
ಕಾರ್ಕಳ: ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲ್ಲೂಕು ಘಟಕ ಆಯೋಜಿಸಿದ್ದ ರಾಮಸಾಗರಗಾಮಿನೀ ಎಂಬ ಶ್ರೀಮದ್ ವಾಲ್ಮೀಕಿ ರಾಮಾಯಣ ದರ್ಶನ ಕೊನೆಯ ಉಪನ್ಯಾಸ ಮಾಲಿಕೆ ಈಚೆಗೆ ನಡೆಯಿತು.
‘ಮಂಗಲಂ ಕೋಸಲೇಂದ್ರಾಯ’ ಕುರಿತು ವಿದ್ವಾಂಸ ರಾಘವೇಂದ್ರ ರಾವ್ ಪಡುಬಿದ್ರಿ ಮಾತನಾಡಿ ಯುದ್ಧಕ್ಕೆ ಭುಜಬಲದೊಂದಿಗೆ ಧರ್ಮದ ಬಲವೂ ಬೇಕು. ಶ್ರೀರಾಮನಲ್ಲಿ ದೈವಬಲದ ಶಕ್ತಿ ಇತ್ತು ಎಂದರು.
ವಿವೇಚನೆ ಕಳೆದುಕೊಳ್ಳದೆ ಸೀತೆಯನ್ನು ರಾಮನಿಗೆ ಒಪ್ಪಿಸು ಎಂಬ ಮಾತಿಗೆ ಕುಪಿತನಾದ ರಾವಣ ವಿಭೀಷಣನನ್ನೂ ಹೊರಗೆ ಹಾಕಿದ. ವಿಭೀಷಣ ಶ್ರೀರಾಮನ ರಕ್ಷಣೆ ಪಡೆಯುತ್ತಾನೆ. ಯುದ್ಧದಿಂದಾಗುವ ಹಾನಿ ತಪ್ಪಿಸಲು ರಾವಣನ ಜೊತೆ ಸಂಧಾನಕ್ಕಾಗಿ ಬಂದ ಅಂಗಧನ ಮಾತುಗಳನ್ನು ರಾವಣ ಕೇಳಲಿಲ್ಲ ಎಂದರು.
ಪೂರ್ತಿ ಉಪನ್ಯಾಸ ಮಾಲೆ ನಡೆಸಿಕೊಟ್ಟ ರಾಘವೇಂದ್ರ ರಾವ್ ಹಾಗೂ ಪ್ರತಿ ತಿಂಗಳು ಪ್ರಾರ್ಥನೆ ನೆರವೇರಿಸಿದ ವಿದ್ಯಾರ್ಥಿನಿ ಶಾರ್ವರಿ ಶ್ಯಾನುಭೋಗ್ ಅವರನ್ನು ಗೌರವಿಸಲಾಯಿತು. ಕನ್ನಡ ಸಂಘದ ಡಾ.ನಾ.ಮೊಗಸಾಲೆ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ನ ಮಿತ್ರಪ್ರಭಾ ಹೆಗ್ಡೆ ಪಾಲ್ಗೊಂಡಿದ್ದರು. ಸುಲೋಚನಾ ಬಿ.ವಿ ನಿರೂಪಿಸಿದರು. ಸದಾನಂದ ನಾರಾವಿ ಸ್ವಾಗತಿಸಿದರು. ನಿತ್ಯಾನಂದ ಪೈ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.