ADVERTISEMENT

‘ಸಮತ್ವವೇ ತತ್ವಜ್ಞಾನದ ಮೂಲತತ್ವ’

ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪರ್ಯಾಯ ಪುತ್ತಿಗೆ ಶ್ರೀ ಅಭಿಮತ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 5:15 IST
Last Updated 28 ಅಕ್ಟೋಬರ್ 2025, 5:15 IST
ಸಂಶೋಧನಾತ್ಮಕ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಪರ್ಯಾಯ ಪುತ್ತಿಗೆ ಮಠದ ಉಭಯ ಶ್ರೀಗಳು ಉದ್ಘಾಟಿಸಿದರು
ಸಂಶೋಧನಾತ್ಮಕ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಪರ್ಯಾಯ ಪುತ್ತಿಗೆ ಮಠದ ಉಭಯ ಶ್ರೀಗಳು ಉದ್ಘಾಟಿಸಿದರು   

ಉಡುಪಿ: ‘ಸಮತ್ವವೇ ಭಾರತೀಯ ತತ್ವಜ್ಞಾನದ ಮೂಲತತ್ವ. ಎಲ್ಲದರಲ್ಲೂ ಸಮತೋಲನ ಕಾಯ್ದುಕೊಳ್ಳುವುದು ಬಹುಮುಖ್ಯ. ಸಮತೋಲನ ತಪ್ಪಿದರೆ ಪತನಕ್ಕೆ ಕಾರಣವಾಗುತ್ತದೆ’ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದರು.

ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠ, ನಿಟ್ಟೆ ವಿಶ್ವವಿದ್ಯಾಲಯದ ಭಾರತೀಯ ಜ್ಞಾನ ವ್ಯವಸ್ಥಾ ಕೇಂದ್ರ ಹಾಗೂ ಶ್ರೀ ವಾದಿರಾಜ ಸಂಶೋಧನಾ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಶ್ರೀ ಪುತ್ತಿಗೆ ನೃಸಿಂಹ ಸಭಾಂಗಣದಲ್ಲಿ ‘ಭಾರತೀಯ ದರ್ಶನಗಳಲ್ಲಿ ದೇವಾಲಯಗಳ ಪ್ರಾಮುಖ್ಯತೆ’ ವಿಷಯದ ಕುರಿತು ಸೋಮವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆಡಳಿತದಲ್ಲೂ ಎಲ್ಲರನ್ನೂ ಸಮದೂಗಿಸಿಕೊಂಡು ಹೋಗುವವನು ಉತ್ತಮ ಆಡಳಿತಗಾರನಾಗುತ್ತಾನೆ. ಒಂದು ವಿಭಾಗವನ್ನು ಮಾತ್ರ ಎತ್ತಿ ಹಿಡಿದು, ಮತ್ತೊಂದನ್ನು ತುಳಿಯುವವರು ಆಳ್ವಿಕೆಗೆ ಯೋಗ್ಯರಲ್ಲ. ಸಮತ್ವ ಕಾಯುವವರು ಯಶಸ್ವಿಯಾಗುತ್ತಾರೆ’ ಎಂದು ಅವರು ತಿಳಿಸಿದರು.

ADVERTISEMENT

‘ಪ್ರಾಚೀನ ಚಿಂತನೆಯಲ್ಲಿ ಸಾಮಾಜಿಕ ವ್ಯವಸ್ಥೆ ದೇವಸ್ಥಾನ ಕೇಂದ್ರಿತವಾಗಿತ್ತು. ಇಡೀ ಜೀವನ ವ್ಯವಸ್ಥೆ ಕೂಡ ಆಧ್ಯಾತ್ಮಿಕತೆ ಕೇಂದ್ರೀಕೃತವಾಗಿತ್ತು. ಆಧ್ಯಾತ್ಮಿಕ ವಿದ್ಯೆ ಇಲ್ಲದೆ ಯಾವ ವಿದ್ಯೆಯೂ ಪರಿಪೂರ್ಣವಾಗಲಾರದು. ಜೀವನದಲ್ಲಿ ಆಧ್ಯಾತ್ಮಿಕತೆ ಪ್ರಧಾನವಾಗಿರಬೇಕು. ಭಾರತೀಯ ತತ್ವಜ್ಞಾನ, ಭಾರತೀಯ ಸಂಸ್ಕೃತಿಯು ಜಗತ್ತಿನಲ್ಲೇ ಶ್ರೇಷ್ಠವಾದುದು. ಆದರೆ ದೀಪದ ಸುತ್ತಲೂ ಕತ್ತಲು ಆವರಿಸಿರುವಂತೆ ನಮ್ಮ ಜ್ಞಾನ ಪರಂಪರೆಯ ಬಗ್ಗೆ ನಮ್ಮ ಮೂಲ ನೆಲೆಯಲ್ಲೇ ಅಜ್ಞಾನ ಆವರಿಸಿದೆ’ ಎಂದರು.

ಪುರಾತತ್ವ ಶಾಸ್ತ್ರಜ್ಞ ಕೆ.ಕೆ. ಮುಹಮ್ಮದ್‌, ಪುರಾತನ ದೇವಾಲಯಗಳಲ್ಲಿ ಉತ್ಖನನ ನಡೆಸಿದ ಅನುಭವವನ್ನು ಹಂಚಿಕೊಂಡರು. ಬರಹಗಾರ ಸುರೇಂದ್ರನಾಥ್‌ ಬೊಪ್ಪರಾಜು ಅವರು ಉಪನ್ಯಾಸ ನೀಡಿದರು.

ಪರ್ಯಾಯ ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ವಿದ್ವಾಂಸ ಶ್ರೀಪತಿ ತಂತ್ರಿ, ಪರ್ಯಾಯ ಪುತ್ತಿಗೆ ಮಠದ ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ಭಾಗವಹಿಸಿದ್ದರು. ಸುಧೀರ್‌ರಾಜ್‌ ಸ್ವಾಗತಿಸಿದರು.

ಪುರಾತನ ದೇವಾಲಯಗಳನ್ನು ನಮ್ಮ ದೇಶದ ಅತೀ ಹಳೆಯ ವಿಶ್ವವಿದ್ಯಾಲಯಗಳೆನ್ನಬಹುದು. ಭಾರತೀಯ ಜ್ಞಾನ ಪರಂಪರೆಯನ್ನು ಪರಿಚಯಿಸುವ ಕೋರ್ಸ್‌ ಇಂದು ಪ್ರತಿ ಅಕಾಡೆಮಿಕ್‌ ವಿಷಯಗಳಲ್ಲಿ ಒಳಗೊಳ್ಳಬೇಕು
ಎಂ.ಎಸ್‌.ಮೂಡಿತ್ತಾಯ ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.