ADVERTISEMENT

ಯಡ್ತಾಡಿಯಲ್ಲಿ ಕುಂದಾಪ್ರ ಕನ್ನಡ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2024, 16:10 IST
Last Updated 4 ಆಗಸ್ಟ್ 2024, 16:10 IST
ಯಡ್ತಾಡಿಯಲ್ಲಿ ಭಾನುವಾರ ನಡೆದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಗೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಚಾಲನೆ ನೀಡಿದರು.
ಯಡ್ತಾಡಿಯಲ್ಲಿ ಭಾನುವಾರ ನಡೆದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಗೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಚಾಲನೆ ನೀಡಿದರು.   

ಬ್ರಹ್ಮಾವರ : ಕುಂದಾಪ್ರ ಕನ್ನಡ ದಿನಾಚರಣೆ ಎನ್ನುವಂತದ್ದು ನಮ್ಮ ಭಾಷೆಗೆ ನಾವು ಕೊಡುವ ಬೆಲೆ, ಗೌರವ ಎಂದು ಕುಂದಾಪ್ರ ಕನ್ನಡದ ವಾಗ್ಮಿ ಮನು ಹಂದಾಡಿ ಹೇಳಿದರು.

ಮೂಡುಗಿಳಿಯಾರಿನ ಜನಸೇವಾ ಟ್ರಸ್ಟ್ ಆಶ್ರಯದಲ್ಲಿ, ಕಂಬಳ ಸಾಧಕ ಬಾರ್ಕೂರು ಶಾಂತರಾಮ ಶೆಟ್ಟಿ ನೇತೃತ್ವದಲ್ಲಿ ಯಡ್ತಾಡಿಯ ಸಿನಿಮಾ ನಟ ದಿ.ಸುನಿಲ್ ಅವರ ಮನೆಯಲ್ಲಿ ನಡೆದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಅಂದು ನಮ್ಮ ಪೂರ್ವಜರು ಸೇವಿಸುತ್ತಿದ್ದ ಆಹಾರ ಪದಾರ್ಥಗಳಿಂದ ಕಾಯಿಲೆಗಳು ಬರುತ್ತಿರಲಿಲ್ಲ. ನಾವು ಹಿಂದಿನ ಕಾಲದ ಆಹಾರ ಪದ್ಧತಿ, ನಮ್ಮ ಭಾಷೆ, ಸಂಸ್ಕೃತಿ, ಆಚಾರ, ವಿಚಾರ, ದೈವ–ದೇವರನ್ನು ಮರೆಯಬಾರದು ಎಂದರು.

ADVERTISEMENT

ಶಾಸಕ ಕಿರಣ್ ಕುಮಾರ್ ಕೊಡ್ಗಿ ಚಾಲನೆ ನೀಡಿ ಮಾತನಾಡಿ, ಭಾಷೆಯ ಬಗೆಗಿನ ಪ್ರೀತಿ ತೋರ್ಪಡಿಸಲು, ಅನ್ಯ ಭಾಗದವರನ್ನು ನಮ್ಮತ್ತ ಸೆಳೆಯಲು ಇಂತಹ ಕಾರ್ಯಕ್ರಮ ಬೇಕು ಎಂದರು.

ಯಡ್ತಾಡಿ ಗ್ರಾ.ಪಂ. ಅಧ್ಯಕ್ಷ ಪ್ರಕಾಶ ಶೆಟ್ಟಿ, ಕಂಬಳ ಸಾಧಕ ಬಾರ್ಕೂರು ಶಾಂತರಾಮ ಶೆಟ್ಟಿ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್, ಜನಸೇವಾ ಟ್ರಸ್ಟ್‌ನ ಅಧ್ಯಕ್ಷ ವಸಂತ ಗಿಳಿಯಾರ್, ಸದಸ್ಯರು ಇದ್ದರು. ಪತ್ರಕರ್ತ ಕೆ.ಸಿ. ರಾಜೇಶ್ ನಿರೂಪಿಸಿದರು.

Cut-off box - ಗಮನಸೆಳೆದ ಯೆರ್ಥ ಕೃಷಿ ಪ್ರಧಾನವಾದ ಕುಂದಾಪ್ರ ಭಾಗದಲ್ಲಿ ಕೃಷಿ ಚಟುವಟಿಕೆ ಮುಗಿದ ನಂತರ ಗದ್ದೆಯಲ್ಲಿ ಉಳುಮೆ ಮಾಡಿ ದುಡಿದು ದಣಿದ ಕೋಣಗಳಿಗೆ ಉದ್ದು ತೆಂಗಿನೆಣ್ಣೆ ಹುರುಳಿ ಮೊದಲಾದ ವಿಶೇಷ ಖಾದ್ಯ ನೀಡಿ ಉಪಚಾರ ಮಾಡಲಾಗುತ್ತಿತ್ತು. ಅದೇ ಮಾದರಿಯಲ್ಲಿ ಸ್ಥಳದಲ್ಲಿ ಯೆರ್ಥ ನೀಡುವ ಪ್ರಾತ್ಯಕ್ಷಿಕೆ ಮೂಲಕ ಕುಂದಾಪ್ರ ಕನ್ನಡ ದಿನಾಚರಣೆಗೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.