
ಕುಂದಾಪುರ: ಐದು ಬಾರಿ ವಿಧಾನಸಭಾ ಚುನಾವಣೆಗೆ ನಿಂತಿದ್ದರೂ, ಮಾಣಿಗೋಪಾಲ ಅವರಿಗೆ ವಿಧಾನಸಭೆಗೆ ಆರಿಸಿ ಹೋಗಲು ಆಗಿರಲಿಲ್ಲ, ಯೋಗ್ಯತೆ ಇದ್ದರೂ, ಅಧಿಕಾರದ ಯೋಗ ಇರಲಿಲ್ಲ ಎಂದು ಶಾಸಕ ಎ.ಕಿರಣ್ ಕೊಡ್ಗಿ ಹೇಳಿದರು.
ಇಲ್ಲಿನ ಬೋರ್ಡ್ ಹೈಸ್ಕೂಲಿನ ಶ್ರೀ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಶನಿವಾರ ಸಂಜೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕುಂದಾಪುರ ತಾಲ್ಲೂಕು ಘಟಕದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ನೇತಾರ ಮಾಣಿಗೋಪಾಲ ಅವರ ಆತ್ಮ ಕಥನ ‘ನಾನು ಮಾಣಿಗೋಪಾಲ’ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜವಾದಿ ಸಿದ್ದಾಂತ ಮತ್ತು ಮಾಣಿಗೋಪಾಲ ವಿಷಯದ ಬಗ್ಗೆ ಮಾತನಾಡಿದ ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ, ಬೇರೆ ಬೇರೆ ರಾಜಕೀಯ ಅಭಿಪ್ರಾಯ ಇದ್ದರೂ, ವೈಯಕ್ತಿಕ ಸಂಬಂಧಗಳನ್ನು ಗಟ್ಟಿಯಾಗಿ ಉಳಿಸಿಕೊಂಡವರು ಮಾಣಿಗೋಪಾಲರು ಎಂದರು.
ಸಮಾಜವಾದಿ ಮುಖಂಡರ ಜೊತೆಯಲ್ಲಿ ಬೆಳೆದು ಬಂದಿದ್ದ ನಮಗೆಲ್ಲ ಸಂಖ್ಯೆ ಮುಖ್ಯವಾಗುತ್ತಿರಲಿಲ್ಲ, ಸಮಸಮಾಜದ ಕಲ್ಪನೆಯಲ್ಲಿ ಬಲಿಷ್ಠ ಸಮಾಜವನ್ನೇ ಕಟ್ಟುವುದೇ ಮುಖ್ಯವಾಗುತ್ತದೆ. ಇಲ್ಲದಾಗ ವ್ಯಕ್ತಿಯನ್ನು ಹೊಗಳುವುದಕ್ಕಿಂತ, ಅವರು ಇದ್ದಾಗಲೇ ಅವರು ಮಾಡಿದ ಒಳ್ಳೆಯ ಕಾರ್ಯವನ್ನು ನೆನಪಿಸಿಕೊಳ್ಳುವ ಪ್ರವೃತ್ತಿ ಹೆಚ್ಚಾಗಬೇಕು. ಜನಸಾಮಾನ್ಯರ ಜೊತೆ ಸಾಮಾನ್ಯನಂತೆ ಜೀವನವನ್ನು ರೂಢಿಸಿಕೊಂಡಿದ್ದ ಮಾಣಿಗೋಪಾಲರ ಜೀವನವೇ ನಿಜವಾದ ಸಮಾಜವಾದದ ಕನ್ನಡಿಯಾಗಿದೆ ಎಂದು ಹೇಳಿದರು.
ಮೂರ್ತೆದಾರರ ಚಳುವಳಿಯಲ್ಲಿ ಮಾಣಿಗೋಪಾಲ ಕುರಿತು ಮಾತನಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರ್ತೆದಾರಿಕೆ ವೃತ್ತಿಗೆ ಸಮಸ್ಯೆ ಬಂದಾಗ, ಪರಿಹಾರಕ್ಕೆ ಹೋರಾಟ ನಡೆದಾಗ, ಅವಿದ್ಯಾವಂತರೇ ಹೆಚ್ಚಾಗಿದ್ದ ಮೂರ್ತೆದಾರರ ಪರವಾಗಿ ಅವರ ಹೋರಾಟಕ್ಕೆ ನಾಯಕತ್ವ ನೀಡಿ, ಹೋರಾಟದ ಕಿಚ್ಚನ್ನು ಹೆಚ್ಚಿಸಿದ್ದವರು ಮಾಣಿಗೋಪಾಲರು. ಸಮಯೋಚಿತವಾದ ನಿರ್ಧಾರ ತೆಗೆದುಕೊಳ್ಳುವ ಗಟ್ಟಿ ಮನಸ್ಸು ಅವರಿಗೆ ಇತ್ತು. ಶೋಷಿತರಿಗೆ ಧ್ವನಿಯಾಗಿ ಜೀವನದ ದಿನಚರಿಯನ್ನು ರೂಪಿಸಿಕೊಂಡಿದ್ದ ಅವರು, ಜಿಲ್ಲೆಯ ಚಳುವಳಿಯ ಇತಿಹಾಸದಲ್ಲಿ ಹೊಸ ಭಾಷ್ಯ ಬರೆದಿದ್ದರು.
