
ಶಿರ್ವ: ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಲು ತಪಸ್ಸಿನಂತೆ ಪರಿಶ್ರಮ ಮುಖ್ಯ. ಇಂದು ಪ್ರತಿಭೆ ಪ್ರದರ್ಶನಕ್ಕೆ ವಿಪುಲ ಅವಕಾಶಗಳಿದ್ದು, ಸದುಪಯೋಗ ಪಡಿಸಿಕೊಂಡು ಬೆಳೆಯಬೇಕು ಎಂದು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಹೇಳಿದರು.
ಕರಪುರ ರೋಟರಿ ಭವನದಲ್ಲಿ ಭಾನುವಾರ ಶಂಕರಪುರ ಸರ್ವಕಲಾ ಸೇವಾ ಟ್ರಸ್ಟ್ ವತಿಯಿಂದ ನಡೆದ ರಾಷ್ಟ್ರಮಟ್ಟದ ಸಪ್ತಸ್ವರ ಸೀಸನ್– 2 ಗಾಯನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತ ನಿರ್ದೇಶಕ ಲಯ ಕೋಕಿಲ ಮಾತನಾಡಿ, ಸಂಗೀತ ಕಲೆ ದೈವದತ್ತವಾಗಿ ಬರುತ್ತದೆ ವಿನಃ ಹಣಕೊಟ್ಟು ಕೊಳ್ಳಲು ಸಾಧ್ಯವಿಲ್ಲ. ಸಂಗೀತಕ್ಕೆ ಮಹಾನ್ ಶಕ್ತಿಯಿದ್ದು, ತಪಸ್ಸಿನಂತೆ ಸಾಧನೆ ಮಾಡಬೇಕು ಎಂದರು.
ಶಂಕರಪುರ ಚರ್ಚ್ ಧರ್ಮಗುರು ಪ್ರಕಾಶ್ ಅನಿಲ್ ಕ್ಯಾಸ್ತಲಿನೊ, ದೊಡ್ಡಣಗುಡ್ಡೆ ದುರ್ಗಾ ಆದಿಶಕ್ತಿ ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ, ಸರ್ಕಾರಿಗುಡ್ಡೆ ಜಾಮಿಯ ಮಸೀದಿ ಧರ್ಮಗುರು ಯೂಸುಫ್ ಝಹ್ರಿ ವಿಟ್ಲ, ‘ಸ್ಕೂಲ್ ಲೀಡರ್’ ಚಿತ್ರ ನಿರ್ಮಾಪಕ ಕೆ. ಸತ್ಯೇಂದ್ರ ಪೈ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮ ಭಾಗವಹಿಸಿದ್ದರು.
ಜೂಲಿಯಾನ ದಾಂತಿ ಉದ್ಯಾವರ ಅವರಿಗೆ ಕೃಷಿಕ ರತ್ನ, ಅಲಿಷಾ ಮೆಂಡೋನ್ಸ ಶಂಕರಪುರ ಅವರಿಗೆ ಗಾನ ರತ್ನ, ಬಿ. ಮೊಯಿದ್ದೀನ್ ಎ.ಆರ್. ಉಡುಪಿ ಅವರಿಗೆ ಸಮಾಜ ರತ್ನ, ಇನ್ನಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲಿನಿ ಶೆಟ್ಟಿ ಅವರಿಗೆ ಸೇವಾ ರತ್ನ, ರಕ್ತದಾನಿ ಮಂಜು ಮೈಸೂರು ಅವರಿಗೆ ಜೀವ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸ್ಪರ್ಧೆಯಲ್ಲಿ ವಿವಿಧೆಡೆಯ 50ಕ್ಕೂ ಅಧಿಕ ಗಾಯಕ, ಗಾಯಕಿಯರು ಪಾಲ್ಗೊಂಡಿದ್ದರು. ಸರ್ವಕಲಾ ಸೇವಾ ಟ್ರಸ್ಟ್ ಅಧ್ಯಕ್ಷೆ ನೀಮಾ ಲೋಬೊ ಸ್ವಾಗತಿಸಿದರು. ಟ್ರಸ್ಟ್ ಕಾರ್ಯದರ್ಶಿ ಡಾ.ಜೋಸೆಫ್ ಲೋಬೊ ನಿರೂಪಿಸಿದರು. ಕೋಶಾಧಿಕಾರಿ ಜನಿಷ ಲೋಬೊ ವಂದಿಸಿದರು.
ಶಾಸಕ ಸುರೇಶ್ ಶೆಟ್ಟಿ ಗಾಯನ: ಪ್ರೇಕ್ಷಕರ ವಿನಂತಿ ಮೇರೆಗೆ ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಅವರು ಕರೋಕೆಯಲ್ಲಿ ಹಾಡಿದರು. ಗಾಯಕ ಮುಖೇಶ್ ಹಾಡಿರುವ ‘ಆ ಲೌಟ್ ಕೆ ಆಜಾ ಮೇರೆ ಮೀತ್’ ಹಿಂದಿ ಗೀತೆಯನ್ನು ಹಾಡಿ ರಂಜಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.