ಶಿರ್ವ: ಕೋವಿಡ್ ನಿಯಂತ್ರಣಕ್ಕೆ ಸರ್ಕಾರದ ನಿಯಮ ಪಾಲನೆ ಅಗತ್ಯ. ಕಷ್ಟ ಎನಿಸಿದರೂ ಇದನ್ನು ಪಾಲನೆ ಮಾಡಬೇಕು ಎಂದು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.
ಇಲ್ಲಿಗೆ ಸಮೀಪದ ಪಡುಕುತ್ಯಾರಿನ ಆನೆಗುಂದಿ ಮಠದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ನಡೆದ ಮಹಾಮೃತ್ಯುಂಜಯ, ಧನ್ವಂತರಿ ಮತ್ತು ನವಗ್ರಹ ಯಜ್ಞದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜ ಮತ್ತು ಮಹಾಸಂಸ್ಥಾನದ ಅಭಿವೃದ್ಧಿಗೆ ಪೂರಕವಾಗಿ ಎಲ್ಲರೂಸಂಘಟಿತರಾಗಿ ಕಾರ್ಯೋನ್ಮುಖರಾಗಬೇಕು. ಲಾಕ್ಡೌನ್ ವೇಳೆ ತೊಂದರೆಗೊಳಗಾದ ಆರ್ಥಿಕವಾಗಿ ಹಿಂದುಳಿದವರಿಗೆ ಪ್ರತಿಷ್ಠಾನದ ದೇವಸ್ಥಾನಗಳು, ಸಂಘ–ಸಂಸ್ಥೆಗಳು ನೆರವು ನೀಡಬೇಕು ಎಂದರು.
ಇದೇ ವೇಳೆ ಜಗದ್ಗುರುಗಳ ಪಟ್ಟಾಭಿಷೇಕ ಮಹೋತ್ಸವದ 11ನೇ ವರ್ಧಂತಿ ಮಹೋತ್ಸವದ ವೈದಿಕ ಕಾರ್ಯಕ್ರಮಗಳು, ಗುರುಪಾದುಕಾ ಪೂಜೆ, ಸ್ವರ್ಣ ಕಿರೀಟ ಧಾರಣೆ ಕಾರ್ಯಕ್ರಮಗಳು ನಡೆದವು. ಪಟ್ಟಾಭಿಷೇಕ ವರ್ಧಂತಿಯ ಸಲುವಾಗಿ ಗುರುಯಜ್ಞ, ವಿಶ್ವಕರ್ಮ ಯಜ್ಞ, ಸರಸ್ವತಿ ಯಜ್ಞಗಳನ್ನೂ ನೆರವೇರಿಸಲಾಯಿತು. ಮಹಾಸಂಸ್ಥಾನದ ವತಿಯಿಂದ ಆನ್ಲೈನ್ನಲ್ಲಿ ನಡೆಸಲಾದ ದಶದಿನ ಸಂಸ್ಕೃತಿ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ಶ್ರೀಧರ ಆಚಾರ್ಯ ಬಾರ್ಕೂರು ವಹಿಸಿದ್ದರು. ಉಪಾಧ್ಯಕ್ಷ ಕಳಿ ಚಂದ್ರಯ್ಯ ಆಚಾರ್ಯ, ಶಿಲ್ಪಿ ರಾಮಚಂದ್ರ ಆಚಾರ್ಯ ಅತ್ತೂರು ಕಾರ್ಕಳ, ಕೋಶಾಧಿಕಾರಿ ಅರವಿಂದ ಆಚಾರ್ಯ ಬೆಳುವಾಯಿ ಪ್ರತಿಷ್ಠಾನದ ವಿಶ್ವಸ್ಥರಾದ ಜಯಕರ ಪುರೋಹಿತ್ ಮೂಡಬಿದಿರೆ, ಶ್ರೀಧರ ಶರ್ಮಾ ಕಟಪಾಡಿ, ಲಕ್ಷ್ಮಿಕಾಂತ ಶರ್ಮಾ ತಂತ್ರಿ ಸಾಲಿಗ್ರಾಮ, ಅಕ್ಷಯ ಶರ್ಮಾ ಕಟಪಾಡಿ, ಪ್ರಕಾಶ ಶರ್ಮಾ ಬಾರ್ಕೂರು, ಗಿರೀಶ ಶರ್ಮಾ ನಾಕೂರು, ಪ್ರಶಾಂತ ಶರ್ಮಾ ಆಲೂರು, ಕೇಶವ ಶರ್ಮಾ ಭಾಗವಹಿಸಿದ್ದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ ಆಚಾರ್ ಕಂಬಾರು ಸ್ವಾಗತಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಕೆ.ಎಂ. ಗಂಗಾಧರ ಕೊಂಡೆವೂರು ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.