ಕುಂದಾಪುರ: ಪ್ರವಾಸೋದ್ಯಮದಿಂದ ಸ್ಥಳೀಯರ ಆದಾಯ ಹೆಚ್ಚಾಗುದಲ್ಲದೇ, ಬೇರೆ ಊರುಗಳಿಂದ ಬರುವ ಪ್ರವಾಸಿಗರು ವಹಿವಾಟು ನಡೆಸುವುದರಿಂದ ಆರ್ಥಿಕ ಸಂಪನ್ಮೂಲದ ಕ್ರೋಡೀಕರಣಕ್ಕೆ ಸಹಕಾರಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅಭಿಪ್ರಾಯ ವ್ಯಕ್ತಪಡಿಸಿದರು.
ಇಲ್ಲಿಗೆ ಸಮೀಪದ ಕೋಡಿ ಸಮುದ್ರ ಕಿನಾರೆಯ ಸೀವಾಕ್ ಪ್ರದೇಶಕ್ಕೆ ಭೇಟಿ ನೀಡಿ, ಪರಿಶೀಲಿಸಿದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಸಾಮಾಜಿಕ ಜಾಲತಾಣ ಹಾಗೂ ಡಿಜಿಟಲ್ ಮಾಧ್ಯಮಗಳ ಮೂಲಕ ಮಾಹಿತಿ ಪಡೆದುಕೊಳ್ಳುವ ಪ್ರವಾಸಿಗರು, ಕುತೂಹಲ ಹಾಗೂ ಆಸಕ್ತಿಯಿಂದ ಆ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ಈ ವೇಳೆ ಇಲ್ಲಿನ ಮೂಲ ಸೌಕರ್ಯಗಳು ಚೆನ್ನಾಗಿದಷ್ಟು ಪ್ರವಾಸಿಗರು ಖುಷಿ ಅನುಭವಿಸುತ್ತಾರೆ ಹಾಗೂ ಈ ಪ್ರದೇಶಗಳಿಗೆ ಅವರೇ ಸ್ವಯಂ ರಾಯಭಾರಿಗಳಾಗುತ್ತಾರೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಗಮನ ಹರಿಸಲಿದೆ ಎಂದರು.
ರಾಜ್ಯ ಸರ್ಕಾರದ ಬಜೆಟ್ನಲ್ಲಿ ಮುಖ್ಯಮಂತ್ರಿಗಳು ಘೋಷಿಸಿದಂತೆ ಸಮುದ್ರತೀರದಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ಪ್ರವಾಸೋದ್ಯಮಕ್ಕೆ ಪೂರಕ ಚಟುವಟಿಕೆ ನೀಡುತ್ತಿರುವವರು, ತಮಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಮನವಿ ಮಾಡಿದ ಹಿನ್ನೆಲೆ ಯಾರಿಗೂ ಸಮಸ್ಯೆ ಆಗದಂತೆ ಮುತುವರ್ಜಿ ವಹಿಸಲಾಗುವುದು. ಇಲ್ಲಿ ಬೋಟಿಂಗ್, ಕಯಾಕಿಂಗ್, ಡಾಲ್ಫಿನ್ಸ್ ವೀಕ್ಷಣೆಗಳ ಜೊತೆಗೆ ವಾಟರ್ ಗೇಮ್ಸ್ ಮುಂತಾದ ಚಟುವಟಿಕೆ ಹಮ್ಮಿಕೊಳ್ಳಲಾಗುವುದು ಎಂದರು.
ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ನಿತೀಶ್ ಕೆ.ಜೆ., ಅಧಿಕಾರಿ ಭವಿಷ್, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಕಂದಾಯ ನಿರೀಕ್ಷಕ ದಿನೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.