ADVERTISEMENT

ಕಾಪು: ಮಟ್ಟುಗುಳ್ಳಕ್ಕೆ ಸಿಗಬೇಕಿದೆ ಸರ್ಕಾರದ ಉತ್ತೇಜನ

400 ವರ್ಷಗಳ ಇತಿಹಾಸವಿರುವ ಜಿಐ’ ಮಾನ್ಯತೆ ಪಡೆದಿರುವ ಹಸಿರು ಬದನೆ

ಪ್ರಕಾಶ ಸುವರ್ಣ ಕಟಪಾಡಿ
Published 28 ನವೆಂಬರ್ 2024, 6:56 IST
Last Updated 28 ನವೆಂಬರ್ 2024, 6:56 IST
ಮಟ್ಟುಗುಳ್ಳ
ಮಟ್ಟುಗುಳ್ಳ   

ಶಿರ್ವ: ‘ಜಿಐ’ ಮಾನ್ಯತೆ ಪಡೆದಿರುವ ಹಸಿರು ಬದನೆ ಎಂದೇ ಹೆಸರಾಗಿರುವ ಮಟ್ಟುಗುಳ್ಳವನ್ನು ಕಾಪು ತಾಲ್ಲೂಕಿನ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಟ್ಟು ಗ್ರಾಮದ ಕೃಷಿಕರು 400 ವರ್ಷಗಳಿಂದ ಬೆಳೆಸುತ್ತಾ ಬಂದಿದ್ದಾರೆ. ವಾದಿರಾಜರ ಮಹಿಮಾ ಫಲವೆಂದೇ ಖ್ಯಾತಿ ಪಡೆದಿರುವ ಇದು ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಮಹೋತ್ಸವದಲ್ಲಿ ಅನಾದಿ ಕಾಲದಿಂದಲೂ ಪ್ರಮುಖ ಖಾದ್ಯವಾಗಿದೆ.

ಕರಾವಳಿ ಜಿಲ್ಲೆಗಳಲ್ಲಿ ಮಾತ್ರವಲ್ಲದೆ ದೇಶ ವಿದೇಶಗಳಲ್ಲಿ ಹೆಸರಾಗಿರುವ ಮಟ್ಟುಗುಳ್ಳದ ವಿಶಿಷ್ಟ ರುಚಿಗೆ ಮನ ಸೋಲದವರೇ ಇಲ್ಲ ಎಂದರೆ ತಪ್ಪಾಗಲಾರದು. ಪ್ರಸ್ತುತ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಮಟ್ಟುಗುಳ್ಳವನ್ನು ಮಟ್ಟು, ಕೈಪುಂಜಾಲ್ ಪ್ರದೇಶದ 215ಕ್ಕೂ ಅಧಿಕ ಕುಟುಂಬಗಳು ಚಳಿಗಾಲದಲ್ಲಿ ಬೆಳೆಸುತ್ತಾರೆ. ಮಟ್ಟುಗುಳ್ಳ ಸ್ಥಳೀಯ, ದೇಶ– ವಿದೇಶಗಳ ಮಾರುಕಟ್ಟೆಗಳಿಗೆ ಪ್ರವೇಶಿಸಿದೆ.

ಉಡುಪಿ ಸೋದೆ ಮಠದ ಯತಿ ವಾದಿರಾಜತೀರ್ಥ ಸ್ವಾಮೀಜಿ ಅವರು ಈ ಭಾಗದ ಜನರ ಕಷ್ಟ ಗಮನಿಸಿ, ಅವರ ಜೀವನೋಪಾಯಕ್ಕಾಗಿ ಮಂತ್ರಿಸಿಕೊಟ್ಟ ಬೀಜದಿಂದ ಮಟ್ಟುಗುಳ್ಳ ಕೃಷಿ ಹುಟ್ಟಿಕೊಂಡಿತು. ಪೌರಾಣಿಕ ಹಿನ್ನಲೆ ಪ್ರಕಾರ ಸಮುದ್ರ ತೀರದ ಹಿಡಿ ಮಣ್ಣನ್ನು ವಾದಿರಾಜರು ತೀರವಾಸಿಗಳಿಗೆ ಕೊಟ್ಟು ಇದನ್ನು ಬಿತ್ತನೆ ಮಾಡುವಂತೆ ಆಶೀರ್ವಾದ ಮಾಡಿದರಂತೆ. ಅದರಂತೆ ನಡೆದುಕೊಂಡ ಮಟ್ಟು ಗ್ರಾಮದ ಜನರು ಈ ಭಾಗದಲ್ಲಿ ಕ್ರಮೇಣ ಸಮೃದ್ಧ ಗುಳ್ಳ ಕೃಷಿ ಮಾಡಿದರು. ಮಟ್ಟು ಗ್ರಾಮದಲ್ಲಿ ಹುಟ್ಟಿಕೊಂಡ ಈ ತಳಿ ‘ಮಟ್ಟುಗುಳ್ಳ ಎಂದು ಖ್ಯಾತಿ ಪಡೆಯಿತು. ಉಡುಪಿಗೆ ಸಮೀಪದ ಉದ್ಯಾವರ ಪಾಪನಾಶಿನಿ, ಪಿನಾಕಿನಿ, ಸ್ವರ್ಣಾ ನದಿ ತಟದಲ್ಲಿ ಭತ್ತ ಬೆಳೆ ಪ್ರಧಾನವಾಗಿದ್ದರೂ ಪರ್ಯಾಯ ಬೆಳೆಯಾಗಿ ಮಟ್ಟುಗುಳ್ಳವನ್ನು 500 ಎಕ್ರೆಗೂ ಅಧಿಕ ಪ್ರದೇಶದಲ್ಲಿ ಬೆಳೆಯಲಾಗುತ್ತದೆ.

