ಉಡುಪಿ: ಕೋಡಿ ಕನ್ಯಾಣ ಬಳಿ ಜೆಟ್ಟಿ ಹೂಳೆತ್ತುವ ಕಾಮಗಾರಿಯ ಸಂಬಂಧ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆಯಿತು.
ಐರೋಡಿಯ ಸ್ಥಳೀಯರೊಬ್ಬರು ಜೆಟ್ಟಿ ಹೂಳೆತ್ತುವ ಕಾಮಗಾರಿ ವಿರುದ್ಧ ರಾಷ್ಟ್ರೀಯ ಹಸಿರು ಪೀಠದಲ್ಲಿ ದಾವೆ ಹೂಡಿದ್ದು, ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಾದಿಸಲು ವಕೀಲರ ನೇಮಕ ಮಾಡುವ ವಿಚಾರ ಸಭೆಯಲ್ಲಿ ಚರ್ಚೆಯಾಯಿತು.
ಕೋಡಿ ಕನ್ಯಾಣದ ಜೆಟ್ಟಿ ಹೂಳೆತ್ತುವ ಕಾಮಗಾರಿಯು ಬಂದರು ಮತ್ತು ಮೀನುಗಾರಿಕೆ ಇಲಾಖೆಯಿಂದ ಅನುಷ್ಠಾನಗೊಳ್ಳುತ್ತಿದ್ದು, ಕೋಡಿ ಗ್ರಾಮದ ಸೇತುವೆ ಬಳಿ ಹೂಳೆತ್ತಿದ ಮರಳು ಶೇಖರಿಸಿದ್ದಕ್ಕೆ ದಾವೆ ಹೂಡಲಾಗಿದೆ.
ದಾವೆಯಿಂದ ಕಾಮಗಾರಿ ಕುಂಠಿತವಾಗಿದ್ದು, ಯಾಂತ್ರಿಕೃತ ದೋಣಿಗಳನ್ನು ಮೀನುಗಾರರು ಒಳಗೆ ತರಲಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಹೂಳೆತ್ತುವ ಕಾಮಗಾರಿ ಮುಂದುವರಿಸಲು ತುರ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಹೆಜಮಾಡಿ ಬಂದರು ನಿರ್ಮಾಣ, ಗಂಗೊಳ್ಳಿ ಜೆಟ್ಟಿ ದುರಸ್ತಿ, ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಜಟ್ಟಿ ವಿಸ್ತರಣೆ, ಹಂಗಾರಕಟ್ಟೆಯಲ್ಲಿ ₹ 130 ಕೋಟಿ ವೆಚ್ಚದ ಬಂದರು ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ಮರವಂತೆ, ಕೊಡೇರಿ ಮೀನುಗಾರಿಕಾ ಬಂದರಿನ ಅಭಿವೃದ್ಧಿ ಕಾಮಗಾರಿಯ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.
ಕೋಡಿ ಕನ್ಯಾಣ ಜೆಟ್ಟಿ ಹೂಳೆತ್ತುವ ಕಾಮಗಾರಿಗೆ ಅನುದಾನ ಬಿಡುಗಡೆ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜತೆ ಚರ್ಚಿಸುವುದಾಗಿ ಸಚಿವರು ತಿಳಿಸಿದರು.
ಸಭೆಯಲ್ಲಿ ಮೀನುಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಮತ್ತು ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಗೋಗಿ, ಮೀನುಗಾರಿಕೆ ಇಲಾಖೆಯ ನಿರ್ದೇಶಕ ಪ್ರಭುಲಿಂಗ ಕವಳಕಟ್ಟಿ, ಸಚಿವರ ಆಪ್ತ ಕಾರ್ಯದರ್ಶಿ ಡಾ.ಉದಯ ಕುಮಾರ್ ಶೆಟ್ಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.