ADVERTISEMENT

ಬೆಂಗಳೂರು ರೈಲು ‘ಪಂಚಗಂಗಾ ಎಕ್ಸ್‌ಪ್ರೆಸ್’

ರೈಲ್ವೆ ಮಂಡಳಿಯಿಂದ ಸ್ಪಂದನೆ: ಕರಾವಳಿಗರ ಹರ್ಷ

​ಪ್ರಜಾವಾಣಿ ವಾರ್ತೆ
Published 2 ಜುಲೈ 2021, 19:46 IST
Last Updated 2 ಜುಲೈ 2021, 19:46 IST

ಕುಂದಾಪುರ: ರಾಜ್ಯದ ಕರಾವಳಿ ಹಾಗೂ ಬೆಂಗಳೂರು ಸಂಪರ್ಕಿಸುವ ಕಾರವಾರ- ಬೆಂಗಳೂರು ಎಕ್ಸ್‌ಪ್ರೆಸ್‌ಗೆ ರೈಲಿಗೆ ’ಪಂಚಗಂಗಾ ಎಕ್ಸ್‌ಪ್ರೆಸ್’ ಎಂಬ ಹೆಸರು ಇಡಬೇಕು ಎಂಬ ಕರಾವಳಿಗರ ಬೇಡಿಕೆಗೆ ರೈಲ್ವೆ ಮಂಡಳಿ ಸ್ಪಂದಿಸಿ ಆದೇಶ ನೀಡಿರುವುದು ಕರಾವಳಿ ಭಾಗದ ಜನರಲ್ಲಿ ಸಂತಸ ಉಂಟು ಮಾಡಿದೆ.

ಕರಾವಳಿ ಭಾಗದ ಮೊಗವೀರ ಹಾಗೂ ಖಾರ್ವಿ ಸಮಾಜದವರು ಕಾರವಾರ ಹಾಗೂ ಉಡುಪಿ ಜಿಲ್ಲೆಯಲ್ಲಿ ಹರಿಯುವ ಪಂಚ ಗಂಗಾವಳಿ ಎಂಬ ಹೆಸರನ್ನು ಬೆಂಗಳೂರು – ಕಾರವಾರ ರೈಲಿಗೆ ಇಡುವಂತೆ ಒತ್ತಾಯಿಸಿದ್ದರು.

ಕರಾವಳಿಯ ಮೀನುಗಾರರ ಹಾಗೂ ರೈಲು ಪ್ರಯಾಣಿಕರ ಹಿತ ರಕ್ಷಣಾ ಸಮಿತಿ ಬೇಡಿಕೆಗೆ ಸ್ಪಂದಿಸಿದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಒತ್ತಾಯ ಮಾಡಿದ್ದರು.

ADVERTISEMENT

ಇದೀಗ ಕೇಂದ್ರ ರೈಲ್ವೆ ಮಂಡಳಿಯ ಉಪ ನಿರ್ದೇಶಕ ರಾಜೇಶ್ ಕುಮಾರ ಅವರು ಬೆಂಗಳೂರು - ಕಾರವಾರ ರೈಲಿಗೆ ಪಂಚಗಂಗಾ ಎಕ್ಸ್‌ಪ್ರೆಸ್ ಎಂದು ಹೆಸರಿರುವ ಬದಲಾವಣೆ ಮಾಡುವ ಕುರಿತು ಮಾಹಿತಿ ನೀಡಿದ್ದಾರೆ.

ಮೀನುಗಾರರ ಹರ್ಷ: ಕರಾವಳಿ ಭಾಗದ ಜೀವನಾಡಿಯಾಗಿರುವ ಪಂಚಗಂಗಾವಳಿ ನೆನಪು ಶಾಶ್ವತವಾಗಿಸುವ ನಿಟ್ಟಿನಲ್ಲಿ ಕೇಂದ್ರ ರೈಲ್ವೆ ಮಂಡಳಿ ಪಂಚಗಂಗಾ ಎಕ್ಸ್‌ಪ್ರೆಸ್ ಎಂದು ಹೆಸರು ಬದಲಾಯಿಸಿರುವುದಕ್ಕೆ ಮೊಗವೀರ ಹಾಗೂ ಖಾರ್ವಿ ಸಮಾಜದ ಬಂಧುಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಸ್ಥಳೀಯರ ಬೇಡಿಕೆಗೆ ಸ್ಪಂದಿಸಿರುವ ಶಾಸಕ, ಸಂಸದ ಹಾಗೂ ಸಚಿವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

‘ಹಿತರಕ್ಷಣಾ ಸಮಿತಿ ಕೃತಜ್ಞತೆ’
ಪಂಚಗಂಗಾ ಹೆಸರನ್ನು ಇಡಬೇಕು ಎನ್ನುವ ಸ್ಥಳೀಯರ ಬೇಡಿಕೆ ಹಿನ್ನೆಲೆಯಲ್ಲಿ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಈ ಕುರಿತು ನಿರಂತರ ಹೋರಾಟ ನಡೆಸಿತ್ತು. ಇದಕ್ಕಾಗಿ ಶ್ರಮಿಸಿದ ಜನಪ್ರತಿನಿಧಿಗಳಿಗೆ ಹಾಗೂ ಕೇಂದ್ರ ರೈಲ್ವೆ ಮಂಡಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಎಂದು ಹಿತರಕ್ಷಣಾ ಸಮಿತಿ ಗಣೇಶ್ ಪುತ್ರನ್ ಹಾಗೂ ವಿವೇಕ್ ನಾಯಕ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.