ಕಾರ್ಕಳ: ‘ರ್ಯಾಗಿಂಗ್ ಕ್ರಿಮಿನಲ್ ಅಪರಾಧವಾಗಿದ್ದು, ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತದೆ’ ಎಂದು ಗ್ರಾಮಾಂತರ ಪೊಲೀಸ್ ಠಾಣೆಯ ಎಸ್ಐ ಪ್ರಸನ್ನ ಹೇಳಿದರು.
ತಾಲ್ಲೂಕಿನ ನಿಟ್ಟೆ ಎನ್ಎಂಎಎಂ ತಾಂತ್ರಿಕ ಕಾಲೇಜಿನ ವತಿಯಿಂದ ಮಂಗಳವಾರ ಆಯೋಜಿಸಿದ್ದ ಆ್ಯಂಟಿ ರ್ಯಾಗಿಂಗ್ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಎಲ್ಲರೊಂದಿಗೆ ಸ್ನೇಹದಿಂದ ಬಾಳ್ವೆ ನಡೆಸಿ ಸಜ್ಜನರಾಗಿ ಸಾಧನೆ ಮಾಡಬೇಕು ಎಂದರು.
ರ್ಯಾಗಿಂಗ್ ನಮ್ಮ ಸಂಸ್ಕೃತಿ, ಸಭ್ಯತೆಗೆ ವಿರುದ್ಧವಾಗಿದೆ. ರಾಷ್ಟ್ರದ ಭವಿಷ್ಯ ವಿದ್ಯಾರ್ಥಿಗಳಲ್ಲಿದ್ದು, ಎಲ್ಲರೂ ಓದು, ಸಾಧನೆ ಕಡೆ ಗಮನ ಕೊಡಬೇಕು. ಯಾರಾದರೂ ರ್ಯಾಗಿಂಗ್ಗೆ ಪ್ರೇರಣೆ, ರ್ಯಾಗಿಂಗ್ ಮೂಲಕ ಕಿರುಕುಳ ನೀಡಿದಲ್ಲಿ ಕಾಲೇಜಿನ ಆ್ಯಂಟಿ ರ್ಯಾಗಿಂಗ್ ಸಮಿತಿ ಗಮನಕ್ಕೆ ತರಬೇಕು. ಶಿಕ್ಷಕರು, ಪೊಲೀಸರು ಇರುವ ಈ ಸಮಿತಿ ವಿದ್ಯಾರ್ಥಿಗಳ ಸುರಕ್ಷತೆಗೆ ಮುತುವರ್ಜಿ ವಹಿಸಲಿದೆ ಎಂದು ಹೇಳಿದರು.
ಮಾದಕ ದ್ರವ್ಯ ವ್ಯಸನಗಳಿಂದ ಆಗುವ ಸಮಸ್ಯೆ, ಕಾನೂನು ತೊಡಕಿನಲ್ಲಿ ಸಿಲುಕಿಕೊಂಡರೆ ಆಗಬಹುದಾದ ಅಪಾಯಗಳ ಕುರಿತು ಎಚ್ಚರಿಕೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಸಂಸ್ಥೆಯ ನಿರ್ವಹಣಾ ವಿಭಾಗದ ನಿರ್ದೇಶಕ ಎ. ಯೊಗೀಶ್ ಹೆಗ್ಡೆ ಮಾತನಾಡಿ, ನಿಟ್ಟೆ ವಿದ್ಯಾಸಂಸ್ಥೆ ಉತ್ತಮ ಶಿಕ್ಷಣಕ್ಕೆ ಪೂರಕ ವ್ಯವಸ್ಥೆಗಳನ್ನು ಹೊಂದಿದ್ದು, ವಿದ್ಯಾರ್ಥಿಗಳ ಸುರಕ್ಷತೆ, ಕಾಳಜಿಗೆ ಕಾನೂನಾತ್ಮಕವಾಗಿ ಎಲ್ಲಾ ಸಮಿತಿ, ನಿಯಮಾವಳಿಗಳನ್ನು ವ್ಯವಸ್ಥಿತವಾಗಿ ಪಾಲಿಸಲಾಗುತ್ತಿದೆ. ವಿದ್ಯಾರ್ಥಿಗಳು ಈ ಬಗ್ಗೆ ಹೆಚ್ಚಿನ ಅರಿವು ಹೊಂದಿರಬೇಕು ಎಂದರು.
ಕಾರ್ಕಳ ಠಾಣೆಯ ಕ್ರೈಂ ವಿಭಾಗದ ಠಾಣಾಧಿಕಾರಿ ಸುಂದರ್, ನಿಟ್ಟೆ ವಿದ್ಯಾ ಸಂಕೀರ್ಣದ ಪರಿಕ್ಷಾ ನಿಯಂತ್ರಕ ಸುಬ್ರಹ್ಮಣ್ಯು ಭಟ್, ಉಪ ಕುಲಸಚಿವೆ ರೇಖಾ ಭಂಡಾರ್ಕರ್ ಭಾಗವಹಿಸಿದ್ದರು. ಉಪ ಪ್ರಾಂಶುಪಾಲ ನಾಗೇಶ್ ಪ್ರಭು ಸ್ವಾಗತಿಸಿದರು. ಮಾನವಿಕ ವಿಭಾಗದ ಮುಖ್ಯಸ್ಥ ವಿಶ್ವನಾಥ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.