ಪುಸ್ತಕ ಬಿಡುಗಡೆ ಮಾಡಿದ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಮಾತನಾಡಿ, ಸಮಾಜಕ್ಕಾಗಿ ಬದುಕನ್ನು ಅರ್ಪಿಸಿದ ಮಾಣಿಗೋಪಾಲರು, ನಿಜವಾದ ಬಡವರ ಬಂಧು. ನಿರ್ಧಾರದಲ್ಲಿ ಗಟ್ಟಿತನ ಇದ್ದಾಗ ಮಾತ್ರ ಹೋರಾಟಗಳು ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯವಾಗುತ್ತದೆ. ಸತ್ಯ, ನ್ಯಾಯ, ಧರ್ಮದ ನುಡಿ-ನಡೆಯನ್ನು ಅಳವಡಿಸಿಕೊಂಡಿದ್ದ ಅವರ ಶುದ್ಧ ಚಾರಿತ್ರ್ಯ ಹಾಗೂ ಜೀವನದ ಶೈಲಿ ಇತರರಿಗೆ ಮಾರ್ಗದರ್ಶಕವಾಗಿದೆ. ಸ್ವಾತಂತ್ರ್ಯ ನಂತರದ ರಾಜಕೀಯ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದಂತಹ ರಾಜಕಾರಣಿಗಳನ್ನು ನೀಡಿದ ಕುಂದಾಪುರ ತಾಲ್ಲೂಕು ರಾಜ್ಯದ ಭೂಪಟದಲ್ಲಿ ಗೌರವದ ಸ್ಥಾನ ಮಾನವನ್ನು ಪಡೆದುಕೊಂಡಿದೆ ಎಂದರು.
ಮಾಣಿಗೋಪಾಲ ಹಾಗೂ ಗಿರಿಜಾ ಮಾಣಿಗೋಪಾಲ ದಂಪತಿಯನ್ನು ಗೌರವಿಸಲಾಯಿತು. ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಪುರಸಭೆ ಅಧ್ಯಕ್ಷ ಕೆ.ಮೋಹನ್ದಾಸ್ ಶೆಣೈ, ಜಿಲ್ಲಾ ಕಸಾಪ ಸ್ಥಾಪಕಾಧ್ಯಕ್ಷ ಎ.ಎಸ್.ಎನ್ ಹೆಬ್ಬಾರ್, ತಾಲ್ಲೂಕು ಕಸಾಪ ಅಧ್ಯಕ್ಷ ಡಾ.ಉಮೇಶ್ ಪುತ್ರನ್, ಪುಸ್ತಕ ನಿರೂಪಕ ಕೇಶವ್ ಸಸಿಹಿತ್ಲು, ವ್ಯಂಗ್ಯ ಚಿತ್ರಕಾರ ಚಂದ್ರಶೇಖರ ಶೆಟ್ಟಿ, ಗಿರಿಜಾ ಮಾಣಿಗೋಪಾಲ, ಮಾಣಿ ರಂಜನ್ ಇದ್ದರು.
ಕುಂದಪ್ರಭ ಸಂಸ್ಥೆಯ ಯು.ಎಸ್.ಶೆಣೈ ಪುಸ್ತಕ ಪರಿಚಯ ಮಾಡಿದರು. ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಶಿಕ್ಷಕ ನರೇಂದ್ರಕುಮಾರ್ ಕೋಟ ಸ್ವಾಗತಿಸಿದರು, ನಿವೃತ್ತ ಮುಖ್ಯ ಶಿಕ್ಷಕ ದಿನಕರ್ ಆರ್ ಶೆಟ್ಟಿ ನಿರೂಪಿಸಿದರು, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಮನೋಹರ್ ಭಟ್ ವಂದಿಸಿದರು.
ಮಾಣಿ ಗೋಪಾಲರೇ ಯಾಕೆ ಬಿಜೆಪಿ ಬಿಟ್ರಿ ಎಂದು ಕೇಳಿದರೇ ರಾಮನ್ ತೋರಿಸ್ತಿನಿ ಅಂತಾ ಕಲ್ಲುಕುಟಿಕನ್ನ್ ತೋರಿಸಿದ್ರಲ್ಲಾ ಎಂದು ತಮಾಷೆಯ ಮಾತನ್ನು ಹೇಳಿದ್ದರು
-ಕೋಟ ಶ್ರೀನಿವಾಸ ಪೂಜಾರಿ ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.