ADVERTISEMENT

ಪರಶುರಾಮನ ಹೆಸರಿಟ್ಟರೆ ಕಾಂಗ್ರೆಸ್‌ನವರಿಗೇಕೆ ಹೊಟ್ಟೆಉರಿ: ಕಿಶೋರ್​ ಕುಮಾರ್

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2024, 7:37 IST
Last Updated 6 ಆಗಸ್ಟ್ 2024, 7:37 IST
ಪರಶುರಾಮ ಥೀಂ ಪಾರ್ಕ್‌ ವಿಚಾರವಾಗಿ ಕಾಂಗ್ರೆಸ್‌ ದಬ್ಬಾಳಿಕೆ ನಡೆಸುತ್ತಿದೆ ಎಂದು ಆರೋಪಿಸಿ, ಬಿಜೆಪಿ ವತಿಯಿಂದ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು
ಪರಶುರಾಮ ಥೀಂ ಪಾರ್ಕ್‌ ವಿಚಾರವಾಗಿ ಕಾಂಗ್ರೆಸ್‌ ದಬ್ಬಾಳಿಕೆ ನಡೆಸುತ್ತಿದೆ ಎಂದು ಆರೋಪಿಸಿ, ಬಿಜೆಪಿ ವತಿಯಿಂದ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು   

ಉಡುಪಿ: ಕಾರ್ಕಳದ ಪರಶುರಾಮ ಥೀಮ್‌ ಪಾರ್ಕ್‌ಗೆ ಪರಶುರಾಮನ ಹೆಸರಿಟ್ಟರೆ ಕಾಂಗ್ರೆಸ್‌ನವರಿಗೇಕೆ ಹೊಟ್ಟೆ ಉರಿ ಎಂದು ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಕಿಶೋರ್​ ಕುಮಾರ್​ ಕುಂದಾಪುರ ಪ್ರಶ್ನಿಸಿದ್ದಾರೆ.

ಪರಶುರಾಮ ಥೀಂ ಪಾರ್ಕ್‌ ವಿಚಾರವಾಗಿ ಕಾಂಗ್ರೆಸ್‌ ದಬ್ಬಾಳಿಕೆ ನಡೆಸುತ್ತಿದೆ ಎಂದು ಆರೋಪಿಸಿ, ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಥೀಂ ಪಾರ್ಕ್‌ಗೆ ಪರಶುರಾಮನ ಬದಲು ಶಾಸಕ ಸುನೀಲ್‌ ಕುಮಾರ್‌ ಅವರ ಹೆಸರಿಟ್ಟಿದ್ದರೆ, ಕಾಂಗ್ರೆಸ್‌ನವರು ಪ್ರತಿಭಟನೆ ನಡೆಸುವುದಕ್ಕೆ ಅರ್ಥವಿತ್ತು ಎಂದೂ ಹೇಳಿದ್ದಾರೆ.

ADVERTISEMENT

ಕಾಂಗ್ರೆಸ್‌ನವರು ದೇಶದ ರಾಮನನ್ನು, ಹಿಂದುತ್ವವನ್ನು ಒಪ್ಪಿಕೊಳ್ಳುವುದಿಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ ಎಂದರು.

ಒಂದೂ ಕಾಲು ವರ್ಷದಿಂದ ಸುಮ್ಮನಿದ್ದ ಕಾಂಗ್ರೆಸ್‌ ಸರ್ಕಾರ ಈಗ ಥೀಂ ಪಾರ್ಕ್‌ ವಿಚಾರಕ್ಕೆ ಸಂಬಂಧಿಸಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರನ್ನು ಅಮಾನತು ಮಾಡಿದೆ ಎಂದರು.

ಕಾರ್ಕಳದ ಕಾಂಗ್ರೆಸ್‌ ಮುಖಂಡ ಉದಯಕುಮಾರ್‌ ಮುನಿಯಾಲು ಅವರು ಬೆಂಗಳೂರಿನಲ್ಲಿ ಮೂರ್ತಿ ಜಪ್ತಿ ಮಾಡುವಾಗ ಉಪಸ್ಥಿತರಿದ್ದರು. ಅವರನ್ನು ಪೊಲೀಸ್‌ ಇಲಾಖೆಗೆ ನೇಮಕ ಮಾಡಿದರೂ ಆಶ್ಚರ್ಯವಿಲ್ಲ ಎಂದರು.‌

ಕಾರ್ಕಳ ಮಂಡಲ ಅಧ್ಯಕ್ಷ ನವೀನ್​ ನಾಯ್ಕ್​ ಮಾತನಾಡಿ, ಕಾರ್ಕಳದಲ್ಲಿ ದಿನನಿತ್ಯ ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳುಮೊಕದ್ದಮೆ ದಾಖಲಿಸಲಾಗುತ್ತಿದೆ ಎಂದು ಆರೋಪಿಸಿದರು.

ಪ್ರತಿಭಟನೆಯ ಬಳಿಕ ಬಿಜೆಪಿ ನಿಯೋಗ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಅವರಿಗೆ ಪರಶುರಾಮ ಥೀಂ ಪಾರ್ಕ್​ ವಿವಾದದ ಬಗ್ಗೆ ಸ್ಪಷ್ಟನೆ ನೀಡುವಂತೆ ಮನವಿ ಸಲ್ಲಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.