ADVERTISEMENT

ಕುಂದಾಪುರ | ರಾಘವೇಂದ್ರ ಕೊಲೆ ಪ್ರಕರಣ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2023, 13:39 IST
Last Updated 6 ಅಕ್ಟೋಬರ್ 2023, 13:39 IST
ಕುಂದಾಪುರದ ಉಪ ವಿಭಾಗೀಯ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ರಾಘವೇಂದ್ರ ಅವರ ಕೊಲೆ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆ ಕರೆ ತರಲಾಗಿತ್ತು.
ಕುಂದಾಪುರದ ಉಪ ವಿಭಾಗೀಯ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ರಾಘವೇಂದ್ರ ಅವರ ಕೊಲೆ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆ ಕರೆ ತರಲಾಗಿತ್ತು.   

ಕುಂದಾಪುರ: ನಗರದ ಚಿಕ್ಕನಸಾಲ್ ರಸ್ತೆಯಲ್ಲಿನ ಡೆಲ್ಲಿ ಬಜಾರ್ ಬಳಿಯಲ್ಲಿ ಭಾನುವಾರ ರಾತ್ರಿ ನಡೆದ ಯುವ ಉದ್ಯಮಿ ರಾಘವೇಂದ್ರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಮೂಲದ ಮೊಹಮ್ಮದ್ ಇಮ್ರಾನ್ (43) ಹಾಗೂ ಶಫಿವುಲ್ಲಾ (40) ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಶುಕ್ರವಾರ ಇಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಪಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ, ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಎರಡನೇ ಹೆಚ್ಚುವರಿ ಸಿವಿಲ್ ಮತ್ತು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ‌ ನ್ಯಾಯಾಧೀಶೆ ಶ್ವೇತಾಕ್ಷಿ ಅವರು ಆರೋಪಿಗಳನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದರು.

ADVERTISEMENT

ಆರೋಪಿಗಳನ್ನು ಆಸ್ಪತ್ರೆಗೆ ಹಾಗೂ ನ್ಯಾಯಾಲಕ್ಕೆ ಕರೆ ತರುವ ವೇಳೆ ಸ್ಥಳೀಯ ರು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರು. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಎಸ್.ಐಗಳಾದ ವಿನಯ್ ಕೊರ್ಲಹಳ್ಳಿ ಹಾಗೂ ಪ್ರಸಾದ್ ಇದ್ದರು.

ಪ್ರಕರಣದ ವಿವರ: ಭಾನುವಾರ ಸಂಜೆ ಸ್ಥಳೀಯ ಖಾರ್ವಿ ಕೇರಿ ನಿವಾಸಿ ರಾಘವೇಂದ್ರ (42), ಚಿಕ್ಕನಸಾಲ್ ರಸ್ತೆಯಲ್ಲಿ ತಮ್ಮ ಕಾರಿನಲ್ಲಿ ಬರುತ್ತಿದ್ದಾಗ ನಡೆದ ಗಲಾಟೆಯ ವೇಳೆ ದುಷ್ಕರ್ಮಿಗಳಿಂದ ಚೂರಿ ಇರಿತಕ್ಕೆ ಒಳಗಾಗಿ, ಸೋಮವಾರ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಸಿಸಿಟಿವಿ ದೃಶ್ಯಾವಳಿ ಹಾಗೂ ಕೆಲವು ಮಹತ್ತರ ಸಾಕ್ಷಿಗಳನ್ನು‌ ಕಲೆ ಹಾಕಿದ್ದರು. ಎಸ್.ಪಿ‌ ಅರುಣ್ ಹಾಗೂ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು ಅವರ ಮಾರ್ಗದರ್ಶನದಲ್ಲಿ ಮೂರು ತಂಡಗಳಲ್ಲಿ ಬೆಂಗಳೂರು, ಶಿವಮೊಗ್ಗ , ಕೊಪ್ಪ, ಕಾರ್ಕಳ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಶೋಧ ಕಾರ್ಯ ನಡೆಸಿದ್ದರು.

‘ಕಾರಿಗೆ ಸೈಡ್ ನೀಡಿಲ್ಲ ಎನ್ನುವ ಕಾರಣಕ್ಕಾಗಿ ಪ್ರಾರಂಭವಾಗಿದ್ದ ಜಗಳವೇ ಕೊಲೆಗೆ ಕಾರಣ ಎಂದು ಹೇಳಲಾಗುತ್ತಿದೆ. ಪೊಲೀಸರ ವಿಸ್ತ್ರತ ತನಿಖೆಯಿಂದ ವಿವರಗಳು ಬಹಿರಂಗವಾಗಬೇಕಿದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.