
ಕಾಪು (ಪಡುಬಿದ್ರಿ): ನ್ಯಾಯಾಲಯದ ಆದೇಶದಂತೆ ಪೇಟೆಯ ಆಟೊರಿಕ್ಷಾ ನಿಲ್ದಾಣವನ್ನು ಪುರಸಭೆ ಪೊಲೀಸ್ ಬಂದೋಬಸ್ತ್ನಲ್ಲಿ ಶುಕ್ರವಾರ ತೆರವುಗೊಳಿಸಿ ಫಲಕ ಅಳವಡಿಸಲಾಯಿತು.
ವ್ಯಕ್ತಿಯೊಬ್ಬರು ತಮ್ಮ ಕಟ್ಟಡದ ಮುಂಭಾಗದಲ್ಲಿರುವ ರಿಕ್ಷಾ ನಿಲ್ದಾಣವನ್ನು ತೆರವುಗೊಳಿಸುವಂತೆ ಹೈಕೋರ್ಟ್ ಮೊರೆ ಹೋಗಿದ್ದು, ನಿಲ್ದಾಣ ತೆರವಿಗೆ ಕೋರ್ಟ್ ಆದೇಶಿಸಿತ್ತು. ಅದಕ್ಕೆ ಗುರುವಾರ ತೆರವಿಗೆ ರಿಕ್ಷಾ ಚಾಲಕರು ವಿರೋಧ ವ್ಯಕ್ತಪಡಿಸಿದ್ದರು.
ಶುಕ್ರವಾರ ಲೋಕೋಪಯೋಗಿ ಇಲಾಖೆ, ಆರ್ಟಿಒ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ, ಸುಮಾರು 60 ಮೀಟರ್ ಪ್ರದೇಶದಲ್ಲಿದ್ದ ರಿಕ್ಷಾ ನಿಲ್ದಾಣವನ್ನು ತೆರವುಗೊಳಿಸಿದ ಪುರಸಭೆ ಅಲ್ಲಿ ಫಲಕ ಅಳವಡಿಸಿದೆ. ಅಧಿಕಾರಿಗಳ ಕಾರ್ಯಾಚರಣೆ ವೇಳೆ ರಿಕ್ಷಾ ಚಾಲಕರು ಸ್ವಯಂ ಪ್ರೇರಣೆಯಿಂದ ರಿಕ್ಷಾಗಳನ್ನು ಬದಿಗಿರಿಸಿ ಹೈಕೋರ್ಟ್ ಆದೇಶದ ಪಾಲನೆಗೆ ಸಹಕಾರ ನೀಡಿದರು.
ಬಳಿಕ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರನ್ನು ಭೇಟಿಯಾದ ರಿಕ್ಷಾ ಚಾಲಕರು ಮತ್ತು ಮಾಲೀಕರು, ಸುಮಾರು 60 ವರ್ಷಗಳಿಂದ ಇರುವ ರಿಕ್ಷಾ ನಿಲ್ದಾಣ ತೆರವುಗೊಳಿಸುತ್ತಿರುವುದು ಬೇಸರಿ ತಂದಿದೆ. ಪುರಸಭೆ ವತಿಯಿಂದ ಪ್ರತ್ಯೇಕ ರಿಕ್ಷಾ ನಿಲ್ದಾಣ ನಿರ್ಮಿಸಿಕೊಟ್ಟು, ಪೇಟೆಗೆ ಬರುವ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಲು ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದರು.
ಅಹವಾಲು ಸ್ವೀಕರಿಸಿದ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು, ಬೇಡಿಕೆ ಬಗ್ಗೆ ಪುರಸಭೆಯ ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿಲ್ದಾಣಕ್ಕೆ ಸೂಕ್ತ ಜಾಗ ಗೊತ್ತುಪಡಿಸಿ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ನಿರ್ದೇಶನದಂತೆ ಕಾರ್ಯನಿರ್ವಹಿಸುವ ಭರವಸೆ ನೀಡಿದರು.
ಉಡುಪಿ ಆರ್ಟಿಒ ಅಧಿಕಾರಿ ಶ್ರೇಯಸ್ ಕುಕ್ಕೆ, ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಸಾಗರ್, ಕಾಪು ಠಾಣಾಧಿಕಾರಿ ತೇಜಸ್ವಿ, ಅಪರಾಧ ವಿಭಾಗದ ಎಸ್ಐ ಶುಭಕರ್, ಪುರಸಭೆ ಕಂದಾಯ ಆಧಿಕಾರಿ ಶಶಿಕಲಾ, ಕಿರಿಯ ಎಂಜಿನಿಯರ್ ಪದ್ಮನಾಭ್, ಆರೋಗ್ಯ ನಿರೀಕ್ಷಕ ದಿನೇಶ್, ಸಿಬಂದಿ ಜೊತೆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.