ADVERTISEMENT

ಸಂವಿಧಾನವೇ ಜಾನಪದ: ಗಣನಾಥ ಎಕ್ಕಾರು

ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜಿಲ್ಲಾ ಪ್ರಥಮ ಕನ್ನಡ ಜಾನಪದ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2024, 6:15 IST
Last Updated 28 ಆಗಸ್ಟ್ 2024, 6:15 IST
ಜಾನಪದ ಕ್ಷೇತ್ರದಲ್ಲಿ ಅಪೂರ್ವ ಸೇವೆ ಸಲ್ಲಿಸಿದವರನ್ನು ಸಮ್ಮೇಳನದಲ್ಲಿ ಗೌರವಿಸಲಾಯಿತು
ಜಾನಪದ ಕ್ಷೇತ್ರದಲ್ಲಿ ಅಪೂರ್ವ ಸೇವೆ ಸಲ್ಲಿಸಿದವರನ್ನು ಸಮ್ಮೇಳನದಲ್ಲಿ ಗೌರವಿಸಲಾಯಿತು    

ಉಡುಪಿ: ‘ಸಮಾನತೆ, ಸ್ವಾತಂತ್ರ್ಯ, ಸಹೋದರತೆ, ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ನಮ್ಮ ಸಂವಿಧಾನದ ಮೌಲ್ಯಗಳಿಗೆ ಮೂಲ ಪ್ರೇರಣೆಯೇ ಜಾನಪದ’ ಎಂದು ಜನಪದ ವಿದ್ವಾಂಸ ಗಣನಾಥ ಎಕ್ಕಾರು ಅಭಿಪ್ರಾಯಪಟ್ಟರು.

ಪರ್ಯಾಯ ಪುತ್ತಿಗೆ ಕೃಷ್ಣ ಮಠ, ಕನ್ನಡ ಜಾನಪದ ಪರಿಷತ್ ಬೆಂಗಳೂರು, ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ವತಿಯಿಂದ ಕೃಷ್ಣ ಮಠದ ರಾಜಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಪ್ರಥಮ ಕನ್ನಡ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಾವೆಲ್ಲ ವಿಶ್ವಮಾನವರಾಗಿ ಬದುಕಬೇಕೆಂಬ ಸಂದೇಶವನ್ನು ಸಾರಿರುವ ನಮ್ಮ ದೇಶದ ಎಲ್ಲರ ಶ್ರೇಷ್ಠ ಧರ್ಮಗ್ರಂಥವಾದ ಸಂವಿಧಾನದ ಮೌಲ್ಯಗಳು ಜನಮಾನಸವನ್ನು ತಲುಪಲು ಜಾನಪದ ಮೌಲ್ಯಗಳೇ ಮೂಲ ಕಾರಣ ಎಂದು ಪ್ರತಿಪಾದಿಸಿದರು.

ADVERTISEMENT

ಎಲ್ಲಾ ಧರ್ಮದವರು ತಮ್ಮ ಆಚರಣೆಗಳನ್ನು ಆಚರಿಸಿಕೊಂಡು ನೆಮ್ಮದಿಯಿಂದ ಬದುಕುತ್ತಿದ್ದ ಕರಾವಳಿಯಲ್ಲಿ ಇಂದು ಎಲ್ಲಾ ಧರ್ಮಗಳಲ್ಲಿರುವ ಕೆಲವು ಧರ್ಮಾಂದರು ಸೌಹಾರ್ದ ಜಾನಪದ ಸಂಸ್ಕೃತಿಗೆ ಕೊಳ್ಳಿ ಇಡುವ‌ ಪ್ರಯತ್ನ ನಡೆಸಿದ ಕಾರಣ, ಇಲ್ಲಿನ ಸೌಹಾರ್ದ ಸಂಸ್ಕೃತಿಗೆ ಧಕ್ಕೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಕನ್ನಡ ಜಾನಪದ ಪರಿಷತ್ ರಾಜ್ಯ ಘಟಕ ಅಧ್ಯಕ್ಷ ಜಾನಪದ ಎಸ್. ಬಾಲಾಜಿ, ಜಿಲ್ಲಾ ಘಟಕ ಅಧ್ಯಕ್ಷ ಗಣೇಶ್ ಗಂಗೊಳ್ಳಿ, ಮಾಜಿ ಶಾಸಕ ರಘಪತಿ ಭಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಇಂದ್ರಾಳಿ ಜಯಕರ ಶೆಟ್ಟಿ ಭಾಗವಹಿಸಿದ್ದರು.

ಕನ್ನಡ ಜಾನಪದ ಪರಿಷತ್ ರಾಜ್ಯ ಸಂಚಾಲಕ ಕೆ.ಎಸ್. ಕೌಜಲಗಿ ಸಮಾರೋಪ ಭಾಷಣ ಮಾಡಿದರು. ರಾಘವೇಂದ್ರ ಸ್ವಾಗತಿಸಿ, ಪ್ರಕಾಶ ಸುವರ್ಣ ಕಟಪಾಡಿ ವಂದಿಸಿದರು.

ವಿವಿಧ ಜಾನಪದ ನೃತ್ಯಗಳು ಪ್ರದರ್ಶನಗೊಂಡವು. ಜಾನಪದ ಕ್ಷೇತ್ರದಲ್ಲಿ ಅಪೂರ್ವ ಸೇವೆ ಸಲ್ಲಿಸಿದವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಜಾನಪದ ದಾಖಲೀಕರಣ ಅಗತ್ಯ

ಜಾನಪದ ನಿತ್ಯ ನಿರಂತರ. ಅದು ಕಾಲದಿಂದ ಕಾಲಕ್ಕೆ ಬದಲಾಗುತ್ತದೆ ಮತ್ತು ಹೊಸ ಸ್ವರೂಪವನ್ನು ಪಡೆದುಕೊಳ್ಳುತ್ತದೆ‌. ಹಾಗೆಂದು ನಮ್ಮ ಹಿಂದಿನ ಜಾನಪದ ಪರಂಪರೆ ಮರೆಯಬಾರದು ಎಂದು ಗಣನಾಥ ಎಕ್ಕಾರು ಹೇಳಿದರು. ನಮ್ಮ ಮಕ್ಕಳು ಹಾಗೂ ಯುವಜನಾಂಗಕ್ಕೆ ಈ ಪರಂಪರೆಯ ಸವಿಯನ್ನು ಉಣಿಸುವ ಪ್ರಯತ್ನವನ್ನು ನಾವು ಮಾಡಬೇಕು. ಈ ನಿಟ್ಟಿನಲ್ಲಿ ಜಾನಪದ ದಾಖಲೀಕರಣ  ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.