ADVERTISEMENT

ಮಟ್ಟುಗುಳ್ಳವನ್ನು ಹೆಚ್ಚಿನ ಕೃಷಿಕರು ಸಾವಯವ ಗೊಬ್ಬರ ಬಳಕೆ ಮಾಡಿ ಬೆಳೆಸುತ್ತಾರೆ. ಹಾಗಾಗಿ ಇದಕ್ಕೆ ಬೇಡಿಕೆಯಿದೆ. ಹಟ್ಟಿಗೊಬ್ಬರ, ಮೀನಿನ ಗೊಬ್ಬರ, ಕಹಿಬೇವಿನ ಹಿಂಡಿ ಬಳಕೆಯಿಂದ ಗಿಡಗಳು ಸಮೃದ್ಧವಾಗಿ ಬೆಳೆದು ಹೆಚ್ಚಿನ ಇಳುವರಿ ನೀಡುತ್ತವೆ. ಕೆಲವು ಕೃಷಿಕರು ರಾಸಾಯನಿಕ ಗೊಬ್ಬರವನ್ನೂ ಬಳಸಿಕೊಂಡು ಕೃಷಿ ಮಾಡಿ ಉತ್ತಮ ಫಸಲು ಕಂಡಿದ್ದಾರೆ. ಮಟ್ಟು ಕರಾವಳಿ ತೀರ ಪ್ರದೇಶದ ಮಣ್ಣು, ಪೂರಕ ವಾತಾವರಣದಿಂದಾಗಿ ಮಟ್ಟು ಗುಳ್ಳ ಹೇರಳವಾಗಿ ಬೆಳೆಯಲಾಗುತ್ತದೆ. ಸಮುದ್ರ ತೀರದ ಮರಳು ಮಿಶ್ರಿತ ಕಪ್ಪು ಮಣ್ಣು, ಚಳಿಗಾಲದ ತಂಪು ವಾತಾವರಣದಲ್ಲಿ ಮಟ್ಟುಗುಳ್ಳ ಹೇರಳವಾಗಿ ಇಳುವರಿ ಕೊಡುತ್ತದೆ. ಆಧುನಿಕ ಮಲ್ಚಿಂಗ್ ಪದ್ಧತಿಯಲ್ಲಿ ಮಟ್ಟುಗುಳ್ಳ ಬೆಳೆಸುವ ನಿಟ್ಟಿನಲ್ಲಿ ತೋಟಗಾರಿಕಾ ಇಲಾಖೆಯಿಂದ ಉತ್ತೇಜನ ದೊರೆಯುತ್ತಿದೆ. ಮಟ್ಟುಗುಳ್ಳು ಬೆಳೆಗಾರರ ಸಂಘದ ಮೂಲಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಪ್ರತಿವರ್ಷ ಮಟ್ಟುಗುಳ್ಳ ಅಕಾಲಿಕ ಮಳೆ, ನೆರೆ ಹಾವಳಿಗೆ ತುತ್ತಾಗಿ ಬೆಳೆ ನಾಶವಾಗುತ್ತಿರುವುದರಿಂದ ಗುಳ್ಳ ಕೃಷಿಕರು ವಿಮುಖರಾಗುತ್ತಿದ್ದಾರೆ. ಕಾಲಕಾಲಕ್ಕೆ ಸರ್ಕಾರದಿಂದ ಬೆಳೆಗಾರರಿಗೆ ಪರಿಹಾರ, ಸೌಲಭ್ಯ ದೊರಕದ ಹಿನ್ನೆಲೆಯಲ್ಲಿ ನಿರಾಸಕ್ತಿ ವಹಿಸುತ್ತಿದ್ದಾರೆ. ಸರ್ಕಾರದಿಂದ ಹೆಚ್ಚಿನ ಉತ್ತೇಜನ ದೊರೆಯಬೇಕು ಎಂಬುದು ಬೆಳೆಗಾರರ ಆಗ್ರಹ.

