ಉಡುಪಿ: ಕೊರೊನಾ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ಗೆ ದಾಖಲಿಸಿ, ಆಮ್ಲಜನಕ ಪ್ರಮಾಣ 94ಕ್ಕಿಂತ ಕಡಿಮೆಯಾದರೆ ತಕ್ಷಣ ಅಸ್ಪತ್ರೆಗೆ ದಾಖಲಿಸಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಕೆ.ರಘುಪತಿ ಭಟ್ ಅಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್ ಎರಡನೇ ಅಲೆ ನಿಯಂತ್ರಿಸುವ ಸಂಬಂಧ ರಚಿಸಲಾಗಿರುವ ಟಾಸ್ಕ್ ಫೋರ್ಸ್ ತಂಡದ ಜವಾಬ್ದಾರಿ ಮತ್ತು ಕಾರ್ಯಭಾರದ ಕುರಿತು ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದರು.
ನಗರಸಭಾ ವ್ಯಾಪ್ತಿಯ ಪರ್ಕಳ, ಸರಳಬೆಟ್ಟು, ಈಶ್ವರನಗರ, ಮಣಿಪಾಲ, ಇಂದ್ರಾಳಿ, ಮೂಡುಸಗ್ರಿ, ಕಡಿಯಾಳಿ, ಕುಂಜಿಬೆಟ್ಟು, ಕಸ್ತೂರಬಾ ನಗರ, ಇಂದಿರಾನಗರ, ಬಡಗಬೆಟ್ಟು, ಒಳಕಾಡು, ಚಿತ್ಪಾಡಿ ಸೇರಿದಂತೆ ಇತರೆ ವಾರ್ಡ್ಗಳ ನಗರಸಭಾ ಸದಸ್ಯರು, ಆಶಾ ಕಾರ್ಯಕರ್ತೆಯರು, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಳು ಸಭೆಯಲ್ಲಿ ಭಾಗವಹಿಸಿದ್ದರು.
ಉಡುಪಿಯ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಬೆಡ್ ಮತ್ತು ಆಮ್ಲಜನಕ ವ್ಯವಸ್ಥೆ ಹೊಂದಿರುವ ಬೆಡ್ಗಳ ಕೊರತೆ ಇಲ್ಲ. ಆಯುಷ್ಮಾನ್ ಯೋಜನೆಯಡಿಸೋಂಕಿತರಿಗೆ ಸಂಪೂರ್ಣವಾಗಿ ಉಚಿತ ಚಿಕಿತ್ಸೆ ದೊರೆಯಲಿದೆ. ಐಸೋಲೇಷನ್ಗಾಗಿ ಆರಂಭಿಸಿರುವ ಕೋವಿಡ್ ಕೇರ್ ಸೆಂಟರ್ನಲ್ಲೂ ಸಂಪೂರ್ಣ ಉಚಿತ ವ್ಯವಸ್ಥೆ ಇದ್ದು, ಸೋಂಕಿತರ ಆರೋಗ್ಯದ ಮೇಲೆ ನಿಗಾ ವಹಿಸಲು 24 ಗಂಟೆಯೂ ವೈದ್ಯಕೀಯ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಅಪಪ್ರಚಾರಗಳಿಗೆ ಕಿವಿಗೊಡದಂತೆ ಜನರಿಗೆ ತಿಳಿವಳಿಕೆ ಮೂಡಿಸಬೇಕು ಎಂದು ಶಾಸಕರು ಸೂಚಿಸಿದರು.
ಕೋವಿಡ್ ದೃಢಪಟ್ಟು ರೋಗ ಲಕ್ಷಣಗಳಿಲ್ಲದೆ ಹೋಂ ಐಸೋಲೇಷನ್ಲ್ಲಿರುವವರ ಮನೆಗೆ ಪ್ರತಿನಿತ್ಯ ಭೇಟಿನೀಡಿ ಅವರ ಆಮ್ಲಜನಕ ಮಟ್ಟವನ್ನು ಪರೀಕ್ಷಿಸಬೇಕು. ವರದಿಯನ್ನು ಮೇಲಧಿಕಾರಿಗಳಿಗೆ ನೀಡಬೇಕು ಎಂದರು.
ಸಭೆಯಲ್ಲಿ ಮಣಿಪಾಲ ಇನ್ಸ್ಪೆಕ್ಟರ್ ಮಂಜುನಾಥ್ ನಾಯ್ಕ್, ನಗರಸಭೆ ಆಯುಕ್ತರಾದ ಉದಯ್ ಕುಮಾರ್ ಶೆಟ್ಟಿ, ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ತಾಲೂಕು ಆರೋಗ್ಯಾಧಿಕಾರಿ ವಾಸುದೇವ ಉಪಾಧ್ಯಾಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.