
ಉಡುಪಿ: ಮಂಗನ ಕಾಯಿಲೆಗೆ ಹೊಸ ಲಸಿಕೆ ತಯಾರಿಸುವ ಸಂಬಂಧ ಐಸಿಎಂಆರ್ ಜೊತೆ ಚರ್ಚಿಸಲಾಗಿದ್ದು, ಲಸಿಕೆ ತಯಾರಿಸಲು ಒಪ್ಪಿಗೆ ದೊರೆತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮಂಗನ ಕಾಯಿಲೆ ನಿಯಂತ್ರಣ ಕುರಿತು ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸಚಿವರು ಮಾತನಾಡಿದರು.
ಮಂಗನ ಕಾಯಿಲೆಗೆ ಹಳೆಯ ಲಸಿಕೆ ಬಳಸುವಂತಿಲ್ಲ ಎಂಬ ಆದೇಶದ ಹಿನ್ನೆಲೆಯಲ್ಲಿ ಹೊಸ ಲಸಿಕೆ ತಯಾರಿಸಲು ಐಸಿಎಂಆರ್ಗೆ 2 ತಿಂಗಳ ಹಿಂದೆ ಮನವಿ ಮಾಡಲಾಗಿತ್ತು. ಅದರಂತೆ, ಹೈದರಾಬಾದ್ನ ಇಂಡಿಯನ್ ಇಮ್ಯುನಾಲಜಿಕಲ್ ಸಂಸ್ಥೆ ಸಂಶೋಧನೆ ಹಾಗೂ ಲಸಿಕೆ ತಯಾರಿಸುವ ಹೊಣೆ ಹೊತ್ತಿದ್ದು, ಮುಂದಿನ ವರ್ಷ ಹೊಸ ಲಸಿಕೆ ಲಭ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವರ್ಷ ಮಂಗನ ಕಾಯಿಲೆಗೆ ಇಬ್ಬರು ಮೃತಪಟ್ಟಿದ್ದು, ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉತ್ತರ ಕನ್ನಡ 38, ಶಿವಮೊಗ್ಗ 25 ಹಾಗೂ ಚಿಕ್ಕಮಗಳೂರಿನಲ್ಲಿ 6 ಮಂದಿಗೆ ಕೆಎಫ್ಡಿ ಸೋಂಕು ದೃಢಪಟ್ಟಿದ್ದು, 20 ಸಕ್ರಿಯ ಪ್ರಕರಣಗಳು ಇವೆ. ಸೋಂಕಿತರ ಸಾವು ಸಂಭವಿಸದಂತೆ ಎಚ್ಚರಿಕೆ ವಹಿಸಲಾಗಿದ್ದು, ಅಗತ್ಯ ಔಷಧ ಪೂರೈಕೆ ಜತೆಗೆ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.