ವಿಶೇಷ ಪ್ಯಾಕೇಜ್ ದೊರೆತಿಲ್ಲ

ಮಟ್ಟುಗುಳ್ಳ ಬೆಳೆಗಾರರ ಸಂಘದ ನೇತೃತ್ವದಲ್ಲಿ ಮಟ್ಟುಗುಳ್ಳಕ್ಕೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ಕ್ವಿಂಟಾಲ್‌ಗೆ ₹700ರಂತೆ ರೈತರಿಗೆ ದೊರೆತರೆ ವಿವಿಧ ಮಾರುಕಟ್ಟೆಗಳಿಗೆ ಕ್ವಿಂಟಾಲ್‌ಗೆ ₹800ರಂತೆ ವಿಲೇ ಮಾಡಲಾಗುತ್ತದೆ. ಜಿಐ ಮಾನ್ಯತೆ ಪಡೆದು ನಾಲ್ಕೈದು ವರ್ಷಗಳೇ ಕಳೆದರೂ ಸರ್ಕಾರದಿಂದ ಮಟ್ಟುಗುಳ್ಳಕ್ಕೆ ವಿಶೇಷ ಪ್ಯಾಕೇಜ್ ಅಥವಾ ವಿಶೇಷ ಅನುದಾನ ದೊರೆತಿಲ್ಲ. ಬೆಳೆಗಾರರ ಸಮಸ್ಯೆಗಳಿಗೂ ಸ್ಪಂದನೆ ದೊರೆಯುತ್ತಿಲ್ಲ ಎನ್ನುತ್ತಾರೆ ಮಟ್ಟುಗುಳ್ಳ ಬೆಳೆಗಾರರ ಸಂಘದ ಅಧ್ಯಕ್ಷ ಸುನೀಲ್ ಡಿ. ಬಂಗೇರ.

ರುಚಿ ಬೇರೆಲ್ಲೂ ದೊರೆಯದು

ಮಟ್ಟು ಗ್ರಾಮದಲ್ಲಿ 1 ಎಕ್ರೆ ಪ್ರದೇಶದಲ್ಲಿ ಭತ್ತ ಕೃಷಿಯೊಂದಿಗೆ ಮಟ್ಟುಗುಳ್ಳವನ್ನು ಆಧುನಿಕ ಮಾದರಿಯಲ್ಲಿ ಬೆಳೆಸುತ್ತಿದ್ದೇನೆ. ಈ ಬಾರಿ ಉತ್ತಮ ಇಳುವರಿಯಾಗಿದ್ದು ಹೆಚ್ಚಿನ ಬೇಡಿಕೆಯೂ ಮಾರುಕಟ್ಟೆಯಲ್ಲಿ ಲಭ್ಯವಾಗಿದೆ. ಮಟ್ಟುಗುಳ್ಳ ಬೆಳೆಗಾರರ ಸಂಘದ ಮೂಲಕ ಪ್ರಥಮ ದರ್ಜೆಯ ಗುಳ್ಳಕ್ಕೆ ಕೆ.ಜಿಗೆ ₹70ರಂತೆ ದ್ವಿತೀಯ ದರ್ಜೆಗೆ ಕೆ.ಜಿಗೆ ₹30ರಂತೆ ದರ ನಿಗದಿ ಪಡಿಸಲಾಗಿದೆ. ಮಟ್ಟು ಗ್ರಾಮದ ಮಣ್ಣಿನ ಸೊಗಡಿನ ಮಟ್ಟುಗುಳ್ಳ ರುಚಿ ಬೇರೆಲ್ಲೂ ದೊರೆಯದು ಎನ್ನುತ್ತಾರೆ ಕೃಷಿಕ ರವಿ ಎಂ. ಶೇರಿಗಾರ್.

ಮಟ್ಟುಗುಳ್ಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.