ಶಿರ್ವ: ಇಲ್ಲಿಗೆ ಸಮೀಪದ ಕುತ್ಯಾರು ಗ್ರಾಮದ ಕೃಷಿ ಕುಟುಂಬಕ್ಕೆ ಸೇರಿದ ದಂಪತಿ ಜೊತೆಯಾಗಿ ದಾಂಪತ್ಯ ಜೀವನ ನಡೆಸಿ, ಅಂತ್ಯಕಾಲದಲ್ಲಿ ಒಟ್ಟಿಗೆ ಇಹಲೋಕ ತ್ಯಜಿಸಿರುವ ಘಟನೆ ಬುಧವಾರ ನಡೆದಿದೆ.
ಕುತ್ಯಾರಿನ ಕೃಷಿ ಕುಟುಂಬದ ರಾಮಣ್ಣ ಶೆಟ್ಟಿ (90) ಎಂಬುವರು ವಯೋಸಹಜ ಕಾಯಿಲೆಯಿಂದ ಅಸ್ವಸ್ಥರಾಗಿದ್ದರು. ಇವರನ್ನು ಕಿನ್ನಿಗೋಳಿಯ ಮೂಲ ಮನೆಗೆ ಕರೆದುಕೊಂಡು ಹೋಗಲು ಕುಟುಂಬದವರು ಮಂಗಳವಾರ ಕುತ್ಯಾರಿನ ಮನೆಗೆ ಆಂಬುಲೆನ್ಸ್ ತರಿಸಿದ್ದರು. ಆಂಬುಲೆನ್ಸ್ ಸೈರನ್ ಶಬ್ದ ಕೇಳಿ ಅವರ ಪತ್ನಿ ಶಾಂತಾ ಶೆಟ್ಟಿ (85) ಅವರಿಗೆ ಹೃದಯಘಾತವಾಗಿದೆ. ಅದೇ ಆಂಬುಲೆನ್ಸ್ನಲ್ಲಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ, ಅವರು ಮೃತಪಟ್ಟರು.
ಶಾಂತಾ ಶೆಟ್ಟಿ ಅವರ ಮೃತದೇಹವನ್ನು ಮನೆಗೆ ತಂದು ಅಂತ್ಯಕ್ರಿಯೆಗೆ ಸಿದ್ಧತೆ ಮಾಡುತ್ತಿದ್ದಂತೆ ರಾಮಣ್ಣ ಶೆಟ್ಟಿ ಮೃತಪಟ್ಟಿದ್ದಾರೆ. ಒಂದೇ ಚಿತೆಯಲ್ಲಿರಿಸಿ ಇವರಿಬ್ಬರ ಅಂತಿಮ ಸಂಸ್ಕಾರ ನಡೆಸಲಾಯಿತು ಎಂದು ಕುತ್ಯಾರು ಪ್ರಸಾದ್ ಶೆಟ್ಟಿ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.