ಉಡುಪಿ: ಪರಿಸರಕ್ಕೆ ಪೂರಕವಾಗಿ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವುದು ಮಾತ್ರ ಪರಿಸರ ಬಿಕ್ಕಟ್ಟು ತಡೆಗೆ ಏಕೈಕ ಪರಿಹಾರ ಎಂದು ಕದಿಕೆ ಟ್ರಸ್ಟ್ ಅಧ್ಯಕ್ಷೆ ಮಮತಾ ರೈ ಹೇಳಿದರು.
ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ವಿಭಾಗದಿಂದ ಸೋಮವಾರ ಆಯೋಜಿಸಿದ್ದ 'ಇಕೋಸ್ಪಾಟ್' ಕಾರ್ಯಕ್ರಮದಲ್ಲಿ 'ಸುಸ್ಥಿರ ಜೀವನಶೈಲಿ' ಕುರಿತು ಮಾತನಾಡಿದ ಅವರು, ಎಲ್ಲರೂ ಒಟ್ಟಾಗಿ ಪರಿಸರ ರಕ್ಷಣೆಗೆ ಒಟ್ಟಾದರೆ, ಇಂಗಾಲದ ಹೆಜ್ಜೆಗುರುತನ್ನು ಅಳಿಸಲು ಸಾಧ್ಯ ಎಂದರು.
‘ನಾವು ಬಳಸುವ ವಸ್ತುಗಳ ಮೇಲೆಯೇ ಉತ್ಪಾದನೆ ಅವಲಂಬಿತವಾಗಿರುವುದರಿಂದ, ಜನರು ಜೀವನವನ್ನು ಪರಿಸರಮಯಗೊಳಿಸಿದರೆ ಉತ್ಪಾದಕರೂ ನಿಲುವನ್ನು ಪರಿಸರಕ್ಕೆ ಪೂರಕವಾಗಿ ಬದಲಾಯಿಸಿಕೊಳ್ಳಬೇಕಾದ ಅವಶ್ಯಕತೆ ಬರುತ್ತದೆ ಎಂದರು.
ಉಡುಪಿ ಸೀರೆ ನೇಯ್ಗೆಯನ್ನು ಉಳಿಸುವ ಸಂಕಲ್ಪದೊಂದಿಗೆ ಅವಿರತವಾಗಿ ಶ್ರಮಿಸುತ್ತಿರುವ ಕದಿಕೆ ಟ್ರಸ್ಟ್ನ ಮಮತಾ ರೈ ಉಡುಪಿ ಸೀರೆ ನೇಯ್ಗೆ ಕಲೆಯನ್ನು ಅಳಿವಿನ ಅಂಚಿನಿಂದ ಪುನರುಜ್ಜೀವನದ ಹಾದಿಗೆ ತಿರುಗಿಸಿದ್ದಾರೆ. ಪ್ರಸ್ತುತ ತಾಳಿಪಾಡಿ ನೇಕಾರರ ಸೊಸೈಟಿಯಲ್ಲಿ ಉಡುಪಿ ಸೀರೆ ನೇಕಾರರ ಸಂಖ್ಯೆ 8 ರಿಂದ 34ಕ್ಕೆ ಹೆಚ್ಚಳವಾಗಿದೆ. ಅವಿಭಜಿತ ಜಿಲ್ಲೆಗಳಲ್ಲಿ 42 ರಿಂದ 74ಕ್ಕೆ ಹೆಚ್ಚಾಗಿದೆ.
ಎರಡು ದಶಕಗಳ ನಂತರ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಯುವಕರು ನೇಕಾರಿಕೆ ವೃತ್ತಿಯನ್ನ ವಾಲುತ್ತಿದ್ದಾರೆ. ಸರಳ ಮತ್ತು ಪರಿಸರ ಪ್ರಜ್ಞೆಯ ಜೀವನ, ತೋಟಗಾರಿಕೆ, ಮನೆ ಅಡುಗೆ ಮತ್ತು ಕೈಮಗ್ಗ ಮತ್ತು ಕೈಯಿಂದ ಮಾಡಿದ ವಸ್ತುಗಳನ್ನು ಧರಿಸಲು ಮಮತಾ ರೈ ಸ್ಫೂರ್ತಿಯಾಗಿದ್ದಾರೆ ಎಂದು ಜಿಸಿಪಿಎಎಸ್ ನಿರ್ದೇಶಕರಾದ ಪ್ರೊ.ವರದೇಶ್ ಹಿರೇಗಂಗೆ ಹೇಳಿದರು.
ಸ್ಪರ್ಧಾ ಮನೋಭಾವದ ಬದಲಾಗಿ ಸಹಕಾರ ಮನೋಭಾವ ಮೌಲ್ಯವಾದಾಗ ಮಾನವ ಕುಲದ ಸರ್ವೋದಯ ಸಾಧ್ಯವಾಗುತ್ತದೆ. ಬದುಕಿಗೂ ಮತ್ತು ಹವಾಮಾನ ವೈಪರೀತ್ಯಕ್ಕೂ ನೇರವಾದ ಸಂಬಂಧವಿದ್ದು, ಎಲ್ಲರೂ ಅರಿತುಕೊಳ್ಳಬೇಕು ಎಂದರು.
ಆಕರ್ಷಿಕಾ ಸಿಂಗ್ ಕಾರ್ಯಕ್ರಮ ನಿರೂಪಿಸಿದರು, ಪ್ರಿಯಾ ಗಾರ್ಗ್ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಮನಸ್ವಿನಿ ಶ್ರೀರಂಗಂ 'ಇಕೋಸ್ಪಾಟ್' ಕುರಿತು ಮಾತನಾಡಿದರು. ವೆಲಿಕಾ ವಂದಿಸಿದರು. 'ಬಿಎ- ಎಸ್ಥೆಟಿಕ್ಸ್ ಅಂಡ್ ಪೀಸ್ ಸ್ಟಡೀಸ್' ಕಾರ್ಯಕ್ರಮ ಆಯೋಜಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.