ಭ ಸಂಘದ ವ್ಯಾಪ್ತಿಯ ಎಂಟು ಪ್ರಗತಿಪರ ಕೃಷಿಕರನ್ನು ಗುರುತಿಸಿ ಸನ್ಮಾನಿಸಲಾಯಿತು.
ಹೇರೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ನಾಯ್ಕ, ಸಂಘದ ಉಪಾಧ್ಯಕ್ಷ ಎಮ್. ಚಂದ್ರಶೀಲ ಶೆಟ್ಟಿ, ನಿರ್ದೇಶಕರಾದ ವಾಸು ಪೂಜಾರಿ, ಜಗದೀಶ ಪಿ. ಪೂಜಾರಿ, ನರಸಿಂಹ ದೇವಾಡಿಗ, ಎಂ. ವಿನಾಯಕ ರಾವ್, ರಾಮೃಷ್ಣ ಖಾರ್ವಿ, ಪ್ರಕಾಶ ದೇವಾಡಿಗ, ಎಂ. ಅಣ್ಣಪ್ಪ ಬಿಲ್ಲವ, ನಾರಾಯಣ ಶೆಟ್ಟಿ, ರಾಮ, ನಾಗಮ್ಮ, ಸರೋಜಾ ಗಾಣಿಗ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಅಳ್ವೆಗದ್ದೆ ಇದ್ದರು.
ಸಂಘದ ಅಧ್ಯಕ್ಷರಾದ ಎಸ್. ರಾಜು ಪೂಜಾರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿರ್ದೇಶಕ ಭೋಜ ನಾಯ್ಕ್ ವಂದಿಸಿದರು. ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.