ಪಡುಬಿದ್ರಿ: ಪಣಿಯೂರಿನಲ್ಲಿರುವ ಪಡುಬಿದ್ರಿ ರೈಲು ನಿಲ್ದಾಣದಲ್ಲಿ ಮಂಗಳೂರು– ಮಡಗಾಂವ್ ಎಕ್ಸ್ಪ್ರೆಸ್ ರೈಲು ನಿಲುಗಡೆ ಆರಂಭಗೊಂಡಿದ್ದು, ರೈಲು ನಿಲುಗಡೆ ಹೋರಾಟ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ನೇತೃತ್ವದಲ್ಲಿ ರೈಲನ್ನು ಸ್ವಾಗತಿಸಲಾಯಿತು.
ಗೋವಾದಿಂದ ರೈಲು ಚಲಾಯಿಸಿಕೊಂಡು ಬಂದ ಚಾಲಕರನ್ನು ಶಾಲು ಹೊದಿಸಿ ಗೌರವಿಸಲಾಯಿತು.
ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಪಣಿಯೂರು ರೈಲು ನಿಲ್ದಾಣದ ಅಭಿವೃದ್ಧಿ, ಮಂಗಳೂರು– ಮಡಗಾಂವ್ ಎಕ್ಸ್ಪ್ರೆಸ್, ಮುಂಬೈ, ಬೆಂಗಳೂರು ರೈಲು ನಿಲುಗಡೆಗೆ ಅವಕಾಶ ನೀಡುವಂತೆ ಹಲವು ವರ್ಷಗಳಿಂದ ಬೇಡಿಕೆ ನೀಡುತ್ತಾ ಬಂದಿದ್ದೇವೆ. ಹೋರಾಟಕ್ಕೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಬೆಂಬಲ ನೀಡಿದ್ದು, ಕೇಂದ್ರ ರೈಲ್ವೇ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರ ಮೂಲಕವಾಗಿ ನಮ್ಮ ಬೇಡಿಕೆ ಈಡೇರಿಸಿದ್ದಾರೆ ಎಂದರು.
ರೈಲು ನಿಲ್ದಾಣ ಅಭಿವೃದ್ದಿಗೆ ಪೂರಕವಾಗಿ ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ಅದಾನಿ ಗ್ರೂಪ್ಸ್ ಸಿಎಸ್ಆರ್ ಅನುದಾನದಲ್ಲಿ ₹15 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಲಾಗಿದ್ದು, ಕಾಮಗಾರಿಗೆ ಮತ್ತೆ ₹20 ಲಕ್ಷ ಸಿಎಎಸ್ಆರ್ ಅನುದಾನ ಬಳಸಲಾಗುವುದು. ಸೋಲಾರ್ ದೀಪಗಳ ಅಳವಡಿಕೆಗೂ ಒತ್ತು ನೀಡಲಾಗುವುದು ಎಂದು ತಿಳಿಸಿದರು.
ಹೋರಾಟ ಸಮಿತಿಯ ರಾಕೇಶ್ ಕುಂಜೂರು, ಗ್ರಾಮಸ್ಥರು, ರೈಲ್ವೆ ಸ್ಟೇಷನ್ ಮಾಸ್ಟರ್ ಶಂಕರನ್, ಸಿಬ್ಬಂದಿ ಸುಜಿತ್, ಆದೇಶ್ ಹೆಗ್ಡೆ, ಲಲಿತಾ, ಶಾಂತಾ, ರಿಕ್ಷಾ ಚಾಲಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.